ಸಾರಾಂಶ
- ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರ ಭರವಸೆ ಈಡೇರಿಸುವ ತನಕ ಆಶಾ ಕಾರ್ಯಕರ್ತೆಯರ ಹೋರಾಟ ನಿಲ್ಲದಿರಲಿ. ಕರ್ತವ್ಯಕ್ಕೆ ತೆರಳಬೇಡಿ ಹಾಗೂ ಬೆದರಿಕೆಗೆ ಅಂಜದಿರಿ. ಕಾರ್ಯಕರ್ತೆಯರ ನ್ಯಾಯಬದ್ಧ ಹಕ್ಕು ಕೊಡಿಸುವಲ್ಲಿ ಸದಾ ಕಾಲ ನಿಮ್ಮೊಟ್ಟಿಗಿರುತ್ತೇನೆ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಭರವಸೆ ನೀಡಿದರು.ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ 3ನೇ ದಿನದ ಪ್ರತಿಭಟನೆಯಲ್ಲಿ ಗುರುವಾರ ಭಾಗವಹಿಸಿ ಮಾತನಾಡಿ, ಹೋರಾಟದ ಕಷ್ಟ ತಮಗೆ ಗೊತ್ತಿದೆ. ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಜೀವನದ ಭವಣೆ ಅರಿತಿದ್ದೇನೆ. ಹೀಗಾಗಿ ಸರ್ಕಾರ ಕನಿಷ್ಠ ಮಾಸಿಕ ವೇತನ ನೀಡುವವರೆಗೆ ಹೋರಾಟ ನಿಲ್ಲದಿರಲಿ ಎಂದು ಹೇಳಿದರು.ಆಶಾ ಕಾರ್ಯಕರ್ತೆಯರ ಬದುಕಿನಲ್ಲಿ ಸಾಕಷ್ಟು ಕಷ್ಟವಿದೆ. ಕೆಲವರು ಕುಟುಂಬಗಳಲ್ಲಿ ಗಂಡನಿಲ್ಲ, ಗಂಡನಿದ್ದರೂ ಕುಡಿತದ ಚಟಕ್ಕೆ ಒಳಗಾಗಿ ಮನೆ ಜವಾಬ್ದಾರಿ ಯಜಮಾನಿಯೇ ವಹಿಸುತ್ತಿದ್ದಾರೆ. ಜೊತೆಗೆ ಮಕ್ಕಳ ಪಾಲನೆ, ವಿದ್ಯಾಭ್ಯಾಸದ ಖರ್ಚು ವೆಚ್ಚ ಎಲ್ಲವೂ ಹೆಚ್ಚಳವಾಗಿರುವ ಸಮಾಜದಲ್ಲಿ ಸರ್ಕಾರ ದುಡಿಮೆಗೆ ತಕ್ಕಂತೆ ವೇತನ ಕಲ್ಪಿಸುವುದು ನ್ಯಾಯಯುತವಾಗಿದೆ ಎಂದರು.ಪ್ರಸ್ತುತ ಸಮಾಜದಲ್ಲಿ ಕಡಿಮೆ ಕೆಲಸದ ವ್ಯಕ್ತಿಗಳಿಗೆ ಕೈತುಂಬಾ ಸಂಬಳವಿದೆ. ಆದರೆ, ಸರ್ಕಾರದ ಅತಿ ಹೆಚ್ಚು ಯೋಜನೆ ಗಳನ್ನು ಅಚ್ಚುಕಟ್ಟಾಗಿ ಜನಸಾಮಾನ್ಯರಿಗೆ ತಲುಪಿಸುವ ಆಶಾ ಕಾರ್ಯಕರ್ತೆಯರಿಗೆ ಕಡಿಮೆ ವೇತನ ನೀಡುವುದು ಸರಿಯಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನದ ನೀತಿ ಕಡ್ಡಾಯವಾಗ ಬೇಕು. ಸಮಾಜದಲ್ಲಿ ಎಲ್ಲರನ್ನೂ ಒಂದೇ ರೀತಿ ಕಾಣುವುದನ್ನು ಕಲಿಯಬೇಕು ಎಂದು ತಿಳಿಸಿದರು.ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಅನಿಲ್ಕುಮಾರ್ ಮಾತನಾಡಿ, ಸರ್ಕಾರದ ಉನ್ನತ ಅಧಿಕಾರಿಗಳಿಗೆ ಕೆಲಸ ನಿಗಧಿತ ಸಮಯವಿದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಕೆಲಸಕ್ಕೆ ಸಮಯ ಎಂಬುದು ಇರುವುದಿಲ್ಲ, ಆರೋಗ್ಯ ಸಮಸ್ಯೆ, ಸಾಂಕ್ರಾಮಿಕ ರೋಗ ತಡೆಗಟ್ಟಲು, ಸುರಕ್ಷಿತ ಕ್ರಮ ವಹಿಸಲು ಆಶಾ ಕಾರ್ಯಕರ್ತೆಯರು ಸಮಯ ಲೆಕ್ಕಿಸದೇ ಕರ್ತವ್ಯಕ್ಕೆ ತೆರಳಿ ದಿನಪೂರ್ತಿ ಕಾರ್ಯನಿರ್ವಹಿಸುತ್ತಾರೆ ಎಂದರು.ಸರ್ಕಾರದ ಬಹುತೇಕ ಯೋಜನೆಗಳನ್ನು ಅಂಕಿ ಅಂಶಗಳ ಮೂಲಕ ಆಶಾ ಕಾರ್ಯಕರ್ತೆಯರು ತಿಳಿಸಲು ಕಠಿಣ ಪರಿಶ್ರಮವೇ ಕಾರಣ. ಈ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ದುಡಿಯುವ ವರ್ಗಕ್ಕೆ ಸಮಾನ ವೇತನ ಒದಗಿಸುವುದು ಮೂಲ ಕರ್ತವ್ಯ. ಹೀಗಾಗಿ ಆಶಾ ಕಾರ್ಯಕರ್ತೆಯರ ಜೀವನಕ್ಕೆ ಕನಿಷ್ಠ ಮಾಸಿಕ 10 ಸಾವಿರ ವೇತನ ಕಡ್ಡಾಯ ಗೊಳಿಸಬೇಕು ಎಂದು ಒತ್ತಾಯಿಸಿದರು.ಎಐಟಿಯುಸಿ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ ಮಾತನಾಡಿ, ಗುಡ್ಡಗಾಡು ಪ್ರದೇಶದಲ್ಲಿ ಬಹುತೇಕ ಶೇ.85 ರಷ್ಟು ತಾಯಿ ಮತ್ತು ಶಿಶು ಮರಣ ತಪ್ಪಿಸಲು ಆಶಾ ಕಾರ್ಯಕರ್ತೆಯರ ಸೇವೆಯೇ ಕಾರಣ. ಈ ಪವಿತ್ರ ವೃತ್ತಿಯಲ್ಲಿರುವ ಕಾರ್ಯಕರ್ತೆ ಯರಿಗೆ ಅಲ್ಪಪ್ರಮಾಣದ ವೇತನ ನೀಡಿ ಅವರ ಬದುಕನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.ಅಪರಾಧ ಎಸಗಿ ಸೆರೆ ವಾಸ ಅನುಭವಿಸುವ ಕೈದಿಗಳಿಗೆ ಸಿಗುವ ಊಟ, ಬಟ್ಟೆ, ವಾಸ್ತವ್ಯ ಹಾಗೂ ನಿಗ ಧಿತ ವೇತನ ದಿನ ವಿಡೀ ನ್ಯಾಯವಾಗಿ ದುಡಿಯುವ ಕಾರ್ಯಕರ್ತೆಯರಿಗಿಲ್ಲ. ಹೀಗಾಗಿ ನಮ್ಮನ್ನು ಬಂಧಿಸಿ ಸೆರೆವಾಸದಲ್ಲಿಡಿ, ಊಟ, ಬಟ್ಟೆ ಮತ್ತು ₹650 ರು. ಸಂಬಳ ನೀಡಿ, ಸರ್ಕಾರ ನಿರ್ಣಯ ಕೈಗೊಳ್ಳುವವರೆಗೂ ಜೈಲಿನಲ್ಲಿಯೇ ಕಾಲಕಳೆಯುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಎಸ್ಸಿ/ಎಸ್ಟಿ. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ಮುಖಂಡರಾದ ರಮೇಶ್, ಕಿರಣ್, ದಿಲೀಪ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
14 ಕೆಸಿಕೆಎಂ 5ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿದರು. ಅನಿಲ್ಕುಮಾರ್, ಹೊನ್ನೇಶ್ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.