ಸಾರಾಂಶ
ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ 13ನೇ ವರ್ಷದ ರಂಗಹಬ್ಬದ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಯುವಜನರು ದಾರಿ ತಪ್ಪುವುದನ್ನು, ದುಶ್ಚಟಕ್ಕೆ ಬಲಿಯಾಗುವುದನ್ನು ತಡೆಯುವ ಕೆಲಸ ರಂಗಚಟುವಟಿಕೆ, ಸಮಾಜಮುಖಿ ಕಾರ್ಯಗಳಿಂದ ಆಗುತ್ತವೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಜಯಕರಶೆಟ್ಟಿ ಇಂದ್ರಾಳಿ ತಿಳಿಸಿದರು.ಅವರು ಶನಿವಾರ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ 13ನೇ ವರ್ಷದ ರಂಗಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಣ್ಣಪ್ರಾಯದಲ್ಲಿಯೇ ಹಾಡು, ನೃತ್ಯ, ನಾಟಕಗಳಲ್ಲಿ ತೊಡಗಿಸಿಕೊಳ್ಳುವವರು ದಾರಿ ತಪ್ಪುವುದಿಲ್ಲ. ದುರಭ್ಯಾಸಗಳಿಗೆ ಒಳಗಾಗುವುದಿಲ್ಲ. ರಂಗ ಸಂಸ್ಥೆಗಳು ಕಲೆಯನ್ನು ಕಲಿಸುವುದರ ಜೊತೆಗೆ ಜೀವನ ಪಾಠವನ್ನೂ ಹೇಳಿ ಕೊಡುತ್ತವೆ ಎಂದು ತಿಳಿಸಿದರು.ಯಾವುದೇ ಕಲಾವಿದರು ಸನ್ಮಾನಕ್ಕಾಗಿ ಕಲಾಸೇವೆ ಮಾಡಿದವರಲ್ಲ. ಆದರೆ ಅವರ ಸಾಧನೆಯನ್ನು ಗುರುತಿಸುವುದು ಸಮಾಜದ ಕರ್ತವ್ಯ. ಅಂಥ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸುಮನಸಾ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಶ್ಲಾಘಿಸಿದರು.ಯಕ್ಷಗುರು ಯು. ದುಗ್ಗಪ್ಪ ಸ್ಮರಣಾರ್ಥ ಯಕ್ಷಸುಮ ಪ್ರಶಸ್ತಿಯನ್ನು ಗೋಪು ಕೆ. ಅವರಿಗೆ ಪ್ರದಾನ ಮಾಡಲಾಯಿತು.
ಲಯನ್ಸ್ ಉಪ ಗವರ್ನರ್ ಸಪ್ನಾ ಸುರೇಶ್, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಆನಂದ್ ಪಿ. ಸುವರ್ಣ, ಹರೀಶ್ ಶ್ರೀಯಾನ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ದೇವದಾಸ್ ಆರ್. ಸುವರ್ಣ, ಪ್ರಭಾಕರ ಪೂಜಾರಿ, ಸುಮನಸಾ ಕೊಡವೂರು ಸಂಸ್ಥೆಯ ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.ಸಂಸ್ಥೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಅಕ್ಷತ್ ಅಮೀನ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿಯ ಪುನಹ ಥಿಯೇಟರ್ ಕಲಾವಿದರಿಂದ ‘ಯೋಗಿ ಮತ್ತು ಭೋಗಿ’ ನಾಟಕ ಪ್ರದರ್ಶನಗೊಂಡಿತು.