ಸಾರಾಂಶ
ಸವಣೂರು: ಚುನಾವಣೆ ಪೂರ್ವದಲ್ಲಿ ವಿರೋಧ ಪಕ್ಷದವರು ಪಂಚ ಗ್ಯಾರಂಟಿ ಯೋಜನೆಗಳ ಕುರಿತಾಗಿ ಸಾಕಷ್ಟು ಅಪಹಾಸ್ಯದ ಮಾತುಗಳನ್ನಾಡುತ್ತಿದ್ದರು. ಇದೀಗ ಅವರೇ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಯಾಸೀರ ಅಹ್ಮದ ಖಾನ ಪಠಾಣ ತಿಳಿಸಿದರು.ಸೋಮವಾರ ಪಟ್ಟಣದ ಪಟ್ಟಣದ ಸಾರಿಗೆ ಇಲಾಖೆ ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಡಿ 500 ಕೋಟಿ ಪ್ರಯಾಣಿಕರು ಪ್ರಯಾಣಿಸಿದ ಹಿನ್ನೆಲೆ ಸಿಹಿ ಹಂಚಿ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿರೋಧ ಪಕ್ಷದವರು ಪಂಚ ಗ್ಯಾರಂಟಿ ಜಾರಿಯಾದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ, ನಾನು ಎಂಎಲ್ಎ ಆಗಿ 7 ತಿಂಗಳ ಅವಧಿಯಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಸುಮಾರು 1 ಸಾವಿರ ಕೋಟಿ ರು. ಅನುದಾನ ನೀಡಲಾಗಿದೆ. ಸರ್ಕಾರ ದಿವಾಳಿಯಾದರೆ ₹1 ಸಾವಿರ ಕೋಟಿ ಅನುದಾನ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಗತಿಸಿದ್ದು, ಚುನಾವಣೆ ಪೂರ್ವದಲ್ಲಿ ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ ಎಂದು ಜನತೆಗೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಮೊದಲು10 ಕೆಜಿ ಅಕ್ಕಿಯನ್ನು ನೀಡಲು ಆರಂಭಿಸಲಾಯಿತು. ನಂತರ ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಎರಡು ಸಾವಿರ ನೀಡಲಾಯಿತು. ಶಕ್ತಿ ಮತ್ತು ಯುವನಿಧಿ ಯೋಜನೆಗಳ ಮೂಲಕ ಕೇವಲ ಮೂರು ತಿಂಗಳುಗಳಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಪುರಸಭೆ ಅಧ್ಯಕ್ಷ ಅಲ್ಲಾವುದೀನ ಮನಿಯಾರ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಸದಸ್ಯರಾದ ನೂರ ಅಹ್ಮದ ಮತ್ತೆಸಾಬನವರ, ಗುರು ಅಕ್ಕಿ, ರಮಾಕಾಂತ ಶೆಂಡಗೆ, ಪುರಸಭೆ ಸದಸ್ಯರಾದ ಅಶೋಕ ಮನ್ನಂಗಿ ಪೀರಹಮ್ಮದ ಗವಾರಿ, ಅಜೀಮ ಮಿರ್ಜಾ, ಶಿವಕುಮಾರಸ್ವಾಮಿ ಅಡವಿಸ್ವಾಮಿಠ, ಲಕ್ಷ್ಮಣ ಕನವಳ್ಳಿ, ಕೆಡಿಪಿ ಸದಸ್ಯ ರವಿ ಕರಿಗಾರ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಶಿವು ಬಿಸಿ, ಯುವ ಮುಖಂಡರಾದ ಸಾಧಿಕ್ ಮನಿಯಾರ, ಸಚಿನ ಸಣ್ಣಪೂಜಾರ, ಮುಖಂಡ ಮಹೇಶ ದಳಾವಾಯಿ, ಶೇಖರಗೌಡ ಪಾಟೀಲ ಇದ್ದರು.