ಸಿರಿಗೆರೆ ಸಾಧು ಸದ್ಧರ್ಮ ಪೀಠಕ್ಕೆ ಪೀಠಾಧಿಕಾರಿ ನೇಮಕಗೊಳ್ಳುವ ವರೆಗೂ ಹೋರಾಟ ನಿಲ್ಲದು

| Published : Aug 14 2024, 12:50 AM IST

ಸಿರಿಗೆರೆ ಸಾಧು ಸದ್ಧರ್ಮ ಪೀಠಕ್ಕೆ ಪೀಠಾಧಿಕಾರಿ ನೇಮಕಗೊಳ್ಳುವ ವರೆಗೂ ಹೋರಾಟ ನಿಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದಾಗಬೇಕು, ಸಿರಿಗೆರೆಯ ಶ್ರೀಮದ್ ಸಾಧು ಸದ್ಧರ್ಮ ಪೀಠಕ್ಕೆ ನೂತನ ಪೀಠಾಧಿಕಾರಿಗಳ ನೇಮಕ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರ: ಏಕವ್ಯಕ್ತಿ ಟ್ರಸ್ಟ್ ಡೀಡ್ ರದ್ದಾಗಬೇಕು, ಸಿರಿಗೆರೆಯ ಶ್ರೀಮದ್ ಸಾಧು ಸದ್ಧರ್ಮ ಪೀಠಕ್ಕೆ ನೂತನ ಪೀಠಾಧಿಕಾರಿಗಳ ನೇಮಕ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಸಾಧು ಸದ್ಧರ್ಮ ವೀರಶೈವ ಸಮಾಜ ಸಭೆಯಲ್ಲಿ ಸಮಸ್ತ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವ ಬಂಧು ಮರುಳುಸಿದ್ದರು ಸ್ಥಾಪಿಸಿದ ಶ್ರೀಮದ್ ಸಾಧು ಸದ್ಧರ್ಮ ಸಮಾಜಕ್ಕೆ ಭವ್ಯವಾದ ಪರಂಪರೆ ಇದೆ. ಲಕ್ಷಾಂತರ ಸಮುದಾಯವನ್ನು ಹೊಂದಿದ ಈ ಮಠ ರಾಜ್ಯದಲ್ಲಷ್ಟೇ ಅಲ್ಲದೆ ರಾಷ್ಟ್ರದಲ್ಲಿಯೂ ತನ್ನ ಸಮಯ ಪ್ರಜ್ಞೆ ಹಾಗೂ ಶಿಸ್ತಿಗೆ ಹೆಸರುವಾಸಿಯಾಗಿದೆ. ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳು ಜಗ್ಗದೆ ಬಗ್ಗದೆ ಬಡತನದ ಸಮಾಜದಲ್ಲಿ ನೊಂದು ಬೆಂದು ಈ ಸಮಾಜವನ್ನು ಕಟ್ಟಿ ಬೆಳೆಸಿದರು. ಶರಣರು ಕಂಡ ಈ ಸಮಾಜವನ್ನು ಮತ್ತೆ ಕಟ್ಟಬೇಕೆಂದು ಶ್ರಮಿಸಿದವರು. ಆದರೆ ಈ ಮಠ ಇಂದು ಓರ್ವ ಏಕವ್ಯಕ್ತಿಯ ಕೈಯಲ್ಲಿ ಸಿಕ್ಕು ನಲುಗಿದೆ. ಅದರಿಂದ ಪಾರು ಮಾಡಬೇಕೆಂಬುದೇ ನಮ್ಮ ಸಮಾಜದ ಸದ್ಭಕ್ತರ ಆಶಯವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟರು.

ಸಭೆಯಲ್ಲಿ ದಾವಣಗೆರೆಯ ಖ್ಯಾತ ಉದ್ಯಮಿ ಅಣಬೇರು ರಾಜಣ್ಣನವರು ಮಾತನಾಡಿ, ವೈಚಾರಿಕ ಪರಂಪರೆಗೆ ನಾಂದಿ ಹಾಡಿದ ಹಾಗೂ ಬಸವೇಶ್ವರರು ಕಟ್ಟ ಬಯಸಿದ ಸಮಸಮಾಜ ನಿರ್ಮಾಣವಾಗಬೇಕು. ನಾವು ಈಗಿರುವ ಪೂಜ್ಯರ ಧೋರಣೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಒಪ್ಪುವುದಾದರೆ ಈಗಿರುವ ಪೂಜ್ಯರು ತಾವೇ ಸ್ವತಃ ರಚಿಸಿಕೊಂಡ ಡೀಡ್ ರದ್ದು ಪಡಿಸಬೇಕು, ಬೃಹನ್ ಮಠದ ಹಳೆಯ ಡೀಡಿನ ಪ್ರಕಾರ ನೂತನ ಪೀಠಾಧಿಪತಿಯನ್ನು ಆಯ್ಕೆ ಮಾಡಬೇಕು ಹಾಗೂ ಪೂಜ್ಯರು ನಿವೃತ್ತಿ ಘೋಷಣೆ ಮಾಡಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟ ಉಗ್ರವಾಗಿರುತ್ತದೆ ಎಚ್ಚರಿಸಿದರು.ಸಭೆಯಲ್ಲಿ ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ್, ಶಿಕಾರಿಪುರ ತಾಲೂಕಿನ ಸಾಧು ಸಮಾಜದ ಅಧ್ಯಕ್ಷರಾದ ಚಂದ್ರಪ್ಪ ಜಂಬೂರ, ರಾಣಿಬೆನ್ನೂರು ತಾಲೂಕಿನ ಸಮಾಜದ ಮಾಜಿ ಅಧ್ಯಕ್ಷರಾದ ಮಲ್ಲೇಶಪ್ಪ ಅರಿಕೇರಿ, ರಟ್ಟಿಹಳ್ಳಿ ತಾಲೂಕಿನ ಸಮಾಜದ ಅಧ್ಯಕ್ಷರಾದ ಮಾಲತೇಶ್ ಗಂಗೋಳ, ಸಮಾಜದ ಮುಖಂಡರಾದ ಎಸ್.ಬಿ. ತಿಪ್ಪಣ್ಣನವರ್, ಬಿ.ಎನ್. ಬಣಕಾರ್, ಜಟ್ಟಪ್ಪ ಕರೆಗೌಡ್ರು, ಕೆ.ಬಿ. ಬಾಳಿಕಾಯಿ, ಪ್ರಕಾಶ್ ಗೌಡ ಗೌಡರ್, ಜಯಣ್ಣ ಹೊಳೆ ಅನ್ವೇರಿ, ಆರ್.ಎನ್. ಗಂಗೋಳ್, ಆರ್.ಎನ್. ಬಾಳಿಕಾಯಿ, ದೊಡ್ಡ ಗೌಡ್ರು ಪಾಟೀಲ್ ಹಾಗೂ ಹಿರೇಕೆರೂರು, ರಾಣಿಬೆನ್ನೂರು, ಬ್ಯಾಡಗಿ, ಶಿಕಾರಿಪುರ ತಾಲೂಕುಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.