ಗಂಗಾವತಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಗಂಗಾವತಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ದೇಶಭಕ್ತಿ ಮತ್ತು ಶೌರ್ಯದ ಸ್ಮರಣೆಯೊಂದಿಗೆ ಆಚರಿಸಲಾಯಿತು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿ ಸಚಿನ್ ಕುಳಗೇರಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ಪ್ರದರ್ಶಿಸಿದ ಅಪ್ರತಿಮ ಸಾಹಸ, ತ್ಯಾಗ ಮತ್ತು ದೇಶ ಪ್ರೇಮವು ಪ್ರತಿಯೊಬ್ಬ ಯುವಕರಿಗೂ ಸ್ಫೂರ್ತಿಯಾಗಬೇಕು. ದೇಶದ ಭದ್ರತೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ಸದಾ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.ನಗರ ಘಟಕದ ಅಧ್ಯಕ್ಷೆ ಡಾ. ಅರ್ಚನಾ ಹಿರೇಮಠ ಮಾತನಾಡಿ, ದೇಶದ ಏಕತೆ, ಅಖಂಡತೆ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಕೀಲರಾದ ನಾಗರಾಜ್ ಗುತ್ತೇದಾರ ಅವರು ಕಾರ್ಗಿಲ್ ವಿಜಯದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ, ದೇಶಕ್ಕಾಗಿ ತ್ಯಾಗ ಮಾಡಿದ ವೀರ ಯೋಧರ ಜೀವನ ಯುವಜನತೆಗೆ ಆದರ್ಶವಾಗಿದೆ ಎಂದು ಹೇಳಿದರು.ಎಸ್ಎಫ್ಎಸ್ ರಾಜ್ಯ ಸಂಚಾಲಕ ಅಭಿಷೇಕ್ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರಸೇವೆಯ ಮನೋಭಾವ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮುಲು ಕಾಲೇಜಿನ ಉಪ ಪ್ರಾಂಶುಪಾಲ ಸೋಮಶೇಖರ್ ಜೆ.ಸಿ. ಅವರು, ಎಬಿವಿಪಿಯ ಸಾಮಾಜಿಕ ಹಾಗೂ ರಾಷ್ಟ್ರೀಯ ಚಟುವಟಿಕೆ ಶ್ಲಾಘಿಸಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಎಬಿವಿಪಿ ಕಾರ್ಯಕರ್ತರಾದ ಕಿರಣ್ ವಸ್ತ್ರದ್, ಪೃಥ್ವಿ, ವಿನಾಯಕ, ನಂದಿತಾ, ದೀಪಾ, ಬೆಟ್ಟಪ್ಪ, ರಾಹುಲ್, ಪವನ್, ಅಧ್ಯಾಪಕ ಶಂಕರ, ಯಲ್ಲಾಲಿಂಗ, ಪ್ರಿಯಾಂಕಾ, ವಿರೂಪಮ್ಮ, ಸೌಂದರ್ಯಾ ಉಪಸ್ಥಿತರಿದ್ದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಮೌನಾಚರಣೆ ಸಲ್ಲಿಸಿ, ಗೌರವ ನಮನ ಸಲ್ಲಿಸಲಾಯಿತು.