ಸಾರಾಂಶ
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎರ್ಮಾಳು ಬಡಾ ಗ್ರಾಮದ ಅಕ್ಕಪಕ್ಕದ ಮನೆಯ ಕಿರಣ್ ಕುಮಾರಿ (52) ಮತ್ತು ಪ್ರಮೋದಾ (69) ಎಂಬ ಮಹಿಳೆಯರಿಗೆ ಕಾಪು ತಾಲೂಕು ತಹಸೀಲ್ದಾರ್ ಡಾ. ಪ್ರತಿಭಾ ಆರ್. ಅವರು ಸ್ವತಃ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಪು
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎರ್ಮಾಳು ಬಡಾ ಗ್ರಾಮದ ಅಕ್ಕಪಕ್ಕದ ಮನೆಯ ಕಿರಣ್ ಕುಮಾರಿ (52) ಮತ್ತು ಪ್ರಮೋದಾ (69) ಎಂಬ ಮಹಿಳೆಯರಿಗೆ ಕಾಪು ತಾಲೂಕು ತಹಸೀಲ್ದಾರ್ ಡಾ. ಪ್ರತಿಭಾ ಆರ್. ಅವರು ಸ್ವತಃ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ.ಈ ಈರ್ವರು ಮಹಿಳೆಯರನ್ನು ಆಧಾರ್ ಕೇಂದ್ರಕ್ಕೆ ಕರೆತರಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಆಧಾರ್ ಕಾರ್ಡ್ ಇಲ್ಲದ ಕಾರಣ ಸರ್ಕಾರದ ಯಾವುದೇ ಯೋಜನೆಗಳು, ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಕಿರಣ ಕುಮಾರಿ ಅವರ 75 ವರ್ಷದ ವೃದ್ಧೆ ತಾಯಿ ಮತ್ತು ಪ್ರಮೋದ ಅವರ ಪೋಷಕರು ತಹಸೀಲ್ದಾರರ ಕಚೇರಿಗೆ ಬಂದು ಅಳಲು ತೋಡಿಕೊಂಡಿದ್ದರು.ಇದನ್ನು ಮನಗಂಡು ತಹಸೀಲ್ದಾರ್ ಡಾ.ಪ್ರತಿಭಾ, ಆಧಾರ್ ಕೇಂದ್ರವನ್ನೇ ಅವರ ಮನೆಗೆ ಕೊಂಡೊಯ್ಯುವ ಏರ್ಪಾಟು ಮಾಡಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಅಲ್ಲದ ಅವರಿಬ್ಬರಿಗೂ ಪಿಂಚಣಿ ದೊರಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ. ಈ ಕಾರ್ಯಕ್ಕೆ ಆಧಾರ್ ಆಪರೇಟರ್ ಸಂಧ್ಯಾ, ಆಧಾರ್ ಕೇಂದ್ರದ ಇಸ್ಮಾಯಿಲ್ ಫಲಿಮಾರು, ಗ್ರಾಮ ಪಂಚಾಯಿತಿ ಸದಸ್ಯರಾದ ದೀಪಕ್ ಎರ್ಮಾಳ್, ಅಜೀಜ್ ಹೆಜಮಾಡಿ ಸಹಕರಿಸಿದ್ದರು.