ಸಾರಾಂಶ
ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಮುಟ್ಟದ ಸಾಹಿತ್ಯವಿಲ್ಲ ಎಂಬುದು ಅಕ್ಷರಶಃ ಸತ್ಯ ಎಂದು ಪ್ರಾಧ್ಯಾಪಕ ಡಾ.ಡಿ.ಧರಣೇoದ್ರಯ್ಯ ಅಭಿಪ್ರಾಯಪಟ್ಟರು. ಹಿರಿಯೂರಲ್ಲಿ ಕುವೆಂಪು ಜನ್ಮದಿನ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಮುಟ್ಟದ ಸಾಹಿತ್ಯವಿಲ್ಲ ಎಂಬುದು ಅಕ್ಷರಶಃ ಸತ್ಯ ಎಂದು ಪ್ರಾಧ್ಯಾಪಕ ಡಾ.ಡಿ.ಧರಣೇoದ್ರಯ್ಯ ಅಭಿಪ್ರಾಯಪಟ್ಟರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕುವೆಂಪು ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮುಢನಂಬಿಕೆಗಳು ತೊಲಗಿ ವೈಚಾರಿಕ ಪ್ರಜ್ಞೆ ಮೂಡಿಸಲು ಪ್ರಯತ್ನಿಸಿದ ಕುವೆಂಪುರವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟರು. ಸರಳತೆ ರೂಢಿಸಿಕೊಂಡಿದ್ದ ಅವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿದ್ದರು ಎಂದು ತಿಳಿಸಿದರು.ಧ್ಯಾನಶೀಲರು, ಏಕಾಂತಜೀವಿಯು ಆಗಿದ್ದ ಅವರು ಯುಗದ ಕವಿ, ಜಗದ ಕವಿಯಾಗಿ ಬೆಳಗಿದರು. ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯ ಅವರೆಂತ ದೈತ್ಯ ಸಾಹಿತ್ಯ ಪ್ರತಿಭೆ ಎಂಬುದನ್ನು ತೋರಿಸಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಬತ್ತ ತುಂಬುವ ಚೀಲಗಳಾಗದೆ ಬತ್ತ ಬೆಳೆಯುವ ಗದ್ದೆಗಳಾಗಬೇಕು ಎಂದ ಅವರು, ನುಡಿದಂತೆ ನಡೆದವರಾಗಿ ಬರೆದಂತೆ ಬದುಕಿದರು ಎಂದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಕೆ.ಜಿ.ತಿಪ್ಪೇಸ್ವಾಮಿ, ರೇಷ್ಮೆ ಇಲಾಖೆ ಅಧಿಕಾರಿ ಈಶ್ವರಪ್ಪ, ಮುಖ್ಯ ಶಿಕ್ಷಕ ಎನ್.ಮಂಜುನಾಥ್, ಕೃಷಿ ಇಲಾಖೆಯ ಸೋಮಶೇಖರ್, ಕಂದಾಯ ಇಲಾಖೆಯ ಶ್ರೀನಿವಾಸ್ ರೆಡ್ಡಿ, ಅರ್ಚಕ ಪ್ರಶಾಂತ್, ಪ್ರಜ್ವಲ್, ರಂಗನಾಥ್ ಮುಂತಾದವರು ಹಾಜರಿದ್ದರು.