ಸಾರಾಂಶ
ಗದಗ: ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರಿಗೆ ಭೀಮಾ ಕೋರೆಗಾಂವ ಯುದ್ಧದ ನೆನಪಿರಲಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮತಿ (ಅಂಬೇಡ್ಕರವಾದ) ಜಿಲ್ಲಾ ಪ್ರಧಾನ ಸಂಚಾಲಕರಾದ ಬಾಲರಾಜ ಅರಬರ ಹೇಳಿದರು. ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಗದಗ ಜಿಲ್ಲಾ ಸಮಿತಿ ವತಿಯಿಂದ ಭೀಮಾ ಕೋರೆಗಾಂವ ವಿಜಯೋತ್ಸವ ನಿಮಿತ್ತ ಡಾ. ಬಿ. ಆರ್. ಅಂಬೇಡ್ಕರವರಿಗೆ ಮಾಲಾರ್ಪಣೆ ಮಾಡಿ 1808 ಜನವರಿ 1 ರಂದು ದಲಿತರ ಸ್ವಾಭಿಮಾನಕ್ಕಾಗಿ ನಡೆದ ಐತಿಹಾಸಿಕ ಭೀಕರ ಕಾಳಗದಲ್ಲಿ ಪೇಶ್ವೆ ಭಾಜಿರಾಯನ ಸೈನ್ಯವನ್ನು ಸೋಲಿಸಿದ ಮಹಾರ್ ಸೈನಿಕರಲ್ಲಿ ಹುತಾತ್ಮರಾದ 22 ಜನ ವೀರ ಮಹರ ಸೈನಿಕರಿಗೆ ಸ್ಮರಣೆ ಹಾಗೂ ಭೀಮಾ ಕೋರೆಗಾಂವ ಯುದ್ಧದ ವಿಜಯೋತ್ಸವದ ದಿನದ ಅಂಗವಾಗಿ ವೀರ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಕಾಶ ಕಮಡೊಳ್ಳಿ ಮಾತನಾಡಿ, ಭೀಮಾ ಕೋರೆಗಾಂವ ಯುದ್ಧದಲ್ಲಿ ಮಹರ ಸೈನಿಕರು ಯುದ್ಧ ಮಾಡಿ ನಮ್ಮ ಶೋಷಿತರಿಗೆ ಸ್ವಾಭಿಮಾನ ತಂದುಕೊಟ್ಟಿದ್ದಾರೆಂದು ಹೇಳಿದರು. ಕೆಂಚಪ್ಪ ಮ್ಯಾಗೇರಿ ಮಾತನಾಡಿ, ಭೀಮಾ ಕೋರೆಗಾಂವದ ಇತಿಹಾಸದ ಮಾಹಿತಿ ಕೊರತೆ ಇರುವುದರಿಂದ ವಿಜೃಂಭಣೆಯಿಂದ ಆಚರಣೆ ಕಡಿಮೆಯಾಗಿದೆ ಎಂದು ಹೇಳಿದ ಅವರು ನಾವು ಈ ವಿಜಯೋತ್ಸವವನ್ನು ಇನ್ನೂ ಮುಂದೆ ವಿಜೃಂಭಣೆಯಿಂದ ಆಚರಣೆ ಮಾಡೋಣ ಎಂದರು. ಮುತ್ತಪ್ಪ ಭಜಂತ್ರಿ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಗೋಕಾವಿ, ಹನಮಂತ ಕಿರಟಗೇರಿ, ಆಂಜನೇಯ ಬಳ್ಳಾರಿ, ಇಮಾಮಸಾಬ ನಮಾಜಿ, ದ.ಸಂ.ಸ. ವಿದ್ಯಾರ್ಥಿ ಘಟಕ ಶ್ರೀಧರ ಹಿರೇಮನಿ, ವಿಜಯಕುಮಾರ ಮಾದರ, ಮುಂತಾದವರು ಉಪಸ್ಥಿತರಿದ್ದರು.