ರೋಣ: ಕಾಯಕಕ್ಕೆ ಎತ್ತರವಾದ ಗೌರವ ಸ್ಥಾನವಿದ್ದು, ಆದ್ದರಿಂದ ಪ್ರತಿಯೊಬ್ಬರೂ ಕಾಯಕದ ಮೂಲಕ ಸ್ವಾವಲಂಬನೆ ಜೀವನ ಸಾಗಿಸಬೇಕು. ಅಂದಾಗ ಬದುಕು ಪರಿಪೂರ್ಣವಾಗುವುದು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಗುರುವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಾಸಕ ಜಿ.ಎಸ್. ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಮಹಿಳಾ ಉದ್ಯಮಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆ ಎಲ್ಲ ರಂಗದಲ್ಲಿ ಮುಂದಿದ್ದಾಳೆ. ಅಂದು ಸೈಕಲ್ ಹೊಡೆದ ಹೆಣ್ಣುಮಗಳು ಇಂದು ವಿಮಾನ ಚಾಲನೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ಆಕೆಯ ಸಾಧನೆ ಮೆಚ್ಚಲೇಬೇಕು. ಉದ್ಯೋಗದಲ್ಲಿ ಸಣ್ಣದು, ದೊಡ್ಡದು ಎಂಬುದಿಲ್ಲ. ಯಾವುದೇ ಉದ್ಯೋಗವಿರಲಿ, ಅದನ್ನು ಎತ್ತರಕ್ಕೆ ಕೊಂಡೊಯುವ ಶಕ್ತಿ ನಮ್ಮಲ್ಲಿರಬೇಕು. ಸೋನಿಯಾಗಾಂದಿ, ಜಯಲಲಿತಾ, ಮಮತಾ ಬ್ಯಾನರ್ಜಿ ಅಷ್ಟೇ ಏಕೆ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಉತ್ತಮ ಆಡಳಿತ ನೀಡಿ, ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

ಮನೆಯಲ್ಲಿ ಕುಳಿತರೆ ದೇವರ ಆಶೀರ್ವಾದ ಸಿಗುವುದಿಲ್ಲ. ಬದಲಾಗಿ ಉದ್ಯೋಗ ಪಡೆದುಕೊಳ್ಳಬೇಕೆಂಬ ಹಂಬಲ ಇದ್ದರೆ ದೇವರ ಆಶೀರ್ವಾದ ಸಿಗುತ್ತದೆ. ಇಂದು ಪುರುಷರು ನಿರುದ್ಯೋಗಿಯಾಗುತ್ತಿದ್ದಾರೆ. ಈಗ ಕಾಲ ಬದಲಾಗಿದೆ. ಉದ್ಯೋಗಂ ಸ್ತ್ರೀ ಲಕ್ಷಣಂ ಎಂಬಂತಾಗಿದೆ. ಮಹಿಳೆಯರನ್ನು ಯಾರು ಗೌರವಿಸುತ್ತಾರೋ ಅವರು ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ. ಈ ನಿಟ್ಟಿನಲ್ಲಿ ಶಾಸಕ ಜಿ.ಎಸ್. ಪಾಟೀಲರು ಮಹಿಳೆಯರಿಗೆ ಅತ್ಯಂತ ಗೌರವ ಕೊಡುವುದರ ಜತೆಗೆ ಮಹಿಳಾ ಸಬಲಿಕರಣಕ್ಕೆ ಅಪಾರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಪಾಟೀಲ ಮಾತನಾಡಿ, ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವ ಮಹಿಳೆಯರನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಮಹಿಳಾ ಸ್ವಾವಲಂಬಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ನಟಿ ಕಾರುಣ್ಯ ರಾಮ್ ಮಾತನಾಡಿ, ಕೆಲಸ ಯಾವುದೇ ಇರಲಿ, ಅದರಲ್ಲಿ ಶ್ರದ್ಧೆ ಹಾಗೂ ಪ್ರಾಮಾಣಿಕತೆ ಇದ್ದರೆ ಸಾಧನೆ ಸುಲಭವಾಗುತ್ತದೆ. ಮಹಿಳೆಯರು ಸ್ವಂತ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಬೇಕು. ತಾವು ಕೂಡ ಯಶಸ್ವಿ ಉದ್ಯಮಿಯಾಗಲು ಶ್ರಮಿಸಬೇಕು. ಅಂತಹ ಶಕ್ತಿ, ಸಾಮರ್ಥ್ಯ ಪ್ರತಿಯೊರ್ವ ಮಹಿಳೆಯರಲ್ಲಿದೆ ಎಂದರು.

ಜಲಕೃಷಿ ತಜ್ಞ ಡಾ. ನಬಿ ಮಾತನಾಡಿ, ಮಣ್ಣಿಲ್ಲದೆ ಕೇವಲ ನೀರಿನ ಮೂಲಕ ಕೃಷಿ ಮಾಡುವುದು ಈಗ ಸುಲಭವಾಗಿದೆ. ಟೆಕ್ನಾಲಜಿ ಮೂಲಕ ಜಲ ಕೃಷಿ ಮಾಡಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇದಕ್ಕೆ ಸಬ್ಸಿಡಿ ದೊರೆಯಲಿದ್ದು, ಆಸಕ್ತರು ಜಲಕೃಷಿ ಮಾಡಬಹುದು ಎಂದರು.

ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಯಲಕ್ಣ್ಮೀ ಚಿಕ್ಕಮಠ, ಶಾಸಕ ಜಿ.ಎಸ್. ಪಾಟೀಲ, ಐ.ಎಸ್. ಪಾಟೀಲ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಶರಣಪ್ಪ ಬೆಟಗೇರಿ, ಸಿದ್ದಣ್ಣ ಬಂಡಿ, ಅನ್ನಪೂರ್ಣಾದೇವಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.