ಕಳ್ಳನ ಬಂಧನ: ₹5.98 ಲಕ್ಷದ ಸ್ವತ್ತುಗಳ ಜಪ್ತಿ

| Published : Jun 10 2025, 03:41 AM IST

ಸಾರಾಂಶ

ತಾಲೂಕಿನ ದೊಡ್ಡಬಾತಿ ಗ್ರಾಮದ ಶುಂಠಿ, ಬೆಳ್ಳುಳ್ಳಿ ವ್ಯಾಪಾರಿ ಫಾತಿಮಾ ಎಂಬವರ ಮನೆಯಲ್ಲಿ ಜೂ.3ರಂದು ಬೀಗ ಒಡೆದು, 71 ಗ್ರಾಂ ಚಿನ್ನಾಭರಣ, 75 ಗ್ರಾಂ ಬೆಳ್ಳಿ ವಸ್ತು, ₹2090 ನಗದು ಕಳವು ಮಾಡಿ, ಮನೆ ತುಂಬಾ ಖಾರದ ಪುಡಿ ಚೆಲ್ಲಿ ಹೋಗಿದ್ದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಲೆಗೆ ಕೆಡವಿದ್ದಾರೆ.

- ಶುಂಠಿ, ಬೆಳ್ಳುಳ್ಳಿ ಮಾರುವ ಮಹಿಳೆ ಮನೆಯಲ್ಲಿ ಕದ್ದಿದ್ದ ಸೋಡಾ ವ್ಯಾಪಾರಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ದೊಡ್ಡಬಾತಿ ಗ್ರಾಮದ ಶುಂಠಿ, ಬೆಳ್ಳುಳ್ಳಿ ವ್ಯಾಪಾರಿ ಫಾತಿಮಾ ಎಂಬವರ ಮನೆಯಲ್ಲಿ ಜೂ.3ರಂದು ಬೀಗ ಒಡೆದು, 71 ಗ್ರಾಂ ಚಿನ್ನಾಭರಣ, 75 ಗ್ರಾಂ ಬೆಳ್ಳಿ ವಸ್ತು, ₹2090 ನಗದು ಕಳವು ಮಾಡಿ, ಮನೆ ತುಂಬಾ ಖಾರದ ಪುಡಿ ಚೆಲ್ಲಿ ಹೋಗಿದ್ದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಲೆಗೆ ಕೆಡವಿದ್ದಾರೆ.

ಹೊನ್ನಾಳಿ ಪಟ್ಟಣದ ನಿವಾಸಿ, ಸಂತೆಗಳಲ್ಲಿ ಸೋಡಾ ವ್ಯಾಪಾರ ಮಾಡುವ ಇಮ್ದಾದ್ (44) ಬಂಧಿತ ಆರೋಪಿ. ಕಳವು ಕೃತ್ಯ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಸ್ಕೂಟರ್ ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಫಾತಿಮಾ ಅವರು ಮನೆ ಬಾಗಿಲು, ಗೇಟ್‌ಗೆ ಬೀಗ ಹಾಕಿಕೊಂಡು ವ್ಯಾಪಾರಕ್ಕೆಂದು ಹರಿಹರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಫಾತಿಮಾ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗ್ರಾಮಾಂತರ ಸಿಪಿಐ ಇ.ವೈ.ಕಿರಣಕುಮಾರ ನೇತೃತ್ವದಲ್ಲಿ ಸಿಬ್ಬಂದಿ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತು. ಆಗ ಪಿರ್ಯಾದಿಗೆ ಕೆಲ ದಿನಗಳ ಹಿಂದೆ ಪರಿಚಯವಾಗಿದ್ದ ಸೋಡಾ ವ್ಯಾಪಾರಿ ಇಮ್ದಾದ್‌ ಮೇಲೆ ಅನುಮಾನಗೊಂಡು ಜೂ.4ರಂದು ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಆಗ ಇಮ್ದಾದ್‌ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯಿಂದ ₹5.30 ಲಕ್ಷ ಮೌಲ್ಯದ 71 ಗ್ರಾಂ ಚಿನ್ನಾಭರಣ, ₹16 ಸಾವಿರ ಮೌಲ್ಯದ 75 ಗ್ರಾಂ ಬೆಳ್ಳಿ ವಸ್ತುಗಳು, ₹2090 ನಗದು, ಸಂಪೂರ್ಣ ಸ್ವತ್ತು, ಕೃತ್ಯಕ್ಕೆ ಬಳಸಿದ ₹50 ಸಾವಿರ ಮೌಲ್ಯದ ಸ್ಕೂಟರ್ ಸೇರಿದಂತೆ ಒಟ್ಟು ₹5,98,090 ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.

ವೃತ್ತ ನಿರೀಕ್ಷಕ ಇ.ವೈ.ಕಿರಣಕುಮಾರ, ಪಿಎಸ್‌ಐ ಜೋವಿತ್‌ರಾಜ್‌, ಸಿಬ್ಬಂದಿ ನಾಗಭೂಷಣ, ಪಿ.ಎಂ. ವೀರೇಶ, ಸಿ.ಹನುಮಂತಪ್ಪ, ಅಧಿಕಾರಿ-ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.

- - -

-6ಕೆಡಿವಿಜಿ12.ಜೆಪಿಜಿ:

ದೊಡ್ಡಬಾತಿಯ ವ್ಯಾಪಾರಿ ಫಾತಿಮಾ ಮನೆಯಲ್ಲಿ ಕಳವು ನಡೆಸಿದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಸ್ಕೂಟರ್ ಸಮೇತ ಬಂಧಿಸಿ, ಚಿನ್ನ-ಬೆಳ್ಳಿ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದರು.