ಕನ್ನಡಪ್ರಭ ವಾರ್ತೆ ಹನೂರು

ದೇಶಾದ್ಯಂತ ಅಡುಗೆ ಅನಿಲ ಸಮಸ್ಯೆ ಉಂಟಾಗುತ್ತಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲಿ ಅಡುಗೆ ಅನಿಲ ಕೊರತೆ ಇಲ್ಲ, ದಾಸೋಹ ವ್ಯವಸ್ಥೆ ಎಂದಿನಂತೆ ನಡೆಯುತ್ತಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ತಿಳಿಸಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಿದ್ದು, ಬರುವ ಭಕ್ತಾದಿಗಳಿಗೆ ಬೇಕಾದ ಪ್ರಸಾದ ತಯಾರಿಸಲು ಅಡುಗೆ ಅನಿಲ ಕೊರತೆ ಉಂಟಾಗಿಲ್ಲ ಎಂದು ಹೇಳಿದರು.

ಮಧ್ಯ ಪ್ರಾಂತ್ಯ ಕೊಲ್ಲಿ ರಾಷ್ಟ್ರದಲ್ಲಿ ಯುದ್ಧ ನಡೆಯುತ್ತಿರುವುದರಿಂದ ದೇಶಾದ್ಯಂತ ಅನಿಲ ಸಮಸ್ಯೆ ಉಂಟಾಗಿದೆ, ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ದಾಸೋಹ ಭವನ ಮತ್ತು ಲಡ್ಡು ತಯಾರಿಕೆಗೆ ಸದ್ಯ ಅನಿಲ ಸಮಸ್ಯೆ ಇಲ್ಲ. ಈಗಾಗಲೇ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 150 ಅನಿಲ ಸಿಲಿಂಡರ್ ಗಳನ್ನು ದಾಸ್ತಾನು ಮಾಡಲಾಗಿದೆ. ಅನಿಲ ಕೊರತೆಯಾಗದಂತೆ ಅಡುಗೆ ಅನಿಲ ಸರಬರಾಜು ಮಾಡುವ ವ್ಯವಸ್ಥಾಪಕರ ಜೊತೆ ಮಾತನಾಡಿದ್ದೇವೆ. ಜೊತೆಗೆ ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ಸಹ ತರಲಾಗಿದೆ ಎಂದು ತಿಳಿಸಿದ್ದಾರೆ.

--------

ಯುಗಾದಿ ಹಬ್ಬಕ್ಕೂ ಸಮಸ್ಯೆ ಉಂಟಾಗುವುದಿಲ್ಲ:


ಮುಂದೆ ಬರುವ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವ ಸೇರಿದಂತೆ ವಿಶೇಷ ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು.

ಎ.ಇ. ರಘು, ಕಾರ್ಯದರ್ಶಿ,ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ