ಸಾರಾಂಶ
ಬಂಗಾರಪೇಟೆ: ಮನೆ ಕಳ್ಳತನದಲ್ಲಿ ತೊಡಗಿದ್ದ ಆರೋಪಿಯೊಬ್ಬರನ್ನು ಮಾಲು ಸಮೇತ ಕಾಮಸಮುದ್ರಂ ಪೊಲೀಸರು ಬಂಧಿಸಿ ಆರೋಪಿಯಿಂದ ೧.೧೫ ಲಕ್ಷ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬಲಮಂದೆ ಗ್ರಾಮದ ಸೈಯದ್ ನವಾಜ್ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದರ ಬಗ್ಗೆ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಜಿ.ಸಿ. ನಾರಾಯಣಸ್ವಾಮಿ ನೇತೃತ್ವದ ಅಪರಾಧ ಪತ್ತೆ ತಂಡವು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ತಾಲೂಕಿನ ನಿವಾಸಿ ಹೇಮಂತ್ಕುಮಾರ್ನನ್ನು ಬಂಧಿಸಿ, ೧.೧೫ ಲಕ್ಷ ರು. ಮೌಲ್ಯದ ೧೪ ಗ್ರಾಂ ಒಂದು ಜೊತೆ ಚಿನ್ನದ ಓಲೆ ಮತ್ತು ೨೧೦ ಗ್ರಾಂ ತೂಕದ ೩ ಜೊತೆ ಬೆಳ್ಳಿ ಚೈನ್ ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಬೇಧಿಸುವಲ್ಲಿ ಕಾಮಸಮುದ್ರಂ ಸಿಪಿಐ ಜಿ.ಸಿ. ನಾರಾಯಣಸ್ವಾಮಿ, ಪಿಎಸ್ಐ ಕಿರಣ್ಕುಮಾರ್, ಎ.ಎಸ್.ಐ ಶ್ರೀನಿವಾಸ್, ಸಿಬ್ಬಂದಿ ದೇವರಾಜ್, ಅಯ್ಯಚಾರಿ, ಹರೀಶ್, ಚಾಲಕ ಧನಂಜಯ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಪ್ರಶಂಸಿಸಿದ್ದಾರೆ.