ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಸರ್ವೇ ನಂ.೧೯೧ ರಲ್ಲಿ ವಾಸಿಸುವ ಕುಟುಂಬಗಳನ್ನು ಕಂದಾಯ ಗ್ರಾಮ ಯೋಜನೆಯಡಿ ಕೈ ಬಿಟ್ಟಿದನ್ನು ಖಂಡಿಸಿ, ಮರು ಪರಿಶೀಲಿಸಿ ಸರ್ವೇ ಮಾಡಿ ಹಕ್ಕು ಪತ್ರ ಪೂರೈಸುವಂತೆ ಒತ್ತಾಯಿಸಿ ಉಪ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಥಳೀಯ ನಿವಾಸಿಗಳು ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಸ್ಥಳೀಯ ನಿವಾಸಿ ಅಬ್ದುಲರೆಹಮಾನ ತೋರಗಲ್ಲ ಮಾತನಾಡಿ, ಲೋಕಾಪೂರ ಪಟ್ಟಣದ ಸರ್ವೇ ನಂ.೧೯೧ ರಲ್ಲಿ ೧೧ ಎಕರೆ ೫ ಗುಂಟೆ ಕಂದಾಯ ಇಲಾಖೆಯ ಗಾಯರಾಣ ಜಮೀನಿದೆ. ಈ ಜಮೀನಿನಲ್ಲಿ ಸುಮಾರು ೫೦ ವರ್ಷಗಳಿಂದ ೧೦೦೦ಕ್ಕೂ ಅಧಿಕ ಬಡ ಕುಟುಂಬದವರು ಜೀವನವನ್ನು ಸಾಗಿಸುತ್ತಿದ್ದೇವೆ. ಆದರೆ ಗ್ರಾಮ ಆಡಳಿತ ಅಧಿಕಾರಿಗಳ ಬೇಜವಾಬ್ದಾರಿಯೋ? ಅಥವಾ ನಜರ್ ಚೂಕಿಯಿಂದಾಗಿಯೋ? ಈ ಜಮೀನಿನಲ್ಲಿ ವಾಸಿಸುವ ಕುಟುಂಬಗಳನ್ನು ಸರ್ಕಾರ ಜಾರಿಗೆ ತಂದಿರುವ ಕಂದಾಯ ಗ್ರಾಮ ಯೋಜನೆಯಡಿ ಸರ್ವೇಯಿಂದ ಕೈ ಬಿಟಿರುತ್ತಾರೆ. ಈ ಸರ್ಕಾರಿ ಜಮೀನಿನಲ್ಲಿ ವಾಸಿಸುವ ಬಡ ಕುಟುಂಬಗಳ ಮಾಹಿತಿಯನ್ನು ಸರ್ಕಾರಕ್ಕೆ ನೀಡದೆ ತಪ್ಪು ಮಾಡಿದ್ದಾರೆ. ಈ ಜಮೀನಿನಲ್ಲಿ ವಾಸಿಸುವ ಕುಟುಂಬಗಳ ಸರ್ವೇ ಕಾರ್ಯದಿಂದ ಕೈ ಬಿಟ್ಟಿರುವುದನ್ನು ಮರು ಪರಿಶೀಲನೆ ಮಾಡಿ, ಸರ್ವೇ ನಂ.೧೯೧ರಲ್ಲಿಯ ಎಲ್ಲ ಮನೆಗಳನ್ನು ಸರ್ವೇ ಮಾಡಿ, ಇಲ್ಲಿ ವಾಸಿಸುವ ನಮಗೆ ಹಕ್ಕು ಪತ್ರ ನೀಡಿ ಸರ್ಕಾರದ ಸೌಲಭ್ಯವನ್ನು ಪಡಯಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನೋರ್ವ ನಿವಾಸಿ ಯಾಸೀನ ಬಾಗವಾನ ಮಾತನಾಡಿ, ನಾವು ವಾಸಿಸುತ್ತಿರುವ ಜಮೀನು ಕಂದಾಯ ಇಲಾಖೆಯ ಜಮೀನು ಆಗಿದೆ. ಗ್ರಾಪಂ ಇದ್ದಾಗ ನಮಗೆ ನಮ್ಮ ಆಸ್ತಿ ಉತಾರೆಗಳನ್ನು ಪೂರೈಸುತ್ತಿದ್ದರು. ಆದರೆ ಪಟ್ಟಣ ಪಂಚಾಯಿತಿ ಆದ ನಂತರ ನಮಗೆ ಉತಾರೆ ನೀಡುತ್ತಿಲ್ಲ. ಬ್ಯಾಂಕ್ಗಳಿಂದ ಆಸ್ತಿಯ ಮೇಲೆ ಸಾಲ ಪಡೆದು ಉದ್ಯೋಗ ಮಾಡಲು ಸಮಸ್ಯೆಯಾಗಿದೆ. ಆದಷ್ಟು ಬೇಗನೆ ಇಲ್ಲಿ ವಾಸಮಾಡುವ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಿ ಪಪಂ ವತಿಯಿಂದ ಉತಾರೆ ಪಡೆಯಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.ಈ ವೇಳೆ ನಿವಾಸಿಗಳಾದ ವೆಂಕಪ್ಪ ಗಸ್ತಿ, ಅಪ್ಪಣ್ಣ ಗಚ್ಚಪ್ಪನವರ, ಸಂಬಾಜಿ ಶಿಂದೆ, ನಾಗಪ್ಪ ಮಿರ್ಜಿ, ಮೈನು ರಂಗಾಪೂರ, ಹುಸೇನ ನದಾಫ, ಹಸನಡೋಂಗ್ರಿ ಮಹಾಲಿಂಗಪೂರ, ಶಬ್ಬೀರ ಚೌಧರಿ, ಈರಪ್ಪ ಸಾಳಗುಂದಿ, ದುರ್ಗಪ್ಪ ಭಜಂತ್ರಿ, ಸೈಯದ ನದಾಫ, ಯಾಸೀನ ಬಾಗವಾನ, ರಫೀಕ ಬಾಗವಾನ, ಮೌಲಾ ನದಾಫ, ಸೈಯದ ಬಾಗವಾನ, ಸಮೀರ ಚೌಧರಿ, ಮನ್ನಾ ಚೋಪದಾರ, ಡೋಂಗ್ರಿಸಾಬ ರಾಮದುರ್ಗ, ದಿಲಶಾದ ಬಾಗವಾನ, ಮೈಬೂಬ ಚೌಧರಿ, ಮಾರುತಿ ಪಲ್ಲೇದ, ಭೀಮಶಿ ಆಸಂಗಿ, ಯಾಸೀನ ಪನಿಬಂದ, ಉಪತಹಸೀಲ್ದಾರ್ ಬಿ.ಎಸ್. ರಂಗಣ್ಣವರ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಮಠಪತಿ ಇದ್ದರು.
ಸಮಸ್ಯೆ ಪರಿಹರಿಸುವುದಾಗಿ ಸಚಿವರ ಭರವಸೆಮುಧೋಳದಿಂದ ಲೋಕಾಪುರ ಮಾರ್ಗವಾಗಿ ಬಾಗಲಕೋಟೆಗೆ ಹೋರಡುವ ಸಮಯದಲ್ಲಿ ಪಟ್ಟಣದ ನಾಡಕಚೇರಿ ಮುಂದೆ ಜಮಾಯಿಸಿದ ಸಾರ್ವಜನಿಕರನ್ನು ನೋಡಿದ ಜಿಲ್ಲಾ ಉಸ್ತುವರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ತಮ್ಮ ವಾಹನವನ್ನು ನಿಲ್ಲಿಸಿ, ಸರ್ವೇ ನಂ. ೧೯೧ರಲ್ಲಿ ವಾಸಿಸುವ ಕುಟುಂಬಗಳಿಗೆ ಆಗಿರುವ ಸಮಸ್ಯೆ ಆಲಿಸಿದರು. ಆದಷ್ಟು ಬೇಗ ತಮ್ಮ ಸಮಸ್ಯೆ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು.