ಬೇಲೂರು: ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಭಕ್ತಿಯ ಸಂಕೇತವಾಗಿ ತಿರಂಗಾ ಯಾತ್ರೆಯನ್ನು ನಡೆಸಲಾಗುತ್ತಿದೆ ಎಂದು ಶಾಸಕ ಎಚ್. ಕೆ ಸುರೇಶ್ ಹೇಳಿದರು. ದೇಶದಾದ್ಯಂತ ಆಗಸ್ಟ್ 13ರಿಂದ 15ರವರೆಗೆ ನಡೆಯುತ್ತಿರುವ ಹರ್ ಘರ್‌ ತಿರಂಗಾ ಅಭಿಯಾನದ ಅಂಗವಾಗಿ ಬಿಜೆಪಿ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಬೈಕ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ ರಾಷ್ಟ್ರಧ್ವಜದ ಗೌರವ, ದೇಶಪ್ರೇಮ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರಲು ಬೈಕ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಿಂದ ಆರಂಭವಾದ ಬೈಕ್ ಜಾಥಾದಲ್ಲಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಜೆ.ಪಿ. ನಗರ ಮಾರ್ಗವಾಗಿ ತೆರಳಿ ಎಚ್ ಡಿ ದೇವೇಗೌಡ ವೃತ್ತ ನಂತರ ರಾಷ್ಟ್ರೀಯ ಹೆದ್ದಾರಿ ಮೂಲಕ ಡಾ. ಬಿ. ಆರ್‌. ಅಂಬೇಡ್ಕರ್ ವೃತ್ತ ಮತ್ತು ಶ್ರೀ ಬಸವೇಶ್ವರರ ವೃತ್ತ ಹಾಗೂ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಹರ್ಡಿಕರ್‌ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಅಭಿಯಾನದ ಅಂಗವಾಗಿ ಅಗಸರಹಳ್ಳಿಯ ನಿವೃತ್ತ ಯೋಧರಾದ ಚಂದ್ರಣ್ಣ ಅವರನ್ನು ಗೌರವಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಸಂಜು ಕೌರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅಮಿತ್ ಶೆಟ್ಟಿ, ಸಂತೋಷ್ ಕೋಟ್ಯಾನ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.