ಸಾರಾಂಶ
ಸವದತ್ತಿ ಶ್ರೀ ಕುಮಾರೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಸಕ ವಿಶ್ವಾಸ ವೈದ್ಯ ಮತ್ತು ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸವದತ್ತಿ
ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳಬೇಕಿದೆ. ಸಮಾಜಮುಖಿ ಸೇವೆ ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಸ್ಥಳೀಯ ಶ್ರೀ ಕುಮಾರೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಎಂದಿಗೂ ಬಡತನವಿಲ್ಲದಾಗಿದ್ದು, ಕಷ್ಟಪಟ್ಟು ಓದಿ ಪ್ರತಿಯೊಬ್ಬ ವಿದ್ಯಾರ್ಥಿಯು ಸ್ವಾವಲಂಬಿಯಾಗಿ ಬದುಕಬೇಕೆಂದರು. ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಶಿಸ್ತು, ಸಂಯಮತೆ ಗುಣಗಳು ನಿರಂತರವಾಗಿದ್ದಲ್ಲಿ ಅವನ ಬದುಕು ಯಶಸ್ಸಿನತ್ತ ಸಾಗುವುದರಲ್ಲಿ ಸಂಶಯವಿಲ್ಲ ಎಂದರು.
ಪ್ರಾಚಾರ್ಯ ಕೆ.ಬಿ.ಕೋರಿ ಪ್ರಾಸ್ಥಾವಿಕವಾಗಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಆದರ್ಶಯುತ ಮೌಲ್ಯ ಬೆಳಸಿಕೊಳ್ಳ ಬೇಕೆಂದರು. ಶಿಕ್ಷಣ ಚಿಂತಕ ಡಾ.ಲಿಂಗರಾಜ ರಾಮಾಪೂರ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವಂತ ಕೀಳರಿಮೆ ತೊಡೆದು ಹಾಕುವ ಮೂಲಕ ದುಶ್ಚಟಗಳಿಂದ ದೂರಾಗಿ ಸದ್ಗುಣ ಮೈಗೂಡಿಸಿಕೊಂಡು ಆದರ್ಶ ವಿದ್ಯಾರ್ಥಿ ಬದುಕಿನತ್ತ ಸಾಗಬೇಕೆಂದರು. ಸಂಸ್ಥೆಯ ಚೇರಮನ್ ಸದಾಶಿವ ಕೌಜಲಗಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯರಿಗೆ ಋಣಿಯಾಗಿ ಅಸಾಧ್ಯ ಎಂಬುವುದನ್ನು ಬಿಟ್ಟು ಸಾಧ್ಯವೆಂಬುದನ್ನು ರೂಢಿಸಿಕೊಂಡಲ್ಲಿ ಯಶಸ್ಸಿನ ಮೆಟ್ಟಿಲುಗಳೇರಲು ಸಾಧ್ಯ ಎಂದರು.ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯ ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಹಾಗೂ ಈ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಇಂದು ಸರಕಾರಿ ನೌಕರಿಯಲ್ಲಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ೨೦೨೪-೨೫ನೇ ಸಾಲಿನ ಆದರ್ಶ ವಿದ್ಯಾರ್ಥಿ ಚೇತನ ಮಾರುತಿ ನಡಕಿನಮನಿ ಹಾಗೂ ರಮ್ಯಾ ಯಲ್ಲಪ್ಪ ಹೊಸಮನಿ ಆದರ್ಶ ವಿದ್ಯಾರ್ಥಿನಿಯೆಂದು ಘೋಷಿಸಲಾಯಿತು.
ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಸಿ.ಜಿ.ಸವಟಗಿ, ಎಸ್.ಎಸ್.ಉದಪುಡಿ, ಬಿ.ಎಂ.ಹೂಲಿಕಟ್ಟಿ, ಬಿ.ಎನ್.ಪ್ರಭುನವರ, ಜಿ.ಎಸ್.ಶಿಂಧೆ, ಎನ್.ಬಿ ಚಂದರಗಿ, ಜೆ.ಎಸ್.ಸುಳ್ಳದ, ಚಂದ್ರಣ್ಣ ಶಾಮರಾಯನವರ, ಮದನಲಾಲ ಚೋಪ್ರಾ, ರಮ್ಯಾ ಹೊಸಮನಿ ಹಾಗೂ ಉಪನ್ಯಾಸಕ ಸಿಬ್ಬಂದಿ ಇದ್ದರು. ಡಾ.ಪ್ರೇಮಾ ಯಾಕೊಳ್ಳಿ ಸ್ವಾಗತಿಸಿ, ಎಸ್.ಎಸ್.ಬೆಟಗೇರಿ ಹಾಗೂ ಪಿ.ಎಫ್.ಪಟ್ಟಣಶೆಟ್ಟಿ ನಿರೂಪಿಸಿ, ವ್ಹಿ.ವೈ.ಹೊಸುರ ವಂದಿಸಿದರು.