ಸಾರಾಂಶ
ಯಾದಗಿರಿ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ಲೋಕಸಭಾ ಕ್ಷೇತ್ರ ಚುನಾವಣಾ ಪ್ರಚಾರ ನಿಮಿತ್ತ ಯಾದಗಿರಿ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ರಾಯಚೂರು ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರನಾಯಕ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ನಾನೊಬ್ಬ ಕ್ರಿಯಾಶೀಲ ಐಎಎಸ್ ಅಧಿಕಾರಿಯಾಗಿ, ಜಿಲ್ಲಾಧಿಕಾರಿ, ರಾಜ್ಯ ಮಟ್ಟದ ಹಲವಾರು ಇಲಾಖೆ ಕಾರ್ಯದರ್ಶಿ ಯಾಗಿ ಸುದೀರ್ಘ ಕೆಲಸ ಮಾಡಿ, ನಿವೃತ್ತಿಯಾದ ನಂತರ ನನ್ನಲ್ಲಿ ಇನ್ನೂ ಉತ್ಸಾಹ ಹಾಗೂ ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಿದ್ದೇನೆ. ಅಪಾರ ಆಡಳಿತ ಅನುಭವ ಹೊಂದಿರುವ ನನಗೆ ಜಿಲ್ಲೆಯ ಮತದಾರರು ಮತ ನೀಡುವ ಮೂಲಕ ಅಭಿವೃದ್ಧಿಗಾಗಿ ಗೆಲ್ಲಿಸಬೇಕೆಂದು ರಾಯಚೂರು ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರನಾಯಕ ಮನವಿ ಮಾಡಿದರು.ಲೋಕಸಭಾ ಚುನಾವಣೆ ನಿಮಿತ್ತ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಈ ಭಾಗದಲ್ಲಿ ನೀರಾವರಿ ಕ್ಷೇತ್ರ ವಿಸ್ತಾರವಾಗಬೇಕು. ಸಾಕಷ್ಟು ಕೈಗಾರಿಕಾ ಪ್ರದೇಶವಿದೆ. ದೊಡ್ಡ ಕಂಪನಿಗಳು ಇಲ್ಲಿ ಸ್ಥಾಪನೆಯಾಗಬೇಕು. ಅಂದಾಗ ಮಾತ್ರ ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ. ಇನ್ನು ಗ್ರಾಮೀಣ ಭಾಗದಲ್ಲಿರುವ ಮಹಿಳಾ ಸಂಘಗಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ದೊರಕಿಸಿಕೊಡಲು ಯತ್ನಿಸುತ್ತೇನೆ ಎಂದರು.
3 ಮತಕ್ಷೇತ್ರಗಳಲ್ಲಿ ವಡಗೇರಾ, ಹುಣಸಗಿ, ನೂತನ ತಾಲೂಕು ಕೇಂದ್ರಗಳಾಗಿವೆ. ಕಕ್ಕೇರಾ ಹಾಗೂ ಕೆಂಭಾವಿ ಪುರಸಭೆ ಕೇಂದ್ರಗಳಾಗಿವೆ. ಅಲ್ಲಿ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಕಛೇರಿಗಳು ಸ್ಥಾಪನೆಯಾಗಬೇಕು. ಜೊತೆಗೆ ಸಿಬ್ಬಂದಿ ನೇಮಕ ಕೂಡ ಅಷ್ಟೇ ಅವಶ್ಯಕತೆ, ಸ್ಥಳೀಯ ಶಾಸಕರ ಸಹಕಾರದಿಂದ ಅನುಷ್ಠಾನಕ್ಕೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.