ಸಾರಾಂಶ
ಹುಣಸಗಿ : ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದ ಬಿಜೆಪಿಯಲ್ಲಿನ ಕೆಲವರಿಗೆ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಬಿಜೆಪಿ ದಲಿತರ ಪರ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಮಾಜಿ ಸಚಿವ ಹಾಗೂ ಸುರಪುರ ವಿಧಾನಸಭೆ ಉಪ ಚುನಾವಣೆಯಲ್ಲಿನ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ್ (ರಾಜೂಗೌಡ) ಹೇಳಿದರು.
ಪಟ್ಟಣದ ಜನತಾ ಕಾಲೋನಿಯಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುತ್ತದೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳಿಕೆ ನೀಡುತ್ತಿದ್ದರು. ಆದರೆ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವವರನ್ನು ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ, ದಲಿತರ ಹಾಗೂ ಸಂವಿಧಾನದ ಪರ ಬಿಜೆಪಿ ಪಕ್ಷ ಇದೆ ಎಂದು ಸಾಬೀತು ಮಾಡಿ ತೋರಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ಇಲ್ಲಸಲ್ಲದ ಆರೋಪಗಳು ಮಾಡಿ ಚುನಾವಣೆಯಲ್ಲಿ ಸೋಲುವ ಹಾಗೆ ಮಾಡಿದ್ದಾರೆ. ಕ್ಷೇತ್ರದ ಜನರು ಯಾವುದೇ ಆರೋಪಗಳಿಗೆ ಕಿವಿಗೊಡದೆ ಸಮಗ್ರ ಸುರಪುರ ಮತಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ನನಗೆ ಈ ಬಾರಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವದರ ಮೂಲಕ ಆರಿಸಿ ತರಬೇಕೆಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ವರ್ಷ ಸಮೀಪಿಸುತ್ತಿದ್ದರೂ ಸುರಪುರ ಮತಕ್ಷೇತ್ರದಲ್ಲಿ ಒಂದಾದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಮ್ಮ ಜಿಲ್ಲೆಯವರಿಗೆ ಕುಡಿಯಲು ನೀರಿಲ್ಲ. ಆದರೆ, ರಾಜ್ಯ ಕಾಂಗ್ರೆಸ್ ಸರಕಾರ ಬೇರೆ ಜಿಲ್ಲೆಗೆ ನೀರು ಹರಿಸಲಾಗುತ್ತಿದೆ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು. ಕ್ಷೇತ್ರದ ಜನರು ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದರೆ ಕ್ಷೇತ್ರದ ರೈತರಿಗೆ ಎರಡು ಬೆಳೆಗಳಿಗೆ ನೀರು ಹರಿಸಲಾಗುತ್ತಿತ್ತು ಎಂದು ಹೇಳಿದರು.
ಈ ವೇಳೆ ಹಲವಾರು ದಲಿತ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹು ವೈಲಿ, ವೀರೇಶ ಸಾಹು ಚಿಂಚೋಳಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಸವರಾಜ ಸ್ಥಾವರಮಠ, ಮೇಲಪ್ಪ ಗುಳಗಿ, ಸೋಮಶೇಖರ ಸ್ಥಾವರಮಠ, ಶಿವಲಿಂಗಯ್ಯಸ್ವಾಮಿ ವಿರಕ್ತಮಠ, ಹಮೀದ್ ಡೆಕ್ಕನ್, ಬಸಣ್ಣ ದೇಸಾಯಿ, ಸಿದ್ದನಗೌಡ ಕರಿಬಾವಿ, ಮಲ್ಲು ಹೆಬ್ಬಾಳ, ಗೌಡಪ್ಪ ಬಾಲಗೌಡ್ರ ಸೇರಿದಂತೆ ಇತರರಿದ್ದರು.