ಹುಬ್ಬಳ್ಳಿ:
ಪಶ್ಚಿಮ ಪದವೀಧರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಎಲ್ಲರ ಅಭಿಪ್ರಾಯ ಪಡೆದು ನನಗೆ ಟಿಕೆಟ್ ನೀಡಲಾಗಿದೆ. ಆರ್.ಎಂ. ಕುಬೇರಪ್ಪನವರ ಅಸಮಾಧಾನವನ್ನು ಪಕ್ಷದ ವರಿಷ್ಠರು ಬಗೆಹರಿಸಲಿದ್ದಾರೆ ಎಂದು ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಕ್ಷದಿಂದ ನನಗೆ ಟಿಕೆಟ್ ನೀಡಿದ್ದು, ಸಹಜವಾಗಿ ಕೆಲ ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಆರ್.ಎಂ. ಕುಬೇರಪ್ಪ ಅವರು ಅಹಿಂದ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲೂ ಅಹಿಂದ್ ನಾಯಕರಿಗೆ ಟಿಕೆಟ್ ನೀಡಿದೆ. ತಮಗೆ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಈ ರೀತಿಯ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.
ಕಳೆದ ಬಾರಿ 94 ಸಾವಿರ ಮತದಾರರಿದ್ದು, ಇದರಲ್ಲಿ 22 ಸಾವಿರ ಬಿಜೆಪಿ ಅಭ್ಯರ್ಥಿ ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ 13 ಸಾವಿರ ಮತ ಪಡೆದಿದ್ದರು, ಇದಲ್ಲದೇ ಬಂಡಾಯ ಅಭ್ಯರ್ಥಿ 6 ಸಾವಿರ ಮತ ಪಡೆದುಕೊಂಡು, 8 ಸಾವಿರಕ್ಕೂ ಅಧಿಕ ಮತಗಳು ಕುಲಗೆಟ್ಟ ಮತಗಳಾಗಿದ್ದವು. ಇವೆಲ್ಲವನ್ನೂ ನೋಡಿದಾಗ ಬಿಜೆಪಿ ವಿರೋಧಿ ಅಲೆ ನಮಗೆ ಕಂಡು ಬಂದಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹುಡಾ ಅಧ್ಯಕ್ಷ ಶಾಕೀರ ಸನದಿ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ್, ಸಯ್ಯದ ಅಹ್ಮದ್ ಸೇರಿದಂತೆ ಹಲವರಿದ್ದರು.