ಕಲಿಕೆಗೆ ಯಾವುದೇ ಅಡ್ಡದಾರಿಗಳಿಲ್ಲ: ನಾ. ಸೋಮೇಶ್ವರ

| Published : Oct 17 2025, 01:00 AM IST

ಸಾರಾಂಶ

ಕಲಿಕೆಗೆ ಅಡ್ಡದಾರಿಗಳನ್ನು ಬಳಸಿದರೆ ಬದುಕೇ ದುರ್ಭರವಾಗುತ್ತದೆ. ಯಶಸ್ಸಿಗೆ ಪ್ರಾಮಾಣಿಕ ಹಾದಿ ಬೇಕು. ಇಷ್ಟಪಟ್ಟು ಓದಿ, ಕಷ್ಟಪಟ್ಟುಓದಬೇಡಿ. ಇಷ್ಟಪಟ್ಟು ಓದಿದ್ದು ಮಾತ್ರ ನೆನಪಲ್ಲಿ ಉಳಿಯುತ್ತದೆ ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಕಲಿಕೆಗೆ ಯಾವುದೇ ಅಡ್ಡದಾರಿಗಳಿಲ್ಲ. ವ್ಯವಸ್ಥಿತ ಮತ್ತು ಪರಿಶ್ರಮಪೂರ್ಣ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ದೂರದರ್ಶನದ ‘ಥಟ್‌ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕಲಿಕೆಯ ಸುಲಭ ಸೂತ್ರಗಳು’ ವಿಷಯವಾಗಿ ಮಾತನಾಡಿ, ಕಲಿಕೆಗೆ ಅಡ್ಡದಾರಿಗಳನ್ನು ಬಳಸಿದರೆ ಬದುಕೇ ದುರ್ಭರವಾಗುತ್ತದೆ. ಯಶಸ್ಸಿಗೆ ಪ್ರಾಮಾಣಿಕ ಹಾದಿ ಬೇಕು. ಇಷ್ಟಪಟ್ಟು ಓದಿ, ಕಷ್ಟಪಟ್ಟುಓದಬೇಡಿ. ಇಷ್ಟಪಟ್ಟು ಓದಿದ್ದು ಮಾತ್ರ ನೆನಪಲ್ಲಿ ಉಳಿಯುತ್ತದೆ ಎಂದು ಸಲಹೆ ನೀಡಿದರು.

ಈ ಜಗತ್ತಿನಲ್ಲಿ ಯಾರೂ ದಡ್ಡರಿಲ್ಲ. ಭೂಮಿಯ ಮೇಲೆ ಜನಿಸುವ ಪ್ರತೀ ಮಗುವಿನ ಮೆದುಳಿನಲ್ಲೂ ನೂರು ಶತಕೋಟಿ ನರಕೋಶಗಳಿವೆ. ಅವುಗಳನ್ನು ಸಮರ್ಥವಾಗಿ ಬಳಸುವುದರ ಮೇಲೆ ಪ್ರತಿಯೊಬ್ಬರ ಯಶಸ್ಸು ನಿಂತಿದೆ ಎಂದರು.ನಮ್ಮ ಮೆದುಳು ಹಿತವಾದುದನ್ನು ನೆನಪಿಟ್ಟುಕೊಳ್ಳುತ್ತದೆ. ಅಹಿತವಾದುದನ್ನು ಮರೆಯುತ್ತದೆ.ನಮ್ಮ ಬುದ್ಧಿವಂತಿಕೆಯನ್ನು ನಿರ್ಧರಿಸುವುದು ಆನುವಂಶಿಕತೆ ಮತ್ತು ಪರಿಸರ. ಆನುವಂಶಿಕತೆ ಆಕಸ್ಮಿಕ, ಆದರೆ ಪರಿಸರವನ್ನು ನಮಗೆ ಬೇಕಾದಂತೆ ಬದಲಾಯಿಸುವುದಕ್ಕೆ ಸಾಧ್ಯವಿದೆಎಂದರು.ಪೋಷಕರು ಮಕ್ಕಳಿಗೆ ಮಾದರಿಯಾಗುವ ಮೂಲಕ ಉತ್ತಮ ಕೌಟುಂಬಿಕ ಪರಿಸರವನ್ನು ಮಕ್ಕಳಿಗೆ ಒದಗಿಸಬೇಕು. ಶಾಲಾ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಆರೋಗ್ಯಕರ ಪರಿಸರವನ್ನು ಹುಟ್ಟುಹಾಕಬೇಕು. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಹೇರಳವಾಗಿ ರೂಪಿಸಬೇಕು ಎಂದರು.ನಮ್ಮ ಗೆಳೆಯರು ಉದಾತ್ತ ಧ್ಯೇಯಗಳನ್ನು ಪೋಷಿಸುವವರಾಗಿರಬೇಕು. ಉತ್ತಮ ಗೆಳೆಯರನ್ನು ಆಯ್ಕೆ ಮಾಡಿಕೊಂಡರೆ ಶಿಕ್ಷಣ ಮತ್ತು ಬದುಕು ಸುಲಲಿತವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಪಂಚೇಂದ್ರಿಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡದ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದಜೀ ಮಹಾರಾಜ್, ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುತ ವ್ಯಕ್ತಿತ್ವವನ್ನು ಪೋಷಿಸುವ ಉದ್ದೇಶದಿಂದ ಪ್ರೇರಣಾ ಉಪನ್ಯಾಸ ಮಾಲಿಕೆಯನ್ನು ರೂಪಿಸಲಾಗಿದೆ. ಆಶ್ರಮದ ಸಹಯೋಗದಲ್ಲಿ ತುಮಕೂರು ವಿವಿ ವಿದ್ಯಾರ್ಥಿಗಳು ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿದ್ಯಾರ್ಥಿಗಳು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಪರಿಶ್ರಮಗಳಿಂದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಹದಿಹರೆಯದ ಆಕರ್ಷಣೆಗಳಿಗೆ ಸಿಕ್ಕಿ ಬದುಕನ್ನು ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಮುಂದೆ ಸುಖಮಯ ಜೀವನ ಕಾದಿದೆ ಎಂದರು.ಪ್ರೇರಣಾ ಉಪನ್ಯಾಸ ಸಮಿತಿಯ ಅಧ್ಯಕ್ಷ ಪ್ರೊ.ರವೀಂದ್ರ ಕುಮಾರ್ ಬಿ. ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಅರುಣ್‌ಕುಮಾರ್ ಡಿ.ಬಿ. ವಂದಿಸಿದರು. ಪತ್ರಿಕೋದ್ಯಮ ಸಹ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು. ಸಂಚಾಲಕ ಡಾ.ಕೆ. ಸಿ. ಸುರೇಶ ಉಪಸ್ಥಿತರಿದ್ದರು.

ಪೋಟೋ........

ತುಮಕೂರು ವಿವಿಯಲ್ಲಿ ನಡೆದ ಪ್ರೇರಣಾಉಪನ್ಯಾಸವನ್ನು ‘ಥಟ್‌ಅಂತ ಹೇಳಿ’ ಖ್ಯಾತಿಯಡಾ. ನಾ. ಸೋಮೇಶ್ವರ ಉದ್ಘಾಟಿಸಿದರು.