ಸಾರಾಂಶ
ಗ್ರಾಮದ ಹಾಲು ಕುರುಬ ಸಮಾಜದ ಚಿಕ್ಕಮ್ಮ ತಾಯಿ ಒಕ್ಕಲಿನವರು ಹಾಗೂ ತಾಲೂಕಿನ ಚಿಕ್ಕಮ್ಮ ತಾಯಿ ಒಕ್ಕಲಿನವರು ಗ್ರಾಮದಲ್ಲಿ ಹರಕೆ ಹೊತ್ತ ಸಾವಿರಾರು ಮೇಕೆಗಳನ್ನು ಬಲಿ ನೀಡಿದ ಬಳಿಕ ಮಾಂಸದೂಟವನ್ನು ಗ್ರಾಮಸ್ಥರು ಹಾಗೂ ನೆಂಟರು, ಸಂಬಂಧಿಕರಿಗೆ ಊಣ ಬಡಿಸುತ್ತಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಏಳು ವರ್ಷಗಳಿಗೊಮ್ಮೆ ನಡೆಯುವ ರಂಗದ ಹಬ್ಬ ಸೆ.24 ಮತ್ತು 25ರಂದು ನಡೆಯಲಿದ್ದು, ಗ್ರಾಮದ ಹಾಲುಮತಸ್ಥರು ರಂಗದ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.ಗ್ರಾಮದ ಚಿಕ್ಕಮ್ಮ ತಾಯಿ ರಂಗದ ಹಬ್ಬದಂದು ಸೆ.24ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಭಕ್ತರು ಗುತ್ತಿ ಚಿಕ್ಕಮ್ಮ ತಾಯಿಗೆ ಹರಕೆ ಒಪ್ಪಿಸಲಿದ್ದಾರೆ. ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಶ್ರೀ ಬೀರೇಶ್ವರನಿಗೆ ತಂಪಿನ ಪೂಜೆ ಮಾಡಲಿದ್ದಾರೆ.
ಮಂಗಳವಾರ ರಾತ್ರಿ 11 ಗಂಟೆಗೆ ಚಿಕ್ಕಮ್ಮ ತಾಯಿಗೆ ಹರಕೆ ಒಪ್ಪಿಸಿದ ನಂತರ ಸೆ.25 ರ ಬುಧವಾರ ಬೆಳಗ್ಗೆ 8 ಗಂಟೆಗೆ ದೇವಸ್ಥಾನದಲ್ಲಿ ಹರಕೆ ಹೊತ್ತ ಭಕ್ತರು ಬಾಯಿ ಬೀಗ ಹಾಕಿಸಿಕೊಳ್ಳಲಿದ್ದಾರೆ. ಬೆಳಗ್ಗೆ 9 ಗಂಟೆ ಬಳಿಕ ಚಿಕ್ಕಮ್ಮ ಮಾಲರಸಮ್ಮ ದೇವರ ಉತ್ಸವದಲ್ಲಿ ನಂದಿ ಕಂಭ, ಮಂಗಳವಾದ್ಯ, ಬಸವ, ಬಿರುದುಗಳ ಸಮೇತವಾಗಿ ದೇವರು ರಂಗಕ್ಕೆ ಹೋಗಲಿದೆ. ನಂತರ ಚಿಕ್ಕಾಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಉತ್ಸವ ಸಾಗಲಿದೆ.ಗ್ರಾಮದ ಹಾಲು ಕುರುಬ ಸಮಾಜದ ಚಿಕ್ಕಮ್ಮ ತಾಯಿ ಒಕ್ಕಲಿನವರು ಹಾಗೂ ತಾಲೂಕಿನ ಚಿಕ್ಕಮ್ಮ ತಾಯಿ ಒಕ್ಕಲಿನವರು ಗ್ರಾಮದಲ್ಲಿ ಹರಕೆ ಹೊತ್ತ ಸಾವಿರಾರು ಮೇಕೆಗಳನ್ನು ಬಲಿ ನೀಡಿದ ಬಳಿಕ ಮಾಂಸದೂಟವನ್ನು ಗ್ರಾಮಸ್ಥರು ಹಾಗೂ ನೆಂಟರು, ಸಂಬಂಧಿಕರಿಗೆ ಊಣ ಬಡಿಸುತ್ತಾರೆ.
ಕಳೆದ 2017ರಲ್ಲಿ ಚಿಕ್ಕಾಟಿ ಗ್ರಾಮದಲ್ಲಿ ರಂಗದ ಹಬ್ಬ ಆಚರಣೆ ನಡೆದಿತ್ತು. 2024ರ ಸೆ.24 ಮತ್ತು 25ರಂದು ಚಿಕ್ಕಮ್ಮ ತಾಯಿ ರಂಗದ ಹಬ್ಬ ನಡೆಯುವ ಹಿನ್ನೆಲೆ ಗ್ರಾಮದ ಹಾಲುಮತಸ್ಥರು ರಂಗದ ಹಬ್ಬದಲ್ಲಿ ತಲ್ಲೀನರಾಗಿದ್ದಾರೆ.