ಸಾರಾಂಶ
ಯಲ್ಲಾಪುರ ತಾಲೂಕು ಆಡಳಿತ, ತಾಪಂ, ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಯಲ್ಲಾಪುರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಪ್ರಯುಕ್ತ ವ್ಯಸನಮುಕ್ತ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಯಲ್ಲಾಪುರ: ತಾಲೂಕು ಆಡಳಿತ, ತಾಪಂ, ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಪ್ರಯುಕ್ತ ವ್ಯಸನಮುಕ್ತ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನಗಳ ಸೇವನೆಯಿಂದ ಇಂದಿನ ಯುವ ಸಮುದಾಯ ಮತ್ತು ಸಮಾಜದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಸರ್ಕಾರಿ ಆಸ್ಪತ್ರೆಯ ಡಾ. ಸೌಮ್ಯಾ ಕೆ.ವಿ. ಮಾದಕ ವ್ಯಸನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಇತರ ಲಕ್ಷಣಗಳ ಕುರಿತು ಉಪನ್ಯಾಸ ನೀಡಿದರು. ಯುವ ಸಮೂಹವು ಮಾದಕ ವ್ಯಸನಗಳಿಂದ ದೂರವಿದ್ದು, ದೃಢ ಮನಸ್ಸು ಹೊಂದಲು ಪ್ರತಿದಿನ ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಬೇಕು ಎಂದರು.ಇಂದಿನ ಯುವ ಸಮೂಹಕ್ಕೆ ಮತ್ತು ಉತ್ತಮ ಸಮಾಜಕ್ಕೆ ತಲೆನೋವಾಗಿರುವ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ವಿಕಾಸ ಮೊಕಾಶಿ, ಒಂದು ಬಾರಿ ಚಟವನ್ನು ಅಂಟಿಸಿಕೊಂಡರೆ ಅದು ಮನುಷ್ಯನನ್ನು ಯಾವ ರೀತಿ ನಿಧಾನವಾಗಿ ಕೊಲ್ಲುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಅಶೋಕ ಭಟ್ಟ ಮಾತನಾಡಿ, ವಿದ್ಯಾರ್ಥಿಗಳು ವ್ಯಸನಮುಕ್ತರಾಗುವ ಸಂಕಲ್ಪ ಮಾಡಬೇಕಲ್ಲದೇ ನಿಮ್ಮ ಸಹಪಾಠಿಗಳನ್ನು, ನೆರೆ-ಹೊರೆಯವರನ್ನು ವ್ಯಸನಮುಕ್ತರಾಗುವ ದಿಸೆಯಲ್ಲಿ ಪ್ರೇರೇಪಿಸಬೇಕು ಎಂದರು.ತಾಲೂಕಿನ ವಿವಿಧ ಇಲಾಖೆಯ ಪ್ರತಿನಿಧಿಗಳು, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಮಹೇಶ ಗೌಳಿ ಉಪಸ್ಥಿತರಿದ್ದರು. ಬಿಇಒ ಎನ್.ಆರ್. ಹೆಗಡೆ ಅವರು ಸ್ವಾಗತಿಸಿದರು. ಉಪನ್ಯಾಸಕ ಲೋಹಿತ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಪಾದ ಹೆಗಡೆ ವಂದಿಸಿದರು.