ಸಾರಾಂಶ
ಶ್ರೀ ವೆಂಕಟೇಶ್ವರ ಯಕ್ಷಗಾನ ಮಂಡಳಿ 49 ನೇ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಶೃಂಗೇರಿನವರಸ ಕಲೆಗಳ ಪ್ರಮುಖ ಕಲೆಯಾಗಿರುವ ಯಕ್ಷಗಾನ ಅದ್ಭುತ ಕಲಾ ಪ್ರಾಕಾರ. ಹಿಂದಿನಿಂದಲೂ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಯಕ್ಷಗಾನದ ಉಳಿವು ಪ್ರೇಕ್ಷಕರ ಕೈಯಲ್ಲಿದೆ ಎಂದು ಯಕ್ಷಗಾನ ಕಲಾವಿದ ನಾಗೇಶ್ ಕಾಮತ್ ಹೇಳಿದರು.
ತಾಲೂಕಿನ ಹೊನ್ನವಳ್ಳಿಯ ಹೊಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರ ಯಕ್ಷಗಾನ ಮಂಡಳಿ 49 ನೇ ವಾರ್ಷಿಕೋತ್ಸವ ಅಂಗವಾಗಿ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಯಕ್ಷಗಾನ ಬಯಲಾಟ ಪ್ರದರ್ಶನದಲ್ಲಿ ಮಾತನಾಡಿದರು. ಯಕ್ಷಕಲೆ ದಕ್ಷಿಣ ಕನ್ನಡದಲ್ಲಿ ಹುಟ್ಟಿದರೂ ಮಲೆನಾಡಿನಲ್ಲಿ ಹೆಚ್ಚಿನ ಜನಮನ್ನಣೆ ಹಾಗೂ ಪ್ರೇಕ್ಷಕ ವರ್ಗವನ್ನು ಹೊಂದಿದೆ ಎಂದರು.ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕಥಾವಸ್ತುಗಳನ್ನು ಹೊಂದಿರುವ ಯಕ್ಷಗಾನ ಪ್ರಸಂಗಗಳು ಪ್ರೇಕ್ಷಕನ ಮನಮುಟ್ಟುವ ಜೊತೆಗೆ ಸಮಾಜದಲ್ಲಿ ಉತ್ತಮ ಸಂದೇಶ ಪ್ರಸಾರ ಮಾಡುತ್ತಿದೆ. ನಮ್ಮ ಧರ್ಮ, ಸಂಸ್ಕೃತಿ, ಕಲೆ ಪರಂಪರೆಯನ್ನು ಉಳಿಸಿ ಬೆಳೆಸುತ್ತಿದೆ. ಕಲೆ ಜೊತೆ ಕಲಾವಿದರ ಬದುಕು ಕಟ್ಟಿಕೊಡಲು ವೃತ್ತಿಯಾಗಿಯೂ ಇದೆ. ಪ್ರಸಂಗಗಳು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಥಾವಸ್ತು, ಯಕ್ಷಗಾನ ಪದ್ಯಗಳು, ಧಾರ್ಮಿಕ ದೇವಾನುದೇವತೆಗಳ ಕಥೆಗಳು, ಹಾಸ್ಯಗಳು ಹೀಗೆ ಎಲ್ಲಾ ರೀತಿ ಯಿಂದಲೂ ಪ್ರೇಕ್ಷಕನ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಯಕ್ಷಗಾನ ಕಲೆಯನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಕ್ಷಗಾನ ಬಯಲಾಟಗಳು ಹೆಚ್ಚು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಯಲಾಟ ಗಳನ್ನು ಹೆಚ್ಚು ಆಡಿಸಬೇಕು. ಇದು ಒಂದೆಡೆಯಿಂದ ಇತರೆ ಕಡೆಗಳಿಗೆ ಪ್ರಚಾರವಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಮಲೆನಾಡಿನ ಹಿರಿಯ ಯಕ್ಷಗಾನ ಅರ್ಥಧಾರಿ ಶ್ರೀ ಶೇಷಗಿರಿಯಪ್ಪ ಬೈಲುಕೊಪ್ಪ, ಭಾಗವತ ಶ್ರಿ ಕೃಷ್ಣ ಮೂರ್ತಿ ಕಿತ್ಲೆಬೈಲು ಸೇರಿದಂತೆ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಶ್ರೀ ವೆಂಕಟೇಶ್ವರ ಯಕ್ಷಗಾನ ಮಂಡಳಿ ಕಲಾವಿದರಿಂದ ಶ್ರೀ ಹರಿ ಸಾಕ್ಷಾತ್ಕಾರ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶೇಷಗಿರಿ ರಾವ್, ವೆಂಕಟೇಶ್ ಆಚಾರ್ಯ, ನರಸಿಂಹಮೂರ್ತಿ, ಜನಾರ್ದನ ಮತ್ತಿತರರು ಇದ್ದರು.
7 ಶ್ರೀ ಚಿತ್ರ 1-ಶೃಂಗೇರಿ ಹೊನ್ನವಳ್ಳಿ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸನ್ಮಾನ, ಯಕ್ಷಗಾನ ಪ್ರದರ್ಶನದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.