ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಯಾವುದೇ ದೇಶಕ್ಕೆ ಯುದ್ಧ ಅನಿವಾರ್ಯವಾಗಬಾರದು. ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಎಂಥ ಭಯಾನಕ ಪರಿಸ್ಥಿತಿಯಲ್ಲು ಭಾರತೀಯ ಯೋಧರು ಜೀವದ ಹಂಗು ತೊರೆದು ಹೋರಾಡಿ ನಾಗರಿಕರು ನೆಮ್ಮದಿಯಿಂದ ಜೀವಿಸುವಂತೆ ಮಾಡುತ್ತಿದ್ದಾರೆ ಎಂದು ಕೃಷಿ ಮಾರುಕಟ್ಟೆ ಶಿವಾನಂದ ಪಾಟೀಲ ಅಭಿಪ್ರಾಯ ಪಟ್ಟರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಯಾವುದೇ ದೇಶಕ್ಕೆ ಯುದ್ಧ ಅನಿವಾರ್ಯವಾಗಬಾರದು. ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಎಂಥ ಭಯಾನಕ ಪರಿಸ್ಥಿತಿಯಲ್ಲು ಭಾರತೀಯ ಯೋಧರು ಜೀವದ ಹಂಗು ತೊರೆದು ಹೋರಾಡಿ ನಾಗರಿಕರು ನೆಮ್ಮದಿಯಿಂದ ಜೀವಿಸುವಂತೆ ಮಾಡುತ್ತಿದ್ದಾರೆ ಎಂದು ಕೃಷಿ ಮಾರುಕಟ್ಟೆ ಶಿವಾನಂದ ಪಾಟೀಲ ಅಭಿಪ್ರಾಯ ಪಟ್ಟರು.ತಾಲೂಕಿನ ಉಕ್ಕಲಿ ಗ್ರಾಮದ ಹುತಾತ್ಮ ಸಿಆರ್ಪಿಎಫ್ ಎಸ್ಐ ದಿ.ಶ್ರೀಶೈಲ ಹಿರೋಡಗಿ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ವೀರ ಯೋಧರ ದೇಶಭಕ್ತಿ, ಬದ್ದತೆ ಸದಾ ಸ್ಮರಣೀಯ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯರನ್ನು ಎರಡು ಜಾಗತಿಕ ಯುದ್ಧದಲ್ಲಿ ತೊಡಗಿಸಿತ್ತು. ಆಗಲೇ ಭಾರತೀಯ ಯೋಧರ ಪರಾಕ್ರಮ ವಿಶ್ವಕ್ಕೆ ಮನವರಿಕೆ ಆಗಿದೆ ಎಂದರು.
ಸ್ವಾತಂತ್ರ್ಯ ನಂತರವೂ ಭಾರತದ ಯೋಧರು ಚೀನಾ, ಪಾಕಿಸ್ತಾನ ವಿರುದ್ಧ ನಡೆದ ಯುದ್ಧಗಳಲ್ಲಿ ಪರಾಕ್ರಮ ಮೆರೆದಿದ್ದಾರೆ. ನೆರೆಯ ದೇಶ ಅನಗತ್ಯವಾಗಿ ಯುದ್ಧದ ಪರಿಸ್ಥಿತಿ ನಿರ್ಮಿಸುತ್ತಿದೆ. ಇದಕ್ಕೆ ನಮ್ಮ ಯೋಧರೂ ತಕ್ಕ ಉತ್ತರ ನೀಡುತ್ತಲೇ ಬಂದಿದ್ದಾರೆ. ರಷ್ಯಾ-ಉಕ್ರೇನ್ ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ಧ ಉಲ್ಲೇಖಿಸಿದ ಸಚಿವರು, ಯಾವುದೇ ದೇಶ, ನಾಗರಿಕರು ಯುದ್ಧ ಬಯಸುವುದಿಲ್ಲ. ಪ್ರಸಕ್ತ ಸಂದರ್ಭದಲ್ಲಂತೂ ವಿಜ್ಞಾನದ ತಾಂತ್ರಿಕತೆ ಬೆಳೆದಂತೆ ಎಲ್ಲೋ ಕುಳಿತು ಹತ್ತಾರು ಸಾವಿರ ಕಿ.ಮೀ. ದೂರಕ್ಕೆ ಬಾಂಬ್ ಹಾಕುವ ತಂತ್ರಜ್ಞಾನ ಬೆಳೆದಿದೆ. ಆದರೆ ಯುದ್ಧಗಳು ಅಭಿವೃದ್ಧಿ ಪರ ದೇಶಗಳ ಪ್ರಗತಿಗೆ ಮಾರಕ ಎಂದು ವಿಶ್ಲೇಷಿಸಿದರು.ದೇಶದ 140 ಕೋಟಿ ನಾಗರಿಕರ ರಕ್ಷಣೆಗಾಗಿ ಭಾರತೀಯ ಸುಮಾರು 15-20 ಲಕ್ಷ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 14 ಲಕ್ಷ ಸೈನಿಕರು ಭೂದಳದಲ್ಲೂ, 1.5 ಲಕ್ಷದಷ್ಟು ಯೋಧರು ವಾಯುದಳದಲ್ಲೂ ಹಾಗೂ 1.5 ಲಕ್ಷ ಸೈನಿಕರು ನೌಕಾದಳದಲ್ಲೂ ಕರ್ತವ್ಯದ ನಿರ್ವಹಿಸುತ್ತಿದ್ದಾರೆ. ಯುದ್ಧ ಬೇಡವೆಂದರೂ ಭಾರತ ವಾರ್ಷಿಕವಾಗಿ ಸುಮಾರು ₹ 6 ಲಕ್ಷ ಕೋಟಿ ಹಣವನ್ನು ವ್ಯಯಿಸುತ್ತಿದೆ. ಒಂದೊಮ್ಮೆ ಯುದ್ದವೇ ನಡೆಯದಿದ್ದರೆ ಭಾರತ ಸಮೃದ್ಧ ರಾಷ್ಟ್ರವಾಗಿರುತ್ತಿತ್ತು ಎಂದು ವಿವರಿಸಿದರು.ಭಾರತಾಂಬೆಯ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ವೀರಯೋಧರನ್ನು ಪಡೆದಿರುವ ಉಕ್ಕಲಿ ಗ್ರಾಮಸ್ಥರೆ ಧನ್ಯರು, ಪುಣ್ಯವಂತರು. ದೇಶದ ಸೈನಿಕರೆಂದರೆ ದೇವರ ಸಮಾನರು. ಶ್ರೀಶೈಲ ಹಿರೋಡಗಿ ಅವರಂಥ ಅಮರವೀರ ಯೋಧರನ್ನು ಪಡೆದಿರುವ ನೀವೇ ಧನ್ಯರು ಎಂದರು.ಗ್ರಾಮದ ಹಿರಿಯ ಮುಖಂಡ ಅಣ್ಣಾಸಾಹೇಬ ಪಾಟೀಲ, ಪಂಡಿತ ಓಜಿ, ತಾಪಂ ಮಾಜಿ ಸದಸ್ಯ ಸುಭಾಶ ಕಲ್ಯಾಣಿ, ಉಕ್ಕಲಿ ಗ್ರಾಪಂ ಅಧ್ಯಕ್ಷ ಮುದಕಪ್ಪ ಸಿಂದಗಿ, ಗ್ರಾಮ ಪಂಚಾಯಿತಿ ಸದಸ್ಯರು, ಯೋಧನ ಕುಟುಂಬ ಸದಸ್ಯ ರಾವುತ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಮುತ್ತಪ್ಪ ನಂದಿ, ಯಲ್ಲಪ್ಪ ಈಟಿ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.