ಲವಲವಿಕೆಯಿಂದ ಬದುಕನ್ನು ಪ್ರತಿ ಹಂತದಲ್ಲೂ ರೂಢಿಸಿಕೊಂಡರೆ ವೃತ್ತಿ ಜೀವನ ನಿರ್ವಹಣೆ ಅಧಿಕಾರಿ ಸದಾ ಚಟುವಟಿಕೆ

ಕೊಟ್ಟೂರು: ಸದಾ ಜೀವನ್ಮುಖಿ ಕರ್ತವ್ಯಶೀಲರಿಗೆ ನಿವೃತ್ತಿ ಅನ್ವಯಿಸುವುದೇ ಇಲ್ಲ. ಜೊತೆಗೆ ಜನಪರತೆ ಮೈಗೂಡಿಸಿಕೊಂಡರೆ ಜೀವತಾವಧಿಯವರಿಗೂ ಪ್ರತಿ ನೌಕರ ಯಶಸ್ವಿ ಅಧಿಕಾರಿಯಾಗಿ ಜನಮಾನಸದಲ್ಲಿ ಸದಾ ಇರುತ್ತಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರಶೇಖರ ವಸ್ತ್ರದ ಹೇಳಿದರು.

ಪಟ್ಟಣದ ಮರುಳಸಿದ್ದೇಶ್ವರ ಕನ್ವೇಷನಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಶಿವನಗುತ್ತಿಯವರ ಸೇವಾ ನಿವೃತ್ತಿಯ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಲವಲವಿಕೆಯಿಂದ ಬದುಕನ್ನು ಪ್ರತಿ ಹಂತದಲ್ಲೂ ರೂಢಿಸಿಕೊಂಡರೆ ವೃತ್ತಿ ಜೀವನ ನಿರ್ವಹಣೆ ಅಧಿಕಾರಿ ಸದಾ ಚಟುವಟಿಕೆ ಜೊತೆಗೆ ಆರೋಗ್ಯ ಪೂರ್ಣ ಸಂಸ್ಥೆ ಮತ್ತು ಸಮಾಜವನ್ನು ಯಶಸ್ವಿಯಾಗಿ ಕಟ್ಟಬಲ್ಲ ಎನ್ನುವುದಕ್ಕೆ ಎಂ.ಎಸ್. ಶಿವನಗುತ್ತಿ ಕಾರ್ಯ ನಿರ್ವಹಣೆ ಸಂಕೇತವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರತಿಯೊಬ್ಬರ ಬದುಕಿಗೊಂದು ನೆಮ್ಮದಿಯ ಆಸರೆಯಾಗುವ ಜೀವವಿಮಾ ನಿಗಮದ ಪಾಲಿಸಿದಾರರನ್ನಾಗಿ ಸಾಮಾನ್ಯ ಜನರನ್ನು ತೊಡಗಿಸಿಕೊಳ್ಳುತ್ತಿದ್ದ ಶಿವನಗುತ್ತಿಯವರ ಕಾರ್ಯವೈಖರಿ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.

ಬಿಇಒ ಮೈಲೇಶ್ ಬೇವೂರು, ಎಲ್‌ಐಸಿ ಹಿರಿಯ ಮ್ಯಾನೇಜರ್ ಧನುಂಜಯ, ಡಾ.ಬಿ.ಸಿ. ಮೂಗಪ್ಪ ಮಾತನಾಡಿ, ಶಿವನಗುತ್ತಿ ಯವರ ನಿವೃತ್ತಿಯ ನಂತರ ಸದಾ ಜನಮಾನಸದಲ್ಲಿ ಉಳಿದುಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿರುವರು ಮಾದರಿ ಎಂದರು.

ರಾಜ್ಯ ಬೀಜ ನಿಗಮದ ನಿರ್ದೇಶಕ ಎಸ್.ರಾಜೇಂದ್ರಪ್ರಸಾದ್ ಮಾತನಾಡಿದರು. ನಿವೃತ್ತಿ ಹೊಂದಿದ ಎಂ.ಶಿವನಗುತ್ತಿ ದಂಪತಿಯನ್ನು ನೆರೆದಿದ್ದವರು ಮತ್ತು ಕೊಟ್ಟೂರೇಶ್ವರ ಕಲಾರಂಗದ ಬಳಗದವರು ಸನ್ಮಾನಿಸಿ ಅಭಿನಂದಿಸಿದರು.

ಹರಪನಹಳ್ಳಿಯ ಎಲ್‌ಐಸಿ ಅಧಿಕಾರಿ ರಾಜೇಶ, ಕೆ.ಫಣಿರಾಜ್, ಅಂಜಿನಪ್ಪ, ಎಂ.ಮರಿಸ್ವಾಮಿ, ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಡಿ.ಶಿವಚರಣ ಇದ್ದರು.

ಶೃತಿ ಚಂದ್ರಪ್ಪ, ಕವನ ವಾಚಿಸಿದರು. ನಿರ್ಮಲಾ ಶಿವನಗುತ್ತಿ ಸ್ವಾಗತಿಸಿದರು. ಪೂರ್ಣ ಪ್ರಫುಲ್ಲ ಚಂದ್ರ ನಿರೂಪಿಸಿದರು.