ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಮಾಜದಲ್ಲಿ ಕಷ್ಟ, ತಪ್ಪುಗಳನ್ನು ಸಹಿಸಿಕೊಂಡು ಹಿರಿಯರು ಉತ್ತಮ ಜೀವನ ನಡೆಸುತ್ತಿರುವುದರಿಂದ ಇಂದಿಗೂ ನಾಡಿನಲ್ಲಿ ಮಾನವೀಯತೆ ಮೌಲ್ಯಗಳು ಜೀವಂತವಾಗಿವೆ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು.ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರ ಮತ್ತು ನವಗ್ರಹ ದೇವರ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕೆಲವೊಮ್ಮೆ ಆಗುವ ತಪ್ಪುಗಳನ್ನು ಸಹಿಸಿಕೊಳ್ಳದೇ ಎಲ್ಲರೂ ಒಂದೇ ರೀತಿ ಆಗಿದ್ದರೆ ಸಮಾಜ ಉಳಿಯಲು ಸಾಧ್ಯವಾಗಿರುತ್ತಿರಲಿಲ್ಲ ಎಂದರು.
ಎಲ್ಲರೂ ಒಂದೇ ಎನ್ನುವ ರೀತಿ ಗ್ರಾಮದಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡಿ, ದೇವರ ಪ್ರೇರೇಪಣೆಯಿಂದ ಮಾದರಿ ಬದುಕು ನಡೆಸುತ್ತಿದ್ದೀರಾ. ಕೆಟ್ಟ ವ್ಯಕ್ತಿಗಳು ಇರುವುದೇ ಕೆಟ್ಟದ್ದನ್ನು ಮಾಡಿ ಕಿರುಕುಳ ನೀಡುವುದಕ್ಕೆ, ಅದನ್ನು ಸಹಿಸಿಕೊಂಡು ಭಗವಂತನನ್ನು ಬೇಡಿಕೊಂಡರೆ ಎಲ್ಲವೂ ಒಳ್ಳೆಯದಾಗಲಿದೆ ಎಂದು ಹೇಳಿದರು.500 ವರ್ಷಗಳ ಹಿಂದೆ ಶ್ರೀರಾಮ ಜನ್ಮಸ್ಥಳದಲ್ಲಿ ದೇವಸ್ಥಾನವನ್ನು ಕೆಡವಿ ಅವರ ವಿಗ್ರಹವನ್ನು ದುಷ್ಟ ವ್ಯಕ್ತಿಗಳು ಅಲ್ಲಿಂದ ಎತ್ತಿಕೊಂಡು ಹೋಗಿ ಬಿಸಾಕಿದ್ದರು. ಇದೀಗ ನಮಗೆ ಕಾನೂನಿನ ಪ್ರಕಾರ ಅದನ್ನು ಪುನರ್ ಸ್ಥಾಪನೆ ಮಾಡುವ ಸೌಭಾಗ್ಯ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯವಾಗಿದೆ ಎಂದರು.
ರಾಮ ಬದುಕಿದ್ದ ಸ್ಥಳದಲ್ಲಿಯೇ ಮಂದಿರ ನಿರ್ಮಾಣವಾಗಿ ನ್ಯಾಯ ಸಿಕ್ಕಿದೆ. ಗ್ರಾಮದಲ್ಲೂ ಶ್ರೀರಾಮ ಸ್ಥಾಪನೆ ಕಾರ್ಯ ಶ್ಲಾಘನೀಯ. ಮಾಜಿ ಶಾಸಕ ದಿ.ವೀರೇಗೌಡ ಅವರ ಕಾಲದಿಂದಲೂ ಹಿಟ್ಟನಹಳ್ಳಿಕೊಪ್ಪಲು ಬಹಳ ಹೆಸರು ಮಾಡಿದೆ ಎಂದು ಹೇಳಿದರು.ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಗ್ರಾಮಸ್ಥರೆಲ್ಲರೂ ಸೇರಿ ರಾಮಮಂದಿರ ನಿರ್ಮಾಣವನ್ನು ಮಾಡಿದ್ದೀರಾ. ಜನರ ಒಗ್ಗಟ್ಟು ಹೀಗೆ ಇರಲಿ. ಗ್ರಾಮದ ಅಭಿವೃದ್ಧಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ 20 ಲಕ್ಷ ರು. ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಯಾನವನ ಅಭಿವೃದ್ಧಿಗೆ 10 ಲಕ್ಷ ರು.ಅನುದಾನ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ನಾನು ಮಳವಳ್ಳಿಯ ಹುಚ್ಚೇಗೌಡರ ಸೊಸೆ. ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಅಂಬರೀಶ್ ಅವರ ಕಾಲದ ಅಭಿವೃದ್ಧಿ ಕೆಲಸಗಳನ್ನು ಜನರು ಇಂದಿಗೂ ನೆನೆಯುತ್ತಾರೆ. ಗ್ರಾಮದಲ್ಲಿ ಅಂಬರೀಶ್ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಜನರ ಪ್ರೀತಿ ಗಳಿಸಿ ಅದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟವಾಗಿರುವ ಸಂದರ್ಭದಲ್ಲಿ ನಿಮ್ಮೆಲ್ಲರ ಅಭಿಮಾನ ದೊಡ್ಡದು ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನಮಠದ ನಿಶ್ಚಲಾನಂದಸ್ವಾಮೀಜಿ ಮಾತನಾಡಿ, ಗ್ರಾಮದ ಜನರಿನಲ್ಲಿನ ಒಗ್ಗಟ್ಟು ಇತರರಿಗೆ ಮಾದರಿಯಾಗಿದೆ. ಜಾತಿ, ಪಕ್ಷ ಭೇದ ಮರೆತು ಒಂದೆಡೆ ಸೇರಿ ಉತ್ತಮವಾದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಅನೇಕ ದಾನಿಗಳು ನೆರವು ನೀಡಿದ್ದಾರೆ. ದೇವಸ್ಥಾನಗಳು ಜನರಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ಮುಂದಿನ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಸೇರಿ ಕೆಲಸ ಮಾಡುವಂತಾಗಲಿದೆ ಎಂದು ಆಶಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸ್ವಾಮೀಜಿ ಹಾಗೂ ಅತಿಥಿಗಳನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.ರಾಮಮಂದಿರ ಸೇವಾ ಸಮಿತಿ ಅಧ್ಯಕ್ಷ ಎಚ್.ಎಂ.ಮಂಚಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದ ಮಂಚಮ್ಮ ದೇವಸ್ಥಾನ ಪುನರ್ ನಿರ್ಮಾಣ ಕಾರ್ಯಕ್ಕೆ ಎಲ್ಲ ಮುಖಂಡರು ನೆರವು ನೀಡಬೇಕು ಎಂದು ಮನವಿ ಮಾಡಿದರು.
ರಾಮನಗರ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಚ್.ಎಂ.ನಾಗರಾಜು, ಗ್ರಾಮದ ಪಟೇಲ್ ಚಿಕ್ಕಮೂಗೇಗೌಡ, ಕೃಷ್ಣಕುಮಾರ್, ಎಚ್.ಕೆ.ಪುಟ್ಟಯ್ಯ, ಕುಮರಸ್ವಾಮಿ ಅವರನ್ನು ಅಭಿನಂದಿಸಲಾಯಿತು.ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮು, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲಕ್ಷ್ಮೀಅಶ್ವಿನ್ ಗೌಡ, ಮುಖಂಡರಾದ ಎಚ್.ಸಿ.ಮಂಜುನಾಥ್, ಎಚ್.ಬಿ.ಬಸವೇಶ್, ವೀರೇಶ್ ಗೌಡ, ಬೇಲೂರು ಸೋಮಶೇಖರ್, ಎಚ್.ಆರ್.ಅಶೋಕ್ ಕುಮಾರ್, ಎಂ.ಎನ್.ಕೃಷ್ಣ, ಆನಕೆರೆ ಶಶಿ, ಬಾಲರಾಜು, ಪ್ರಮೋದ್ ಪಾಲ್ಗೊಂಡಿದ್ದರು.