The victory of the brothers due to BJP-intimate agreement
-ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಆರೋಪ । ಶಿಕಾರಿಪುರ ಅಸೆಂಬ್ಲಿ, ಲೋಕಸಭೆಯಲ್ಲಿ ವಿಜಯೇಂದ್ರ, ರಾಘವೇಂದ್ರ ಗೆಲುವು
--ಕನ್ನಡಪ್ರಭ ವಾರ್ತೆ ಸೊರಬ
ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಳೆದ ಚುನಾವಣೆಯಲ್ಲಿ ಒಳಒಪ್ಪಂದದ ರಾಜಕಾರಣ ನಡೆದಿದೆ. ಈ ಕಾರಣದಿಂದಲೇ ಶಿಕಾರಿಪುರ ವಿಧಾನಸಭೆ ಮತ್ತು ಶಿವಮೊಗ್ಗ ಲೋಕಸಭೆಯಲ್ಲಿ ಅಣ್ಣ-ತಮ್ಮ ಗೆಲುವು ಸಾಧಿಸಿರುವುದು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಆರೋಪಿಸಿದರು.ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಿಕಾರಿಪುರದಲ್ಲಿ ಸಮರ್ಥ, ಗೆಲುವು ಸಾಧಿಸಬಲ್ಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬದಲು ಅಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಅಲ್ಲದೇ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಗೀತಾ ಶಿವರಾಜ್ಕುಮಾರ್ ಎನ್ನುವ ಡಮ್ಮಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಗೆಲ್ಲಲು ನೆರವಾಗಿದೆ. ಇಂಥ ಚಾಣಾಕ್ಷ ರಾಜಕಾರಣವನ್ನು ಕಾಂಗ್ರೆಸ್ನೊಂದಿಗೆ ಬಿ.ವೈ. ವಿಜಯೇಂದ್ರ ಮತ್ತು ಬಿ.ವೈ. ರಾಘವೇಂದ್ರ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದಿಗೂ ಬಿಜೆಪಿಯ ಸರ್ವಶ್ರೇಷ್ಠರು. ರಾಜ್ಯದಲ್ಲಿ ಮುಂದಿನ ಚುನಾವಣೆಗಳಲ್ಲೂ ಅವರ ನೃತ್ವತ್ವದಲ್ಲಿಯೇ ನಡೆಯುತ್ತವೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲೆಯ ಸಂಸದರು ತಮ್ಮ ಗೆಲುವಿಗಾಗಿ ಕಾಂಗ್ರೆಸ್ನೊಂದಿಗೆ ಕಮಿಟ್ಮೆಂಟ್ ರಾಜಕಾರಣಕ್ಕೆ ಇಳಿಸಿದ್ದಾರೆ. ಅವರ ವಿರುದ್ಧ ಮಾತನಾಡುವವರನ್ನು ಪಕ್ಷ ವಿರೋಧಿ ಚಟುವಟಿಕೆ ಅಂಥ ಹೊರಹಾಕುತ್ತಾರೆ. ಶಾಸಕ ಬಸನಗೌಡ ಪಾಟೀಲ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿರುವುದೇ ಸಾಕ್ಷಿಯಾಗಿದೆ ಎಂದ ಅವರು, ಬಿಡದಿ ಟೌನ್ ಶಿಪ್ ಬಗ್ಗೆ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಿದರೆ ಬಿಜೆಪಿ ರಾಜ್ಯಾಧ್ಯಕ್ಷರು ತಮಗೇನೂ ಗೊತ್ತಿಲ್ಲವೆಂಬಂತೆ ನಟಿಸುತ್ತಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೂ ಒಳಒಪ್ಪಂದ ನಡೆದಿದೆ ಎಂದು ಆರೋಪಿಸಿದರು.ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಅದ್ವಾನಗೊಂಡಿದೆ. ಆನವಟ್ಟಿ ಬಸ್ನಿಲ್ದಾಣ ಕಾಮಗಾರಿ ಸಹ ಮುಗಿದಿದ್ದು, ಉದ್ಘಾಟನೆಗೊಂಡಿಲ್ಲ. ಸೊರಬ-ಶಿರಾಳಕೊಪ್ಪ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇಂದಿಗೂ ಗುಂಡಿಗೊಟರುಗಳಿಂದ ವಾಹನಗಳು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರು ಹಾರ ತುರಾಯಿ ಹಾಕಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರದಿಂದ ಎಷ್ಟು ಹಣ ತಂದು ರಸ್ತೆ, ಚರಂಡಿ, ಬಿಲ್ಡಿಂಗ್ ಮಾಡಿದ್ದಾರೆ ಎನ್ನುವುದನ್ನು ಸಾರ್ವಜನಿಕರಿಗೆ ಲೆಕ್ಕ ನೀಡಲಿ ಎಂದರು.
ತಾಲೂಕಿನಲ್ಲಿ ಮಳೆ ಶೇ. ೩೦ ರಷ್ಟು ಮಾತ್ರ ಆಗಿದೆ. ಬರದ ಛಾಯೆ ಎದುರಾಗಿದೆ. ನಾಟಿ ಮಾಡಿದ ರೈತರು ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ಮಳೆ-ಬಿಸಿಲಿನ ವಾತಾವರಣದಿಂದ ಅಡಿಕೆಗೆ ಎಲೆಚುಕ್ಕಿ ರೋಗಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಈಗಾಗಲೇ ಬರದ ಬಗ್ಗೆ ಸಮೀಕ್ಷೆ ನಡೆಸಿರುವ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ರಾಜ್ಯ ಸರ್ಕಾರಕ್ಕೆ ಪಟ್ಟಿ ನೀಡಿ, ರೈತರಿಗೆ ಪರಿಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ. ಉಮೇಶ, ಮುಖಂಡ ಪ್ರಭಾಕರ ರಾಯ್ಕರ್, ಮಲ್ಲಿಕಾರ್ಜುನ ವೃತ್ತಿಕೊಪ್ಪ, ವಕೀಲ ಕೃಷ್ಣಮೂರ್ತಿ, ಬರಗಿ ನಿಂಗಪ್ಪ, ಕೆ.ಜಿ. ಬಸವರಾಜ ಕೊಡಕಣಿ, ಶಿವನಗೌಡ್ರು, ಗುರುಮೂರ್ತಿ ಹಿರೇಶಕುನ, ಅಶೋಕ್ ಶೇಟ್ ಹಾಜರಿದ್ದರು.
-----ಫೋಟೊ: ೧೮ಕೆಪಿಸೊರಬ-೦೧
ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.