ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಾತಿಗೊಬ್ಬ ಸ್ವಾಮೀಜಿ ಹುಟ್ಟುವ ಬದಲು, ಹಿಂದೂ ಸಮಾಜವನ್ನು ಒಟ್ಟಾಗಿ ಕರೆದುಕೊಂಡು ಹೋಗಬಲ್ಲ ಸಂತರನ್ನು ಮುನ್ನೆಲೆಗೆ ತರುವ ಕೆಲಸವಾಗಬೇಕಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಸಲಹೆ ನೀಡಿದರು.ನವನಗರದ ಸೆಕ್ಟರ್ ನಂ.3ರಲ್ಲಿರುವ ಶ್ರೀಪ್ರಸನ್ನ ವೆಂಕಟದಾಸರ ಸ್ಮಾರಕ ಭವನದಲ್ಲಿ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ ಟ್ರಸ್ಟ್, ಶ್ರೀಪ್ರಸನ್ನ ವೆಂಕಟ ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಸಂಶೋಧನಾ ಟ್ರಸ್ಟ್ಗಳಿಂದ ಶನಿವಾರ ಹಮ್ಮಿಕೊಂಡಿದ್ದ 14ನೇ ಒಂದು ದಿನದ ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ ವಿಷಬೀಜಗಳನ್ನು ಬಿತ್ತುವ ಮೂಲಕ ಹಿಂದೂ ಸಮಾಜ ಹಾಗೂ ದೇಶವನ್ನು ವಿಭಜಿಸುವ ಯತ್ನಗಳು ನಡೆದಿವೆ ಎಂದರು.
ಹಿಂದುಗಳಲ್ಲಿ ಜಾತಿ ವಿಷಬೀಜವನ್ನು ಬಿತ್ತುವ, ದೇಶವನ್ನು ವಿಭಜಿಸುವ ಯತ್ನಗಳು ನಡೆದಿವೆ. ಅದಕ್ಕೆ ಕಡಿವಾಣ ಹಾಕಲು ಧಾರ್ಮಿಕ ಮುಖಂಡರೇ ಮುಂದಾಗಬೇಕು. ಪೇಜಾವರಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ಸಮುದಾಯಕ್ಕೆ ಮೀಸಲಾಗದೆ. ಇಡೀ ಹಿಂದೂ ಸಮಾಜದ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.ಸಮಗ್ರ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ವಿಪ್ರರಿಗೆ ಇದೆ. ಈ ಸಮಾಜದ ಬಗ್ಗೆ ನನಗೆ ಅಪಾರವಾದ ಗೌರವವಿದ್ದು, ಬ್ರಾಹ್ಮಣರ ಪರಿಸರದಲ್ಲೇ ನಾನು ಬೆಳೆದು ಬಂದಿದ್ದೇನೆ. ವಿಪ್ರರಿಗೆ ಸಕಲ ಜ್ಞಾನವಿದ್ದು, ಸಂಘಟನೆ ಇಲ್ಲದಂತೆ ಆಗಿದೆ. ಸಮಾಜದ ವಿರುದ್ಧ ಟೀಕೆಗಳು ಬಂದರೆ ಅದಕ್ಕೆ ತಕ್ಕದಾಗಿ ಉತ್ತರ ನೀಡುವ ಕೆಲಸವನ್ನು ಸಮಾಜ ಮಾಡಲೇಬೇಕೆಂದು ಕಿವಿಮಾತು ಹೇಳಿದರು.
ಪ್ರಸನ್ನ ವೆಂಕಟದಾಸರ ಬಾಗಲಕೋಟೆಯ ಮಣ್ಣಿನವರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ. ನಮ್ಮ ಸಾಮರ್ಥ್ಯವನ್ನು ಹೊರಗಿನವರು ಹೇಳಿದಾಗಷ್ಟೇ ನಮಗೆ ಗೊತ್ತಾಗುತ್ತದೆ. ಹಾಗೆಯೇ ಪ್ರಸನ್ನ ವೆಂಕಟದಾಸರ ಬಗ್ಗೆ ಸಂಶೋಧನಾಕಾರರು ತಿಳಿಸಿದ ನಂತರವಷ್ಟೇ ಅವರ ಮಹತ್ವ ತಿಳಿಯುವಂತೆ ಆಗಿದೆ. ಪ್ರಸನ್ನ ವೆಂಕಟದಾಸರ ಟ್ರಸ್ಟ್ಗೆ ಅಗತ್ಯ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.ಟ್ರಸ್ಟ್ ಅಧ್ಯಕ್ಷ ಡಾ.ಸುಭಾಸ್ ಕಾಖಂಡಕಿ ಮಾತನಾಡಿ, ವಚನ ಸಾಹಿತ್ಯದಷ್ಟೇ ಮಹತ್ವ ದಾಸಸಾಹಿತ್ಯಕ್ಕೂ ಸಿಗಬೇಕಿದೆ. ಕನಕದಾಸರ ಅಧ್ಯಯನ ಪೀಠ ಹೊರತಾಗಿ ಇತರೆ ಯಾವುದೇ ದಾಸರ ಕೃತಿಗಳ ಕುರಿತಾದ ಅಧ್ಯಯನಪೀಠಗಳು ರಚನೆ ಆಗಿಲ್ಲ. ನಮಗೆ ಪ್ರಸನ್ನ ವೆಂಕಟದಾಸರ ಅಧ್ಯಯನಪೀಠ ಆರಂಭಿಸುವ ಗುರಿಯಿದ್ದು, ಸರ್ಕಾರದಿಂದ ನೆರವು ಸಿಗಬೇಕೆಂದು ಹೇಳಿದರು. ಮುಂದಿನ 15 ದಿನದಲ್ಲಿ ಅಧ್ಯಯನ ಪೀಠ, ಗ್ರಂಥಾಲಯ ಕಟ್ಟಡದ ಕಾಮಗಾರಿ ಆರಂಭವಾಗಲಿದೆ ಎಂದು ಘೋಷಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಮಂತ್ರಾಲಯದ ಶ್ರೀಗುರುಸಾರ್ವಭೌಮ ದಾಸಸಾಹಿತ್ಯ ಯೋಜನೆಯ ಗೌರವ ನಿರ್ದೇಶಕ ಕೆ.ಅಪಣ್ಣಾಚಾರ್ಯ ಮಾತನಾಡಿ, ನನಗೆ ಪ್ರಸನ್ನ ವೆಂಕಟದಾಸರ ರಚನೆಗಳು ಅತಿಪ್ರೀಯವಾದದ್ದು, ಯಾವುದೇ ದಾಸರ ಕೀರ್ತನೆಗಳನ್ನು ಗಮನಿಸಿದರೆ ಅಲ್ಲಿ ಭಕ್ತಿಗೆ ಹೆಚ್ಚು ಪ್ರಾಧ್ಯಾನ್ಯತೆ ಇರುತ್ತದೆ. ದಾಸಸಾಹಿತ್ಯ ಅದಕ್ಕಾಗಿಯೇ ಎಲ್ಲರಿಗೂ ಆಪ್ತವಾಗುತ್ತದೆ ಎಂದು ವಿಶ್ಲೇಷಿಸಿದರು.ಹಿರಿಯ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ, ಹಿರಿಯ ಗಾಯಕ ಪಂ.ಅನಂತ ಕುಲಕರ್ಣಿ, ಡಾ.ರೇಖಾ ಕಾಖಂಡಕಿ, ಡಾ. ವಿಠ್ಠಲಾಚಾರ್ಯ ಕಾಖಂಡಕಿ, ಗುರುರಾಜ ಕುಲಕರ್ಣಿ ಮತ್ತಿತರರು ಇದ್ದರು.
---------ಕೋಟ್ಸ್.....
ಪ್ರಸನ್ನ ವೆಂಕಟದಾಸರ ಕೀರ್ತನೆಗಳಲ್ಲಿ ಅನೇಕ ದಾಖನೀಯ ಅಂಶಗಳಿದ್ದು, ಅವುಗಳ ಅಧ್ಯಯನಕ್ಕೆ ಒತ್ತು ಸಿಗಬೇಕಿದೆ. ದಾಸರು ತಾವು ಕಂಡಿದನ್ನು ಕಣ್ಣಿಗೆ ಕಟ್ಟುವಂತೆ ಆಪ್ತವಾದ ಶೈಲಿಯಲ್ಲಿ ಬರೆಯುತ್ತಿದ್ದರು. ಅದೇ ಅವರ ಸಾಹಿತ್ಯದ ವೈಶಿಷ್ಟ್ಯತೆ.- ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ, ಹಿರಿಯ ಸಂಶೋಧಕರು