ಸಾರಾಂಶ
ಬೆಂಗಳೂರು : ‘ರಾಜ್ಯದಲ್ಲಿ ಉತ್ತಮ ಮಳೆಯಿಂದಾಗಿ ರೈತರು ಸಂತಸದಿಂದ ಇದ್ದಾರೆ. ಹೀಗಾಗಿ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದು, ಅಧಿಕ ಪಂಚಮಿ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವನ್ನು ಹತ್ತು ದಿನಗಳ ಬದಲಿಗೆ ಹನ್ನೊಂದು ದಿನ ಆಚರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೆ.22ರಂದು ಬೆಳಗ್ಗೆ 10.10 ಗಂಟೆಗೆ ಚಾಮುಂಡಿ ಬೆಟ್ಟದ ಮೇಲೆ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಅ.2 ರಂದು ಮಧ್ಯಾಹ್ನ 1 ಗಂಟೆಗೆ ನಂದಿಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಲಾಗುವುದು. ಸಂಜೆ 4.42 ಗಂಟೆಯಿಂದ 4.06 ಗಂಟೆವರೆಗೆ ತಾಯಿ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು. ಅ.2ರಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧೀಜಿ ಅವರ ಕುರಿತ ಸ್ತಬ್ಧಚಿತ್ರಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ನಡೆಸಿ ಬಳಿಕ ದಸರಾ ಆಚರಣೆ ಕುರಿತು ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು.
ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿ ಕೆರೆ ಕಟ್ಟೆ, ಜಲಾಶಯಗಳು ತುಂಬಿ ರೈತರ ಮುಖದಲ್ಲಿ ಸಂತಸ ಮೂಡಿದೆ. ಸರ್ಕಾರದ ಆಡಳಿತದ ಬಗ್ಗೆಯೂ ಎಲ್ಲರಿಗೂ ಖುಷಿ ಇದೆ. ಕೃಷಿ ಚಟುವಟಿಕೆಗಳು ಪ್ರಾರಂಭವಾಗಿ ರೈತರು ಸಮಾಧಾನ, ನೆಮ್ಮದಿಯಿಂದ ಇದ್ದಾರೆ. ಹೀಗಾಗಿ ದಸರಾ ಆಚರಣೆಯನ್ನು ವಿಜೃಂಭಣೆಯಿಂದ ಮಾಡಲು ನಿರ್ಧರಿಸಲಾಗಿದೆ. ಕಳೆದ ವರ್ಷ 40 ಕೋಟಿ ರು. ಖರ್ಚಾಗಿತ್ತು. ಈ ವರ್ಷವೂ ಅದ್ಧೂರಿಯಾಗಿ ಆಚರಿಸಲು ಸೂಚಿಸಿದ್ದು, ಕಾರ್ಯನಿರ್ವಹಣಾ ಸಮಿತಿ ಎಷ್ಟು ಖರ್ಚು ಮಾಡುತ್ತದೆಯೋ ಅಷ್ಟು ಹಣವನ್ನು ಸರ್ಕಾರ ನೀಡಲಿದೆ. ಇದನ್ನು ಜನರ ಮಹೋತ್ಸವ ಹಾಗೂ ಸರ್ಕಾರದ ಉತ್ಸವವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನೂಕು ನುಗ್ಗಲಾಗದಂತೆ ಕ್ರಮಕ್ಕೆ ಸೂಚನೆ:
ಪ್ರಸ್ತುತ ವರ್ಷದ ದಸರಾ ಆಚರಣೆ ವೇಳೆ 10 ಲಕ್ಷಕ್ಕೂ ಹೆಚ್ಚು ಜನರು ಬರಬಹುದು ಎಂಬ ನಿರೀಕ್ಷೆಯಿದೆ. ಜಂಬೂ ಸವಾರಿ ವೇಳೆ ನೂಕು ನುಗ್ಗಲು ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಡೀ ದಸರಾ ಆಚರಣೆ ವೇಳೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. ಜತೆಗೆ ಪೊಲೀಸರು ಜನಸ್ನೇಹಿಗಳಾಗಿ ವರ್ತಿಸಬೇಕು. ಪ್ರವಾಸಿಗರಿಗೆ ರಕ್ಷಣೆ, ಮಾರ್ಗದರ್ಶನ ನೀಡಬೇಕು ಎಂದು ತಿಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಸಕ್ತ ವರ್ಷ ಅಧಿಕ ಪಂಚಮಿ ಹಿನ್ನೆಲೆಯಲ್ಲಿ ನವರಾತ್ರಿ ಒಂಬತ್ತು ದಿನ ಬದಲಿಗೆ 10 ದಿನ ಆಗಿದೆ. ಹೀಗಾಗಿ ವಿಜಯದಶಮಿ ದಿನ ಸೇರಿ 10 ದಿನ ಬದಲಿಗೆ 11 ದಿನ ಆಗಿದೆ. ಹನ್ನೊಂದು ದಿನವೂ ಅದ್ಧೂರಿಯಾಗಿ ದಸರಾ ಆಚರಣೆಗೆ ನಿರ್ಧರಿಸಲಾಗಿದೆ. ಈ ಹಿಂದೆಯೂ ಎಂಟು ಬಾರಿ ಹನ್ನೊಂದು ದಿನ ದಸರಾ ಆಚರಣೆ ನಡೆದಿದೆ ಎಂದರು.
ದಸರಾ ಆಚರಣೆ ಉದ್ಘಾಟನೆಯನ್ನು ಯಾರಿಂದ ಮಾಡಿಸಬೇಕು ಎಂಬ ಬಗ್ಗೆ ತೀರ್ಮಾನಿಸಲು ಉನ್ನತ ಮಟ್ಟದ ಸಮಿತಿ ನನಗೆ ಅಧಿಕಾರ ನೀಡಿದೆ. ಮಹಿಳೆಯರಿಗೆ ಅವಕಾಶ ನೀಡಬೇಕು, ಗಾಂಧಿವಾದಿಗಳಿಗೆ ಅವಕಾಶ ನೀಡಬೇಕೆಂಬ ಸಲಹೆಗಳು ಬಂದಿವೆ. ಅಂತಿಮವಾಗಿ ನಾನು ತೀರ್ಮಾನ ಮಾಡಿ ಪ್ರಕಟಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ದಸರಾಗೆ ಸಿದ್ದು ಸಿಎಂ ಆಗಿರಲ್ಲ: ಅಶೋಕ್
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಚರಿಸುವುದಿಲ್ಲ. ಹೊಸ ಮುಖ್ಯಮಂತ್ರಿಯೇ ದಸರಾ ಆಚರಿಸುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯ ನುಡಿದರು.
ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ನಲ್ಲಿ ಬದಲಾವಣೆ ಆಗುವ ವಿಚಾರಕ್ಕೆ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ನಿಶ್ಚಿತ. ಶಾಸಕರು ಸಚಿವರು ಈಗ ಅದನ್ನೇ ಹೇಳುತ್ತಿದ್ದಾರೆ. ಅಧಿಕಾರ ಹಸ್ತಾಂತರ ಮೊದಲೇ ನಿಶ್ಚಯವಾಗಿದೆ. ಆದರೂ ಸಿದ್ದರಾಮಯ್ಯ, ಏನೂ ಆಗಿಲ್ಲ ಅನ್ನೋ ರೀತಿ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಅಧಿಕಾರದ ಕಿತ್ತಾಟ ತಾರಕಕ್ಕೆ ಏರಿದೆ. ಈ ಭ್ರಷ್ಟ ಸರ್ಕಾರ ಯಾವಾಗ ಕಿತ್ತು ಹೋಗುತ್ತದೆ ಎಂದು ಜನ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳು ನಮ್ಮ ಪಕ್ಷದಲ್ಲಿ ನಡೆದೇ ಇಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ನಾನು ಮೂರು ತಿಂಗಳಿಗೊಮ್ಮೆ ದೆಹಲಿಗೆ ಹೋಗಿ ವರದಿ ಕೊಡಬೇಕಿದೆ. ಅದರಂತೆ ಮೊನ್ನೆ ದೆಹಲಿಗೆ ಹೋಗಿ ವರದಿ ಕೊಟ್ಟು ಬಂದಿದ್ದೇನೆ. ಮುಂದಿನ 3 ತಿಂಗಳ ನಂತರವೂ ವಿರೋಧ ಪಕ್ಷದ ನಾಯಕನಾಗಿಯೇ ವರದಿ ಕೊಟ್ಟು ಬರುತ್ತೇನೆ. ಹೈಕಮಾಂಡ್ ಸೂಚನೆ ಕೂಡ ಇದೇ ರೀತಿ ಇದೆ ಎಂದು ತಿಳಿಸಿದರು.
ನಮ್ಮ ರಾಜ್ಯಾಧ್ಯಕ್ಷರ ಚುನಾವಣೆ ವಿಚಾರ ಸದ್ಯಕ್ಕಂತೂ ಇಲ್ಲವೇ ಇಲ್ಲ. ಅದರ ಪ್ರಕ್ರಿಯೆ ನಡೆಯೋದಕ್ಕೆ ಬಹಳ ಕಾಲ ಇದೆ. ಇನ್ನೂ ಬೇರೆ ಬೇರೆ ರಾಜ್ಯಗಳದ್ದೆಲ್ಲ ನಡೆಯಬೇಕು. ಕೊನೆಯಲ್ಲಿ ಕರ್ನಾಟಕದ್ದು ನಡೆಯುತ್ತದೆ. ಈ ಸಂದರ್ಭದಲ್ಲಿ ನಮ್ಮಲ್ಲಿ ಬದಲಾವಣೆಯ ಯಾವ ಚರ್ಚೆಯೂ ನಡೆದಿಲ್ಲ ಎಂದರು.
15 ದಿನಕ್ಕೊಮ್ಮೆ ಹಿರಿಯರ ಸಭೆ:
ಮೊನ್ನೆ ಬೆಂಗಳೂರಿನಲ್ಲಿ ಪಕ್ಷದ ಸೂಚನೆಯಂತೆಯೇ ಅಶ್ವತ್ಥನಾರಾಯಣ್ ಮನೆಯಲ್ಲಿ ಸಭೆ ನಡೆಯಿತು. ನಮ್ಮ ಮನೆಯಲ್ಲೇ ನಡೆಯಬೇಕಿತ್ತು. ನಾನು ಇಲ್ಲದ ಕಾರಣ ಅಲ್ಲಿ ನಡೆಯಿತು. ಪ್ರತಿ 15 ದಿನಕ್ಕೊಮ್ಮೆ ಪಕ್ಷದ ಹಿರಿಯರ ಸಭೆ ಮಾಡಿ, ಕೆಲವು ಗೊಂದಲ ಬಗೆಹರಿಸಲು ಸೂಚನೆ ಇದೆ. ಇದರಲ್ಲೂ ಏನೂ ವಿಶೇಷ ಇಲ್ಲ. ಸದ್ಯಕ್ಕೆ ಕರ್ನಾಟಕದ ಬಿಜೆಪಿ ಬದಲಾವಣೆಗಳ ಬಗ್ಗೆ ನನ್ನ ಮುಂದೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಗಳು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.