ಸರ್ಕಾರಿ ಶಾಲೆಗಳ ಮುಚ್ಚುವ ಪ್ರಶ್ನೆಯೇ ಇಲ್ಲ: ಬಿಇಒ ತಿಪ್ಪೇಶಪ್ಪ

| Published : Jun 26 2024, 12:40 AM IST

ಸಾರಾಂಶ

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಮೂರು ಶಾಲೆಗಳನ್ನು ಮುಚ್ಚಲಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಇದೂವರೆಗೂ ಯಾವ ಸರ್ಕಾರಿ ಶಾಲೆಗಳನ್ನು ಮುಚ್ಚಿಲ್ಲ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ತಿಪ್ಪೇಶಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಕೆಲವರಿಂದ ಸ್ಥಳೀಯ ಸುದ್ದಿವಾಹಿನಿಗಳು, ಪತ್ರಿಕೆಗಳಲ್ಲಿ ಅಪಪ್ರಜಾರ: ಸ್ಪಷ್ಟನೆ

- ಶಾಲೆ ಮುಚ್ಚಬೇಕಾದರೆ ಸತತ 3 ವರ್ಷ ಶೂನ್ಯ ದಾಖಲಾತಿ ಆಗಿರಬೇಕು

- ಕಂಚಿನಾಳ, ಮಾದಾಪುರ ತಾಂಡಾಗಳ ಸರ್ಕಾರಿ ಶಾಲೆಗಳನ್ನು ಮುಚ್ಚಿಲ್ಲ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಮೂರು ಶಾಲೆಗಳನ್ನು ಮುಚ್ಚಲಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಇದೂವರೆಗೂ ಯಾವ ಸರ್ಕಾರಿ ಶಾಲೆಗಳನ್ನು ಮುಚ್ಚಿಲ್ಲ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ತಿಪ್ಪೇಶಪ್ಪ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ತಾಲೂಕುಗಳ ಕಂಚಿನಾಳ, ಸಾಸ್ವೇಹಳ್ಳಿ ಹಾಗೂ ಮಾದಾಪುರ ತಾಂಡಾಗಳಲ್ಲಿರುವ ಮೂರು ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಕೆಲವರು ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದರು.

ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿಯ ಅನುದಾನಿತ ಶಾಲೆಯಲ್ಲಿ ಶೂನ್ಯ ದಾಖಲಾತಿ ಇದೆ. ಆದರೆ, ಯಾವುದೇ ಶಾಲೆ ಮುಚ್ಚಬೇಕಾದರೆ ಸತತವಾಗಿ 3 ವರ್ಷ ಅದು ಶೂನ್ಯ ದಾಖಲಾತಿ ತೋರಿಸಬೇಕಾಗುತ್ತದೆ. ಆಗ ಮಾತ್ರ ಅಂತಹ ಶಾಲೆ ಮುಚ್ಚಬಹುದು. ಆದರೆ, ಸ್ವಾಮಿ ವಿವೇಕಾನಂದ ಶಾಲೆ ಇದೇ ಪ್ರಥಮ ವರ್ಷ ಶೂನ್ಯ ದಾಖಲಾತಿ ಹೊಂದಿದೆ. ದಾಖಲಾತಿಗೆ ಇನ್ನೂ ಸಮಯಾವಕಾಶವಿದೆ. 3 ವರ್ಷಗಳೂ ಸತತ ಶೂನ್ಯ ದಾಖಲಾತಿ ಹೊಂದಿದರೆ ಅಂತಹ ಶಾಲೆಗಳನ್ನು ಮುಚ್ಚಲು ಅವಕಾಶವಿದೆ ಎಂದರು.

ಅದೇ ರೀತಿ ನ್ಯಾಮತಿ ತಾಲೂಕಿನ ಕಂಚಿನಾಳ ಮತ್ತು ಮಾದಾಪುರ ತಾಂಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಿಲ್ಲ. ದಾಖಲಾತಿಗೆ ಇನ್ನೂ ಸಮಯಾವಕಾಶ ಇದೆ. ಜುಲೈನಲ್ಲಿ ವಿಶೇಷ ದಾಖಲಾತಿ ಆಂದೋಲನ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳನ್ನು ದಾಖಲಿಸಲು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅವಳಿ ತಾಲೂಕುಗಳ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಶಿಕ್ಷಣ ಸಂಯೋಜಕ ಮುದ್ದನಗೌಡ, ಬಸವರಾಜ ಹಾಗೂ ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- - - -25ಎಚ್.ಎಲ್.ಐ2: ಎಂ.ತಿಪ್ಪೇಶಪ್ಪ