ಸಾರಾಂಶ
ಪ್ರಯಾಣಿಕರ ಜೀವ ರಕ್ಷಣೆಯ ಹೊಣೆ ಹೊತ್ತು, ನಿತ್ಯ ನೂರಾರು ಕಿ.ಮೀ. ಸಂಚರಿಸುವ ಸರ್ಕಾರಿ ಬಸ್ ಚಾಲಕರ ಕಾರ್ಯ ಶ್ಲಾಘನೀಯ ಎಂದು ಹಿರಿಯ ನಿವೃತ್ತ ಕೆ.ಬಿ.ಜೆ.ಎನ್.ಎಲ್ ನೌಕರ ಮೋಹನರಾವ ಕುಲಕರ್ಣಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸುರಪುರ
ಪ್ರಯಾಣಿಕರ ಜೀವ ರಕ್ಷಣೆಯ ಹೊಣೆ ಹೊತ್ತು, ನಿತ್ಯ ನೂರಾರು ಕಿ.ಮೀ. ಸಂಚರಿಸುವ ಸರ್ಕಾರಿ ಬಸ್ ಚಾಲಕರ ಕಾರ್ಯ ಶ್ಲಾಘನೀಯ ಎಂದು ಹಿರಿಯ ನಿವೃತ್ತ ಕೆ.ಬಿ.ಜೆ.ಎನ್.ಎಲ್ ನೌಕರ ಮೋಹನರಾವ ಕುಲಕರ್ಣಿ ಅಭಿಪ್ರಾಯಪಟ್ಟರು.ತಾಲೂಕಿನ ಕೆಂಭಾವಿ ಪಟ್ಟಣದ ಚಂಪಾ ಆರ್ಟ್ ಗ್ಯಾಲರಿ ವತಿಯಿಂದ ನಿವೃತ್ತರಾದ ಕೆ.ಎಸ್.ಆರ್.ಟಿ.ಸಿ ಚಾಲಕ ಖಾಜಾಹುಸೇನ್ ನಾಶಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸತತ 42 ವರ್ಷಗಳ ಕಾಲ ಕೆ.ಎಸ್.ಆರ್.ಟಿ.ಸಿ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ರಾಜ್ಯಮಟ್ಟದಲ್ಲಿ ದಾಖಲೆ ನಿರ್ಮಿಸಿದರು ಎಂದರು.
ಬಸ್ ಚಾಲನೆ ಮಾಡುವುದು ಸುಲಭದ ಮಾತಲ್ಲ. ಗ್ರಾಮೀಣ ಪ್ರದೇಶದಿಂದ ಹಿಡಿದು, ನಗರ ಪ್ರದೇಶಗಳವರೆಗೂ ನಿತ್ಯ ನೂರಾರು ಕಿ.ಮೀ. ಚಾಲನೆ ಮಾಡಿ, ಪ್ರತಿಯೊಬ್ಬ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರವರ ಊರೂಗಳಿಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಬಸ್ ಚಾಲಕರ ಗುರಿಯಾಗಿರುತ್ತದೆ ಎಂದು ಗುಣಗಾನ ಮಾಡಿದರು.ನಿವೃತ್ತ ಬಸ್ ಚಾಲಕ ಖಾಜಾಹುಸೇನ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚಂಪಾ ಆರ್ಟ್ ಗ್ಯಾಲರಿಯ ಹಳ್ಳೇರಾವ ಕುಲಕರ್ಣಿ, ಜಯಾಚಾರ್ಯ ಪುರೋಹಿತ, ಶೇಷಗಿರಿರಾವ ಕುಲಕರ್ಣಿ, ಮಹಿಬೂಬಸಾಬ ನಾಶಿ, ಹಳ್ಳೇರಾವ ಎಚ್ ಕುಲಕರ್ಣಿ, ಪ್ರಮೋದ ನಾಡಿಗೇರ, ವಾದಿರಾಜ ಚನ್ನೂರ ಸೇರಿದಂತೆ ಇತರರಿದ್ದರು.