ಹಾಸ್ಯ ಸಾಹಿತ್ಯದಲ್ಲಿ ಸ್ತ್ರೀ ಪುರುಷ ಭೇದ ಸಲ್ಲದು: ಸಾವಿತ್ರಿ ಮನೋಹರ್

| Published : Mar 20 2024, 01:15 AM IST

ಹಾಸ್ಯ ಸಾಹಿತ್ಯದಲ್ಲಿ ಸ್ತ್ರೀ ಪುರುಷ ಭೇದ ಸಲ್ಲದು: ಸಾವಿತ್ರಿ ಮನೋಹರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಪೆರ್ವಾಜೆಯ ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಧ್ಯಾನ ಯೋಗ ಮತ್ತು ಸೇವಾಮಂದಿರದಲ್ಲಿ ಹೊಸಸಂಜೆ ಬಳಗದ ಸಹಯೋಗದಲ್ಲಿ ಆಯೋಜಿಸಲಾದ ‘ಸಾಧಕರಿಗೆ ಸನ್ಮಾನ’ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಮಹಿಳಾ ಸಾಹಿತ್ಯ ಅಂದರೆ ಅಡುಗೆಮನೆ ಸಾಹಿತ್ಯ ಎಂದು ಹೀಗಳೆಯದಿರಿ, ಇಂದು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಮಹಿಳೆಯರು ಜನಸಾಮಾನ್ಯರಿಂದ ವಿದ್ವಾಂಸರ ವರೆಗೆ ಮೆಚ್ಚುಗೆ ಗಳಿಸುವಂತಹ ಕೃತಿಗಳನ್ನು ರಚಿಸಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಸಾಹಿತ್ಯದಲ್ಲಿ ಸ್ತ್ರೀ ಮತ್ತು ಪುರುಷ ಸಾಹಿತ್ಯ ಎಂಬ ಭೇದ ಸರ್ವಥಾ ಸಲ್ಲದು ಎಂದು ನಿವೃತ್ತ ಮುಖ್ಯಶಿಕ್ಷಕಿ, ಲೇಖಕಿ ಸಾವಿತ್ರಿ ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಕಾರ್ಕಳ ಪೆರ್ವಾಜೆಯ ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಧ್ಯಾನ ಯೋಗ ಮತ್ತು ಸೇವಾಮಂದಿರದಲ್ಲಿ ಹೊಸಸಂಜೆ ಬಳಗದ ಸಹಯೋಗದಲ್ಲಿ ಆಯೋಜಿಸಲಾದ ‘ಸಾಧಕರಿಗೆ ಸನ್ಮಾನ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಾಸ್ಯ ಅಂದರೆ ಸಂತೋಷ ಕೊಡುವಂತದ್ದು. ಹಾಸ್ಯದಲ್ಲಿ ಲಘುಹಾಸ್ಯ, ತಿಳಿಹಾಸ್ಯ, ಬಿಗು ಹಾಸ್ಯ ಹೀಗೆ ನಾನಾ ಪ್ರಕಾರಗಳಿವೆ. ಇನ್ನೊಬ್ಬರ ಮನಸ್ಸನ್ನು ನೋಯಿಸದೆ ನಕ್ಕು ಹಗುರಾಗುವ ಹಾಸ್ಯ ಸಾಹಿತ್ಯ ಸೃಷ್ಟಿ ಪ್ರಸ್ತುತ ತೀರಾ ಅತ್ಯಗತ್ಯವಾಗಿದೆ. ನಗು ಮನುಷ್ಯನ ಸಹಜ ಸ್ವಭಾವವಾಗಬೇಕು. ಆದಕಾರಣ ಶಿಸ್ತಿನ ಪರಿಧಿಯೊಳಗೆ ನಗುವನ್ನು ಬಂಧಿಸಿಡುವ ಪ್ರವೃತ್ತಿಯನ್ನು ತತ್ ಕ್ಷಣ ತೊರೆಯಿರಿ ಎಂದು ಅವರು ಕರೆ ನೀಡಿದರು.

ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಪ್ರಬಂಧಕ ಮುಂಡ್ಕೂರು ಗೋಪಿನಾಥ ವೈಕುಂಠ ಕಾಮತ್, ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಡಿಸಿಲ್ವ, ಯುವಸಾಹಿತಿ ರಾಜೇಶ್ ಕಲ್ಯಾ, ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮಂದಿರದ ಪ್ರವರ್ತಕರಾದ ಶ್ರೀನಿವಾಸ ಪೈ, ನಿರ್ಮಲಾ ಪೈ, ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು, ಸಾಮಾಜಿಕ ಮುಂದಾಳು ಪ್ರಭಾಕರ ಬಂಗೇರ ಉಪಸ್ಥಿತರಿದ್ದರು.

ಬ್ಯಾಂಕ್ ಆಫ್ ಇಂಡಿಯಾ ಮೂಡುಬಿದಿರೆ ಶಾಖೆಯ ಹಿರಿಯ ಪ್ರಬಂಧಕ ಉಮೇಶ್, ಎಂಸಿಸಿ ಬ್ಯಾಂಕ್ ಕಾರ್ಕಳ ಶಾಖೆಯ ಪ್ರಬಂಧಕ ರೊಯನ್, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಪುರಸ್ಕ್ರತ ಹಾಸ್ಯ ಸಾಹಿತಿ ಧಾರವಾಡದ ನಳಿನಿ ಟಿ. ಭೀಮಪ್ಪ ಅವರನ್ನು ಸನ್ಮಾನಿಸಲಾಯಿತು.

ಶ್ರಾವ್ಯಾ ಶೆಟ್ಟಿ ಸ್ವಾಗತಿಸಿದರು. ವೀಣಾ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರೀಷ್ಮಾ ಪ್ರಭು ತೆಳ್ಳಾರು ಕಾರ್ಯಕ್ರಮ ನಿರೂಪಿಸಿದರು. ಸುನೀತಾ ಬಂಗೇರ ವಂದಿಸಿದರು.