ದೂರುಗಳಿಗೆ ಅಧಿಕಾರಿಗಳಿಂದ ಸ್ಪಂದನೆಯೇ ಇಲ್ಲ..!

| Published : Jun 25 2025, 12:34 AM IST

ಸಾರಾಂಶ

ಇದೊಂದು ಸೆಸ್ಕಾಂ ಕಂಪನಿ ನಡೆಸುವ ಕಾಟಾಚಾರದ ಜನಸಂಪರ್ಕ ಸಭೆ. ಇಲ್ಲಿ ರೈತರಿಂದ ಬರುವ ದೂರುಗಳಿಗೆ ಸ್ಪಂದನೆಯೇ ಸಿಗುವುದಿಲ್ಲ. ಮೂರು ತಿಂಗಳಿಗೊಮ್ಮೆ ನಡೆಯುವ ಜನಸಂಪರ್ಕ ಸಭೆಯ ಬಗ್ಗೆ ಯಾರಿಗೂ ಮಾಹಿತಿಯೇ ಇರುವುದಿಲ್ಲ, ಬೆರಳೆಣಿಕೆಯಷ್ಟು ಜನ ಮಾತ್ರ ಸಭೆಗೆ ಬಂದು ಹೋಗುತ್ತಾರೆ. ಸಭೆ ಮುಗಿಸಿ ಅಧಿಕಾರಿಗಳೂ ಸುಮ್ಮನಾಗುತ್ತಾರೆ. ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಇದೊಂದು ಸೆಸ್ಕಾಂ ಕಂಪನಿ ನಡೆಸುವ ಕಾಟಾಚಾರದ ಜನಸಂಪರ್ಕ ಸಭೆ. ಇಲ್ಲಿ ರೈತರಿಂದ ಬರುವ ದೂರುಗಳಿಗೆ ಸ್ಪಂದನೆಯೇ ಸಿಗುವುದಿಲ್ಲ. ಮೂರು ತಿಂಗಳಿಗೊಮ್ಮೆ ನಡೆಯುವ ಜನಸಂಪರ್ಕ ಸಭೆಯ ಬಗ್ಗೆ ಯಾರಿಗೂ ಮಾಹಿತಿಯೇ ಇರುವುದಿಲ್ಲ, ಬೆರಳೆಣಿಕೆಯಷ್ಟು ಜನ ಮಾತ್ರ ಸಭೆಗೆ ಬಂದು ಹೋಗುತ್ತಾರೆ. ಸಭೆ ಮುಗಿಸಿ ಅಧಿಕಾರಿಗಳೂ ಸುಮ್ಮನಾಗುತ್ತಾರೆ. ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿವೆ.

ನಗರದ ಸಾರಿಗೆ ಬಸ್ ನಿಲ್ದಾಣದ ಎದುರು ಮಂಗಳವಾರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯನಿರ್ವಹಣಾಧಿಕಾರಿ ಅನಿತಾಬಾಯಿ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಆಯೋಜನೆಗೊಂಡಿತ್ತು.

ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಹೇಳತೀರದಾಗಿದೆ. ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿರುವುದು, ಕೆಟ್ಟುಹೋಗಿರುವ ಟ್ರಾನ್ಸ್ ಫಾರ್ಮರ್‌ಗಳು, ಜೋತುಬಿದ್ದ ವಿದ್ಯುತ್ ತಂತಿಗಳು, ವಿದ್ಯುತ್ ಕಂಬಗಳಿಗೆ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿರುವುದು, ವಿದ್ಯುತ್ ಕಳ್ಳತನ, ಮರಗಳನ್ನು ಕಡಿಯುವುದಕ್ಕೆ ಕಂಬಗಳನ್ನು ತೆರವುಗೊಳಿಸದಿರುವುದು ಹೀಗೆ ನೂರಾರು ಸಮಸ್ಯೆಗಳು ರೈತರನ್ನು ಬಾಧಿಸುತ್ತಿದ್ದರೂ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಸೂಚಿಸುವಲ್ಲಿ ವಿಫಲರಾಗಿರುವುದು ಕಂಡುಬಂದಿತು.

ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಹಾಜರಿದ್ದ ಕೆಲವೇ ರೈತರು ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಹಣ ವಸೂಲಿ, ಮೀಟರ್ ಕಳುವಾಗಿರುವ ಬಗ್ಗೆ ರೈತನಿಗೆ ತಿಳಿಸಿ ಮತ್ತೆ ಮೀಟರ್ ವಾಪಸ್ ನೀಡಿರುವುದು, ಲೈನ್‌ಮನ್ ಅಕ್ರಮವಾಗಿ ಸ್ವಂತ ಗುತ್ತಿಗೆ ಕೆಲಸ ನಿರ್ವಹಿಸುತ್ತಿರುವುದು, ವಿದ್ಯುತ್ ಕಂಬ ಸ್ಥಳಾಂತರಿಸದಿರುವುದು, ವಿದ್ಯುತ್ ಕಂಬವನ್ನು ಹಣಕ್ಕಾಗಿ ಮಾರಾಟ ಮಾಡುವುದು, ಟ್ರಾನ್ಸ್ ಫಾರ್ಮರ್‌ನಲ್ಲಿನ ಎಲ್‌ಟಿ ಕಿಟ್ ಕೆಟ್ಟರೆ ವೈರ್ ಹಾಕುವುದಕ್ಕೆ ಒಂದು ಟ್ರಾನ್ಸ್ ಫಾರ್ಮರ್‌ಗೆ 5 ಸಾವಿರ ರು. ಹಣ ವಸೂಲಿ ಸೇರಿದಂತೆ ಅನೇಕ ದೂರುಗಳನ್ನು ನಿಗಮದ ಅಧಿಕಾರಿಗಳ ಗಮನಕ್ಕೆ ತಂದರು.

ಸೂನಗಹಳ್ಳಿ ಗ್ರಾಮದ ಜಗದೀಶ್ ಎಂಬುವರ ಕಟ್ಟಡಕ್ಕೆ ವಾಣಿಜ್ಯ ವಿದ್ಯುತ್ ಸಂಪರ್ಕ ನೀಡುವುದಾಗಿ ಹೇಳಿ ಅವರಿಂದ ಹಣ ಪಡೆದುಕೊಂಡು ಅನಧಿಕೃತ ಮೀಟರ್ ಅಳವಡಿಸಿದ್ದರು. ನಂತರ ಏಳೆಂಟು ತಿಂಗಳ ನಂತರ ಮೀಟರ್ ಕಳಚಿಕೊಂಡು ಹೋಗಿರುವ ಬಗ್ಗೆ ಹೆಮ್ಮಿಗೆ ಗ್ರಾಮದ ಎಚ್.ಡಿ.ಕೃಷ್ಣ ಅವರು ಸಹಾಯಕ ಲೈನ್‌ಮೆನ್ ಎಚ್.ಎಂ.ಕಾರ್ತಿಕ್ ವಿರುದ್ಧ ದೂರು ನೀಡಿದರು.

ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಜಗದೀಶ್ ಅವರಿಂದ 6 ಸಾವಿರ ರು.ನಿಂದ 8 ಸಾವಿರ ರು.ವರೆಗೆ ಹಣ ಪಡೆದ ಕಾರ್ತಿಕ್ ಯಾವುದೋ ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದ್ದರು. ನಂತರದ ದಿನಗಳಲ್ಲಿ ನಿಗಮದ ಸಹಾಯಕ ಎಂಜಿನಿಯರ್ ಸೂನಗಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಜಗದೀಶ್ ಅವರು ಕಟ್ಟಡಕ್ಕೆ ಅಳವಡಿಸಿರುವ ವಿದ್ಯುತ್ ಮೀಟರ್‌ಗೆ ಪ್ರತಿ ಮಾಹೆ ಬಿಲ್ ಬರುತ್ತಿಲ್ಲವೆಂಬ ಸಂಗತಿಯನ್ನು ಗಮನಕ್ಕೆ ತಂದರು. ಅದಕ್ಕೆ ಎಂಜಿನಿಯರ್ ಅವರು ಮೀಟರ್ ಖರೀದಿಸಿರುವ ಬಿಲ್ ನೀಡುವಂತೆ ಕೇಳಿದರು.

ಜಗದೀಶ್ ಬಳಿ ಬಿಲ್ ಇರಲಿಲ್ಲವಾದ ಕಾರಣ ಮೀಟರ್ ಅಳವಡಿಸಿದ ಸಹಾಯಕ ಲೈನ್‌ಮನ್ ಎಚ್.ಎಂ.ಕಾರ್ತಿಕ್ ಅವರನ್ನು ಕೇಳಿದಾಗ ಈಗ ನನ್ನ ಬಳಿ ಬಿಲ್ ಇಲ್ಲ. ಸ್ವಲ್ಪದಿನ ಸಮಯ ಕೊಡಿ. ನಾನು ನಿಮಗೆ ಆರ್‌ಆರ್ ನಂಬರ್ ಕೊಡಿಸುತ್ತೇನೆ ಎಂದು ತಿಳಿಸಿದ್ದು, ನಂತರ ವಾಟ್ಸಾಪ್ ಮುಖಾಂತರ ಮೀಟರ್‌ನ ಫೋಟೋ ಕಳುಹಿಸಿದ್ದು, ಆ ನಂಬರ್‌ನ ಮೀಟರ್ ಜಗದೀಶ್ ಕಟ್ಟಡದಲ್ಲೇ ಇರಲಿಲ್ಲ. ಆ ಮೀಟರ್‌ನ್ನು ಎಚ್.ಎಂ.ಕಾರ್ತಿಕ್ ಕಳಚಿಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಮೀಟರ್ ಬಗ್ಗೆ ಕಾರ್ತಿಕ್ ಮಾತನಾಡಿರುವ ಮೊಬೈಲ್ ರೆಕಾರ್ಡ್‌ನ್ನೂ ನಿಗಮದ ಅಧಿಕಾರಿಗಳಿಗೆ ನೀಡಿರುವುದಾಗಿ ತಿಳಿಸಿದರು.

ಮಂಡ್ಯ ತಾಲೂಕು ತಗ್ಗಹಳ್ಳಿ ಶಾಖೆಯ ಸಹಾಯಕ ಲೈನ್‌ಮೆನ್ ಕಾರ್ತಿಕ್ ಅಕ್ರಮವಾಗಿ ಮತ್ತು ಸ್ವಂತ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದು, ಇಲಾಖೆ ಗಮನಕ್ಕೆ ಬಾರದ ರೀತಿಯಲ್ಲಿ ತಾನೇ ಗುತ್ತಿಗೆ ತೆಗೆದುಕೊಂಡು ವಿದ್ಯುತ್ ಕಂಬ ಸ್ಥಳಾಂತರ ಮಾಡುವುದು, ಟ್ರಾನ್ಸ್ ಫಾರ್ಮರ್ ಕೆಟ್ಟರೆ ಎಂಜಿನಿಯರ್‌ಗಳಿಗೆ ಹಣ ಕೊಡಬೇಕೆಂದು 5 ಸಾವಿರ ರು.ವರೆಗೆ ಹಣ ವಸೂಲಿ ಮಾಡುತ್ತಿರುವುದನ್ನು ಸೂನಗಹಳ್ಳಿ, ಭೂತನಹೊಸೂರು, ಹೆಮ್ಮಿಗೆ, ಕಬ್ಬನಹಳ್ಳಿ ಗ್ರಾಮಸ್ಥರು ಸಾಕ್ಷ್ಯಾಧಾರಗಳ ಮುಖಾಂತರ ಅಧಿಕಾರಿಗಳ ಗಮನಕ್ಕೆ ತಂದರು.

ಮನೆಯೊಂದಕ್ಕೆ ವಿದ್ಯುತ್‌ ಸಂಪರ್ಕ ಕೊಡಿಸುವುದಾಗಿ ಹೇಳಿ 25 ಸಾವಿರ ರು. ಹಣ ಪಡೆದುಕೊಂಂಡು ವಂಚಿಸಿರುವುದಾಗಿ ಭೂತನಹೊಸೂರಿನ ಸವಿತಾ ಎಂಬುವರು ಎಚ್.ಎಂ.ಕಾರ್ತಿಕ್ ವಿರುದ್ಧ ದೂರು ಸಲ್ಲಿದರು. ಕಾರ್ತಿಕ್ ಯಾವುದೋ ಒಂದು ಮೀಟರ್ ತಂದು ಸಂಪರ್ಕ ನೀಡಿದ್ದು, ಮೀಟರ್ ರೀಡರ್ ಬಂದು ರೀಡಿಂಗ್ ನೋಡಿದಾಗ ಮೀಟರ್‌ನ ದಾಖಲಾತಿಗಳು ಸರಿಯಿಲ್ಲವೆಂದು ಮೀಟರ್‌ನ್ನು ಕಳಚಿಕೊಂಡು ಹೋಗಿದ್ದಾರೆ. ನಂತರದಲ್ಲಿ ಕಾರ್ತಿಕ್ ಮತ್ತೊಂದು ಮೀಟರ್ ತಂದು ಅಳವಡಿಸಿದ್ದರೂ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ವಿಚಾರಿಸಿದರೆ ಉಡಾಪೆಯಿಂದ ಉತ್ತರಿಸುತ್ತಾನೆ ಎಂದು ದೂರಿದರು.

ಇದರ ನಡುವೆಯೂ ಎಚ್.ಎಂ.ಕಾರ್ತಿಕ್ ಎಂಬಾತನಿಗೆ ಕಿರಿಯ ಲೈನ್‌ಮನ್ ಹುದ್ದೆಯಿಂದ ಸಹಾಯಕ ಲೈನ್‌ಮನ್ ಹುದ್ದೆಗೆ ಪದೋನ್ನತಿ ನೀಡಿರುವುದು ನಿಗಮದ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಆರ್ ಇ ಚಂದ್ರಮೌಳಿ, ಆರ್ ಇಇ ರುದ್ರೇಶ್, ಅಕೌಂಟೆಂಟ್ ಶಿವಕುಮಾರ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.ಲೈನ್‌ಮೆನ್‌ಗಳಿಂದ ಹಿಡಿದು ಅಧಿಕಾರಿಗಳವರೆಗೂ ಹಣದ ಹರಿದಾಟ ನಡೆಯುವುದರಿಂದ ಯಾರೂ ಸಹ ರೈತರು ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತನಿಖೆಯಲ್ಲೇ ಕಾಲಹರಣ ಮಾಡುತ್ತಿದ್ದಾರೆ. ತನಿಖೆಯಲ್ಲಿ ಸತ್ಯಾಂಶ ಕಂಡುಬಂದರೂ ನೌಕರರ ವಿರುದ್ಧ ಕ್ರಮ ಜರುಗಿಸದೆ ತಪ್ಪಿತಸ್ಥ ನೌಕರನಿಗೆ ಪದೋನ್ನತಿ ನೀಡುವ ಮೂಲಕ ರೈತರ ತಾಳ್ಮೆಯನ್ನೇ ಪರೀಕ್ಷಿಸುವಂತಹ ಅಧಿಕಾರಿಗಳಿದ್ದಾರೆ. ಈ ಪುರುಷಾರ್ಥಕ್ಕೆ ಜನಸಂಪರ್ಕ ಸಭೆ ನಡೆಸುವ ಅಗತ್ಯವಾದರೂ ಏನು?.

- ಎಚ್.ಡಿ.ಕೃಷ್ಣ, ರೈತ, ಹೆಮ್ಮಿಗೆಆಲೆಮನೆಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವುದಿಲ್ಲ. ವಿದ್ಯುತ್ ಕಡಿತಗೊಳಿಸುವ ಬಗ್ಗೆ ಮುಂಚಿತವಾಗಿ ತಿಳಿಸುವುದೂ ಇಲ್ಲ. ಇದ್ದಕ್ಕಿದ್ದಂತೆ ವಿದ್ಯುತ್ ಲೈನ್‌ಗಳನ್ನು ಬಿಚ್ಚುವುದು, ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸುವುದು. ಅಧಿಕಾರಿಗಳು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಳ್ಳುವುದು ನಡೆದೇ ಇದೆ. ಇದರ ಬಗ್ಗೆ ದೂರುಗಳನ್ನು ಸಲ್ಲಿಸುತ್ತಿದ್ದರೂ ಪ್ರಯೋಜನ ಮಾತ್ರ ಆಗುತ್ತಿಲ್ಲ.

- ಭಾಸ್ಕರ್, ಭೂತನಹೊಸೂರು