ಹಾನಗಲ್ಲ: ತಾಲೂಕಿನಲ್ಲಿ ೧೩ ಸಾವಿರಕ್ಕೂ ಹೆಚ್ಚು ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ಒದಗಿಸುವ ಸಂಕಲ್ಪ ಈಡೇರುತ್ತಿದ್ದು, ಜನರು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಬ್ಯಾತನಾಳ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಕಂದಾಯ ಗ್ರಾಮ, ಉಪ ಗ್ರಾಮ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಕೃಷಿಯನ್ನೇ ಅವಲಂಬಿಸಿದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ತಾತ, ಮುತ್ತಾತನ ಕಾಲದಿಂದಲೂ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ದಾಖಲೆ ಇಲ್ಲದೇ ಮನೆ ಕಟ್ಟಿಕೊಂಡ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಇಂಥ ಕುಟುಂಬಗಳು ಅತಂತ್ರತೆಯಲ್ಲಿ ಜೀವನ ಸಾಗಿಸುತ್ತಿದ್ದವು. ೨೦೨೩ರಲ್ಲಿ ಸಾರ್ವತ್ರಿಕ ಚುನಾವಣೆಗೂ ಮೊದಲು ದೃಢಸಂಕಲ್ಪ ಯಾತ್ರೆ ಕೈಗೊಂಡಾಗ ಪ್ರತಿ ಬೀದಿ, ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಅಂಥ ಕುಟುಂಬಗಳ ದುಗುಡ, ದುಮ್ಮಾನ ಕಣ್ಣಾರೆ ಕಾಣಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಭರವಸೆ ನೀಡಿದರೆ, ತಾಲೂಕಿನಲ್ಲಿ ಶಾಶ್ವತ ಮನೆ ಮಾಲಿಕತ್ವ ನೀಡುವ ೬ ಗ್ಯಾರಂಟಿ ಘೋಷಣೆ ಮಾಡಲಾಗಿತ್ತು. ಇದೀಗ ನುಡಿದಂತೆ ನಡೆದರು ಅತಂತ್ರ ಕುಟುಂಬಗಳನ್ನು ಸ್ವತಂತ್ರಗೊಳಿಸಲಾಗಿದೆ. ಇಡೀ ರಾಜ್ಯದಲ್ಲಿಯೇ ಭೂಗ್ಯಾರಂಟಿ ಕಾರ್ಯಕ್ರಮದಡಿ ಅತೀ ಹೆಚ್ಚಿನ ಸಂಖ್ಯೆಯ ಫಲಾನುಭವಿ ಕುಟುಂಬಗಳು ಲಾಭ ಪಡೆದಿದ್ದರೆ ಅದು ನಮ್ಮ ಹಾನಗಲ್ ತಾಲೂಕು ಎಂದರು.
ತಹಸೀಲ್ದಾರ್ ವಿಠ್ಠಲ ಚೌಗಲಾ ಮಾತನಾಡಿ, ತಾಲೂಕಿನಲ್ಲಿ ಇಂದು ಸಾವಿರಾರು ಕುಟುಂಬಗಳು ೮ ರಿಂದ ೧೦ ಲಕ್ಷ ರೂ. ಬೆಲೆ ಬಾಳುವ ಆಸ್ತಿಯ ಮಾಲಿಕತ್ವ ಹೊಂದುತ್ತಿವೆ. ಖರೀದಿ ನೋಂದಣಿಯ ಜೊತೆಗೆ ಇಸ್ವತ್ತು, ಹಕ್ಕುಪತ್ರ ವಿತರಿಸಲಾಗುತ್ತಿದೆ. ಸಂಪೂರ್ಣ ಗಣಕೀಕೃತ ದಾಖಲೆಗಳನ್ನು ನೀಡುತ್ತಿರುವುದರಿಂದ ಮನೆ ಮಾಲಿಕತ್ವಕ್ಕೆ ಭವಿಷ್ಯದಲ್ಲಿ ಯಾವುದೇ ತೊಂದರೆ ಬಾರದು. ಮನೆ ಮಾಲಿಕತ್ವ ಲಭಿಸಿದ್ದರಿಂದ ಬ್ಯಾಂಕ್ ಸಾಲ ಸೌಲಭ್ಯ ಸಹ ಲಭಿಸಲಿದೆ ಎಂದರು.ಇದೇ ಸಂದರ್ಭದಲ್ಲಿ ಬ್ಯಾತನಾಳ ಗ್ರಾಮದ ೪೦೪, ಇನಾಂಲಕ್ಮಾಪುರ ೪೩, ಕರೆಕ್ಯಾತನಹಳ್ಳಿ ೪೮ ಹಾಗೂ ಮಾಳಾಪುರ ಗ್ರಾಮದ ೧೮೦ ಸೇರಿದಂತೆ ಒಟ್ಟು ೬೭೫ ಕುಟುಂಬಗಳಿಗೆ ಈ ಸಂದರ್ಭದಲ್ಲಿ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ವಿತರಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಈರಪ್ಪ ಬೈಲವಾಳ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜು ಗೊರಣ್ಣನವರ, ಬಸನಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮುಖಂಡರಾದ ಭೀಮಣ್ಣ ಲಮಾಣಿ, ರಾಮಣ್ಣ ಶೇಷಗಿರಿ, ಫಯಾಜ್ ಲೋಹಾರ, ಭರಮಣ್ಣ ಶಿವೂರ, ಲೋಕೇಶ ಅಗಸಿಬಾಗಿಲ, ಪರಮೇಶ ಶಿಗಡಿ, ಬಸವರಾಜ ಕಾನ್ಮನಿ, ರಮೇಶ ಮದಿಯಣ್ಣನವರ, ಕರಿಯಪ್ಪ ತಹಶೀಲ್ದಾರ್, ವೆಂಕಟೇಶ ಅಗಸಿಬಾಗಿಲ, ಕೃಷ್ಣ ಮಡ್ಲೂರ, ಬಸವಂತ ನಾಯ್ಕ, ಕಾಂತೇಶ ಲಮಾಣಿ, ಬಸವಂತಪ್ಪ ಲಮಾಣಿ, ಯುವರಾಜಗೌಡ ಪಾಟೀಲ, ನಾಗಪ್ಪ ಪೂಜಾರ, ವೀರಭದ್ರಪ್ಪ ಕೋಳೂರ, ಬಂಗಾರೆಪ್ಪ ಕಲಕೇರಿ, ನಾಗರಾಜ ವಡ್ಡರ, ಸಿದ್ದಪ್ಪ ಜಾಲಗಾರ, ಅಶೋಕ ಕಿರವಾಡಿ, ಗಿರೀಶ ದೊಡ್ಡಮನಿ, ಕರಬಸಪ್ಪ ಕ್ವಾಟಿಹಳ್ಳಿ ಇದ್ದರು.
ಮನೆ ಮಾಲಿಕತ್ವ ಇಲ್ಲದೇ ಹಾನಗಲ್ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ನಿತ್ಯವೂ ಭಯದಲ್ಲಿಯೇ ಬದುಕುತ್ತಿದ್ದವು. ಅಂಥ ಕುಟುಂಬಗಳಿಗೆ ಮಾಲಿಕತ್ವ ನೀಡಿ ನೆಮ್ಮದಿ ಮೂಡಿಸಲಾಗಿದೆ. ಅರ್ಹ ಎಲ್ಲ ಫಲಾನುಭವಿ ಕುಟುಂಬಗಳಿಗೂ ಮಾಲಿಕತ್ವ ದೊರಕಿಸಲು ಬದ್ಧನಿದ್ದೇನೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.