ಸಾರಾಂಶ
ಪಟ್ಟಣದ ಪ್ರಸಿದ್ಧ ಸತ್ಯಗಣಪತಿಯನ್ನು ಅಪಾರ ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ತುರುವೇಕೆರೆ ಕೆರೆಯಲ್ಲಿ ತೆಪ್ಪೋತ್ಸವದ ಮೂಲಕ ಮಂಗಳವಾರ ಸಂಜೆ ವಿಸರ್ಜನೆ ಮಾಡಲಾಯಿತು.
ಕನ್ನಡಪ್ರಭವಾರ್ತೆ ತುರುವೇಕೆರೆ
ಪಟ್ಟಣದ ಪ್ರಸಿದ್ಧ ಸತ್ಯಗಣಪತಿಯನ್ನು ಅಪಾರ ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ತುರುವೇಕೆರೆ ಕೆರೆಯಲ್ಲಿ ತೆಪ್ಪೋತ್ಸವದ ಮೂಲಕ ಮಂಗಳವಾರ ಸಂಜೆ ವಿಸರ್ಜನೆ ಮಾಡಲಾಯಿತು.ಪಟ್ಟಣದ ಸತ್ಯಗಣಪತಿ ಸ್ವಾಮಿಯನ್ನು ಗೌರಿ ಗಣೇಶ ಹಬ್ಬದ ದಿನ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿಂದ ಇಲ್ಲಿಯ ತನಕವೂ ದಿನ ನಿತ್ಯ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಜಾತ್ರೆಯ ಅಂಗವಾಗಿ ಕಳೆದ ಹದಿನೈದು ದಿನಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಸರ್ಜನ ಮಹೋತ್ಸವದ ಅಂಗವಾಗಿ ಪಟ್ಟಣದ ಎಲ್ಲ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರು. ಇಡೀ ಪಟ್ಟಣವೇ ಹೂ ಹಾಗೂ ದೀಪಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಸೋಮವಾರ ಸಂಜೆ ಮಹಾಮಂಗಳಾರತಿಯೊಂದಿಗೆ ಭವ್ಯವಾದ ಪುಷ್ಫ ಮಂಟಪದ ವಿಶೇಷ ಅಲಂಕಾರದೊಂದಿಗೆ ಸತ್ಯಗಣಪತಿ ಹಾಗೂ ಗ್ರಾಮ ದೇವತೆ ಉಡುಸಲಮ್ಮ ದೇವಿಯನ್ನು ಪಟ್ಟಣದ ರಾಜ ಬೀದಿಗಳಲ್ಲಿ ಉತ್ಸವ ಮಾಡಲಾಯಿತು.ಮೆರವಣಿಗೆ ವೇಳೆ ಕೀಲು ಕುದುರೆ, ಚಂಡೆವಾದ್ಯ, ಹುಲಿವೇಷಧಾರಿಗಳ ನೃತ್ಯ ಪ್ರದರ್ಶನ, ಡಿಜಿ ಸೌಂಡ್, ಡೊಳ್ಳು ಕುಣಿತ, ನಾಸಿಕ್ ಬ್ಯಾಂಡ್ ಆರ್ಕೆಸ್ಟ್ರಾ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಜಾತ್ರೆಗೆ ಮೆರುಗು ತಂದಿದ್ದವು. ಯುವಕರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು. ಪಟ್ಟಣದ ಹಲವು ಸಂಘ ಸಂಸ್ಥೆಗಳು, ವ್ಯಾಪಾರಿಗಳು, ನಾಗರಿಕರು ಗಣೇಶನಿಗೆ ವಿವಿಧ ರೀತಿಯ ಬೃಹತ್ ಹಾರ ಹಾಕಿ ಪೂಜೆ ಸಲ್ಲಿಸಿ ಜೊತೆಗೆ ಭಕ್ತಾದಿಗಳಿಗೆ ತಿಂಡಿ, ಕಾಫಿ, ಟೀ, ಹಾಲು, ಪಾನಕ ಫಲಹಾರ, ವಿತರಿಸಿ ತಮ್ಮ ಭಕ್ತಿ ಭಾವ ಮೆರೆದರು. ಈ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಸತೀಶ್, ಟಿ.ಎನ್.ರಘು, ಸಂಗಲಾಪುರ ಶಿವಣ್ಣ, ಅಶೋಕ್, ಮೆಕಾನಿಕ್ ಉಮೇಶ್, ಶಶಾಂಕ್, ಸ್ಟುಡಿಯೋ ಅಭಿ, ಉಪ್ಪಿ, ಮಂಜುನಾಥ್, ಲಕ್ಷ್ಮಣ್, ದರ್ಶನ್, ನಂದಕುಮಾರ್, ಶ್ರೀಧರ್, ಶಶಿಕುಮಾರ್, ಆಶಾ, ಮೋಹನ್, ನಿತಿನ್, ಶಾಮಣ್ಣ, ಗುರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಸಿಪಿಐ ಲೋಹಿತ್, ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.