ಸಾರಾಂಶ
ಟಿ. ನರಸೀಪುರ ತಾಲೂಕು ಬಿ.ಸೀಹಳ್ಳಿಯ ಕೃಷ್ಣೇಗೌಡ ಅವರು ಹೈನುಗಾರಿಕೆಯಿಂದಲೇ ಮಾಸಿಕ 1.40 ಲಕ್ಷ ರು.ಗಳವರೆಗೆ ಆದಾಯ ಗಳಿಸುತ್ತಿದ್ದಾರೆ.ಅವರಿಗೆ ಸುಮಾರು 15 ಎಕರೆ ಜಮೀನಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಟಿ. ನರಸೀಪುರ ತಾಲೂಕು ಬಿ.ಸೀಹಳ್ಳಿಯ ಕೃಷ್ಣೇಗೌಡ ಅವರು ಹೈನುಗಾರಿಕೆಯಿಂದಲೇ ಮಾಸಿಕ 1.40 ಲಕ್ಷ ರು.ಗಳವರೆಗೆ ಆದಾಯ ಗಳಿಸುತ್ತಿದ್ದಾರೆ.ಅವರಿಗೆ ಸುಮಾರು 15 ಎಕರೆ ಜಮೀನಿದೆ. ನೀರಾವರಿ ಸೌಲಭ್ಯವೂ ಉಂಟು. ಕೊಳವೆ ಬಾವಿಗಳನ್ನು ಕೂಡ ಕೊರೆಸಿದ್ದಾರೆ.
ನಾಲ್ಕು ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದು, ನಂಜನಗೂಡಿನ ಅಳಗಂಚಿಯಲ್ಲಿರುವ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಪೂರೈಸುತ್ತಾರೆ. ನಾಲ್ಕೂವರೆ ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆಯುತ್ತಾರೆ.
3500 ಅಡಿಕೆ ಮರಗಳಿವೆ. ಇನ್ನೂ ಫಲ ಬಂದಿಲ್ಲ. 250 ತೆಂಗಿನ ಮರಗಳಿವೆ. 30-40 ಫಲ ನೀಡುತ್ತಿವೆ.ಇವರು ಹೈನುಗಾರಿಕೆಯನ್ನು ಉಪ ಕಸುಬಾಗಿ ಕೈಗೊಂಡಿದ್ದಾರೆ. 30 ಹಸುಗಳಿವೆ. ಪ್ರತಿನಿತ್ಯ ಡೇರಿಗೆ 150-160 ಲೀಟರ್ ಹಾಲು ಪೂರೈಸುತ್ತಾರೆ.
ಇದರಿಂದ ಮಾಸಿಕ 1.30 ರಿಂದ 1.40 ಲಕ್ಷ ರು.ವರೆಗೆ ಆದಾಯವಿದೆ. 30 ಕುರಿ ಮತ್ತು ಮೇಕೆಗಳಿವೆ. ಈಶಾ ಫೌಂಡೇಷನ್ನಿಂದ ಅರಣ್ಯ ಸಸಿ ಪಡೆಯಲು ಮಣ್ಣು ಪರೀಕ್ಷೆ ಮಾಡಿಸಿದ್ದರು. ಯಾವುದೇ ಸಮಸ್ಯೆ ಇಲ್ಲ. ಕೃಷಿ ಯಂತ್ರೋಪಕರಣ ಬಳಸುತ್ತಾರೆ. ಸಣ್ಣ ಟಿಲ್ಲರ್ ಇದೆ. ಹಾಲು ಕರೆಯಲು ಯಂತ್ರಗಳನ್ನು ಬಳಸುತ್ತಾರೆ.
ಜಾನುವಾರುಗಳಿಗೆ ಇವರ ಜಮೀನಿನಲ್ಲಿಯೇ ಹಸಿರು ಮೇವು ಬೆಳೆಸುತ್ತಾರೆ. ಕೊಟ್ಟಿಗೆ ಗೊಬ್ಬರದ ಜೊತೆಗೆ ಎರೆಹುಳು ತಯಾರಿಕಾ ತೊಟ್ಟಿ ಕೂಡ ಇದೆ. ಒಟ್ಟಾರೆ ವಾರ್ಷಿಕವಾಗಿ ನಾಲ್ಕೈದು ಲಕ್ಷ ರು. ವೆಚ್ಚವಾದರೆ 10-15 ಲಕ್ಷ ರು. ಆದಾಯವಿದೆ.
ಸಂಪರ್ಕ ವಿಳಾಸ
ಕೃಷ್ಣೇಗೌಡ ಬಿನ್ ಬಿ,ಸಿ. ಜಯರಾಮೇಗೌಡ ಬಿ. ಸೀಹಳ್ಳಿಬನ್ನೂರು ಹೋಬಳಿ ಟಿ, ನರಸೀಪುರ ತಾಲೂಕು ಮೈಸೂರು ಜಿಲ್ಲೆ
ಮೊ.72597 68675
ಕೃಷಿ ಕಷ್ಟ ಏನಿಲ್ಲ. ಆಳುಗಳದ್ದೇ ಸಮಸ್ಯೆ. ಇದರಿಂದ ಕೆಲವೊಮ್ಮೆ ಹಿಂಸೆ ಆಗುತ್ತದೆ. ಸರಿಯಾಗಿ ಮಾಡಿದರೆ ಆದಾಯ ಮಾಡಬಹುದು
ಕೃಷ್ಣೇಗೌಡ, ಬಿ.ಸೀಹಳ್ಳಿ
ಸತತ 24 ವರ್ಷಗಳಿಂದ ಅಧ್ಯಕ್ಷರು!
-ಬಿ. ಸೀಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಳೆದ 24 ವರ್ಷಗಳಿಂದಲೂ ಕೃಷ್ಣೇಗೌಡರೇ ಅಧ್ಯಕ್ಷರು. 2009 ರಿಂದಲೂ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಡೇರಿಗೆ ಅತಿ ಹೆಚ್ಚು ಹಾಲು ಪೂರೈಸುತ್ತಿದ್ದಾರೆ. ಕೃಷ್ಣೇಗೌಡರ ಮಗ ರೇವಂತ್ ಮೈಸೂರಿನ ಅಮೃತಾನಂದಮಯಿ ಕಾಲೇಜಿನಲ್ಲಿ ಬಿಸಿಎ ಪೂರೈಸಿದ್ದು, ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಾರೆ. ಮಿಥುನ್ ಹಾಗೂ ಚಿರಂತ್ ಪದವಿವರೆಗೆ ಓದಿದ್ದಾರೆ. ಈಗ ಕೊನೆಯವರಿಬ್ಬರು ಅಪ್ಪನಿಗೆ ಕೃಷಿಯಲ್ಲಿ ಸಾಥ್ ನೀಡುತ್ತಿದ್ದಾರೆ.