ಸಾರಾಂಶ
ಮಾಜಿ ಸಿಎಂ । ಮಹಾ ಕುಂಭಾಭಿಷೇಕ
ಚನ್ನರಾಯಪಟ್ಟಣ: ವಿಶ್ವದಲ್ಲೇ ದೇಶ ಬಹಳ ಮುಂದುವರೆದಿದ್ದು ಅಭಿವೃದ್ಧಿ ಹೊಂದುತ್ತಿದೆ. ಆದರೆ ನ್ಯಾಯ, ನೀತಿ, ಸತ್ಯ, ಧರ್ಮ ಉಳಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಮಲ್ಲವನಘಟ್ಟದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ, ನೂತನ ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಎಷ್ಟು ಬೇಗ ಅಭಿವೃದ್ಧಿಯಾಗುತ್ತೇವೆ, ಎಷ್ಟು ಹಣ ಮಾಡುತ್ತೇವೆ ಎಂಬುದರ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಬೇರೆಯವರಿಗಿಂತ ಹೆಚ್ಚು ಶ್ರೀಮಂತರಾಗಬೇಕು ಎಂಬ ದುರಾಸೆ ಹೆಚ್ಚಾಗುತ್ತಿದೆ ಎಂದು ಹೇಳಿದರು.ಹಿಂದಿನ ಕಾಲದಲ್ಲಿ ಕುಟುಂಬಗಳಲ್ಲಿ ಪ್ರೀತಿ, ವಾತ್ಸಲ್ಯ ಹೆಚ್ಚಾಗಿತ್ತು. ಆದರೆ ಈಗ ಫ್ಯಾಷನ್ ಯುಗಕ್ಕೆ ಹೆಚ್ಚು ಮಾರುಹೋಗುತ್ತಿರುವ ಯುವಕರು ಸಂಸ್ಕಾರ, ಸಂಸ್ಕೃತಿಗೆ ಆದ್ಯತೆ ನೀಡಬೇಕು. ಒಟ್ಟು ಕುಟುಂಬದಲ್ಲಿ ಇರದೆ ಪ್ರತ್ಯೇಕ ಸಂಸಾರ ನಡೆಸಲು ಇಷ್ಟ ಪಡುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹಳ್ಳಿಗಳಿದ್ದರೆ ದೇಶ ಉಳಿಯುಲು ಸಾಧ್ಯ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸುಮಾರು ೫೦೦ ವರ್ಷಗಳ ಇತಿಹಾಸವಿರುವ ಶ್ರೀ ವೀರಾಂಜನೇಯ ದೇಗುಲ ಶಿಥಿಲಗೊಂಡಿದ್ದು ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಕಾರದೊಂದಿಗೆ ಒಂದು ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದ್ದು ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ದೇವಸ್ಥಾನ ನಿರ್ಮಾಣಗಳಿಂದ ಮಾತ್ರ ಸಾಧ್ಯ, ಹಾಸನಕ್ಕೆ ಕುಮಾರಸ್ವಾಮಿಯವರು ಆಗಮಿಸಿ ಪಕ್ಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ದೇವಸ್ಥಾನ ಉದ್ಘಾಟನೆಗೆ ಆಗಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರಿಗೆ ಆಂಜನೇಯನ ಕೃಪೆಯಿಂದ ಆರೋಗ್ಯ ಭಾಗ್ಯ ಕೊಟ್ಟು ರಾಜಕೀಯದಲ್ಲಿ ದೊಡ್ಡ ಶಕ್ತಿ ಕೊಡಲಿ ಎಂದರು.ಮಲ್ಲನಘಟ್ಟ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಲಿಂಗೇಶ್, ಕಗ್ಗೆರೆ ಬಾಬು, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಮಾಜಿ ಗ್ರಾಪಂ ಸದಸ್ಯರಾದ ಮಂಜೇಗೌಡ, ಜವರೇಗೌಡ, ಮುಖಂಡರಾದ ನಂಜುಂಡೇಗೌಡ, ಅನಂತ್, ಉಮೇಶ್ ಇದ್ದರು.ಚನ್ನರಾಯಪಟ್ಟಣದ ಮಲ್ಲವನಘಟ್ಟದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.