ಸಂಡೂರಿನಲ್ಲಿ ತಿರಂಗಾ ಯಾತ್ರೆ: ಮೊಳಗಿದ ಜೈಜವಾನ್ ಜೈಕಿಸಾನ್ ಘೋಷಣೆ

| Published : May 26 2025, 12:30 AM IST

ಸಾರಾಂಶ

ಪಟ್ಟಣದಲ್ಲಿ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಸಂಡೂರುಆಪರೇಷನ್ ಸಿಂದೂರದ ಮೂಲಕ ರಾಷ್ಟ್ರ ರಕ್ಷಣೆಗೆ ಶ್ರಮಿಸಿದ ಸೈನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಹಾಗೂ ಭಾರತದ ಸೇನೆಯೊಂದಿಗೆ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಧ್ಯೇಯದೊಂದಿಗೆ ಪಟ್ಟಣದಲ್ಲಿ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನಾಗರಿಕರಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಯಾತ್ರೆಯು ಪಟ್ಟಣದ ಎಪಿಎಂಸಿ ಬಳಿಯಿಂದ ವಿಜಯವೃತ್ತದವರೆಗೆ ನಡೆಯಿತು. ಯಾತ್ರೆ ಸಂದರ್ಭದಲ್ಲಿ ಮೊಳಗಿದ ಭಾರತ್ ಮಾತಾಕಿ ಜೈ, ಜೈಜವಾನ್ ಜೈಕಿಸಾನ್ ಎಂಬ ಘೋಷಣೆಗಳು ನೆರೆದಿದ್ದ ಜನರಲ್ಲಿ ದೇಶಭಕ್ತಿ ಉಕ್ಕಿಸಿದವು. ಪ್ರಭುಸ್ವಾಮೀಜಿ ಮಾತನಾಡಿ, ಪಹಲ್ಗಾಂ ದಾಳಿಯ ನಂತರದಲ್ಲಿ ಭಾರತದ ಸೇನೆಯು ಪಾಕಿಸ್ತಾನದಲ್ಲಿನ ಉಗ್ರಗಾಮಿಗಳ ನೆಲೆಗಳನ್ನು ನಾಶ ಮಾಡುವ ಮೂಲಕ ಭಾರತದ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿತು. ಉಗ್ರರ ನೆಲೆಗಳನ್ನು ಗುರುತಿಸುವಲ್ಲಿ ಇಸ್ರೋ ಪಾತ್ರವೂ ಮಹತ್ವದ್ದಾಗಿದೆ. ಭಾರತೀಯ ಸೇನೆ ಕೇವಲ ಉಗ್ರಗಾಮಿಗಳ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತೇ ಹೊರತು ನಾಗರಿಕರ ವಸತಿ ಪ್ರದೇಶಗಳ ಮೇಲಲ್ಲ. ನಾವಿಂದು ದೇಶದಲ್ಲಿ ಸುರಕ್ಷಿತವಾಗಿರುವುದಕ್ಕೆ ನಮ್ಮ ದೇಶವನ್ನು ರಕ್ಷಿಸುತ್ತಿರುವ ಸೈನಿಕರು ಕಾರಣ. ದೇಶಕ್ಕೆ ಅನ್ನ ನೀಡುವ ರೈತ ಮತ್ತು ದೇಶವನ್ನು ರಕ್ಷಿಸುವ ಸೈನಿಕರನ್ನು ನಾವು ಗೌರವಿಸಬೇಕು ಹಾಗೂ ಅವರಿಗೆ ಕೃತಜ್ಞತೆ ಸಲ್ಲಿಸಬೇಕು.

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಶಕ್ತಿ ಏನೆಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಎಲ್ಲರೂ ದೇಶಭಕ್ತಿಯನ್ನು ಬೆಳೆಸಿಕೊಂಡು ದೇಶದ ರಕ್ಷಣೆ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ನಿವೃತ್ತ ಸೈನಿಕ ನಾಗರಾಜ, ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಮುಖಂಡರಾದ ಉಡೇದ ಸುರೇಶ್, ವಿ.ಎಸ್. ಶಂಕರ್, ನರೇಂದ್ರ ಪಾಟೀಲ್, ಆರ್.ಟಿ. ರಘು, ಪುಷ್ಪಾ, ಬಿ.ಜಿ. ಮಂಜುಳಾ ಭಾರತದ ಸೈನಿಕರ ಸೇವೆಯನ್ನು ಸ್ಮರಿಸಿದರು.

ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಮುಖಂಡರಾದ ಡಿ. ಪ್ರಹ್ಲಾದ್, ಕೆ. ಯರಿಸ್ವಾಮಿ, ಎಫ್. ಕುಮಾರನಾಯ್ಕ, ಎಚ್.ಎಂ. ಮಂಜುನಾಥ, ಕೆ. ಹರೀಶ್, ರ‍್ರೆಮ್ಮ, ಕೆ. ರಮೇಶ್, ನರಸಿಂಹ, ವೆಂಕಟಸುಬ್ಬಯ್ಯ, ಪ್ರಭುಗೌಡ, ವಾಮಣ್ಣ, ಪರಶುರಾಮ್, ಶರಣಯ್ಯ, ದರೋಜಿ ರಮೇಶ್, ಅಶೋಕ್ ಕುಮಾರ್ ಶ್ರೇಷ್ಠಿ, ಸತ್ಯನಾರಾಯಣ, ಅಂಜಿನಿ, ಅಬ್ದುಲ್ ವಹಾಬ್, ರವಿಕಾಂತ್ ಭೋಸ್ಲೆ, ಸಿದ್ದೇಶ್, ಚಿರಂಜೀವಿ ಮುಂತಾದವರು ಭಾಗವಹಿಸಿದ್ದರು.