ಸಾರಾಂಶ
ಪಾವಗಡದಲ್ಲಿ ಇಂದು ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ ಪಾವಗಡ
ಬೆಂಗಳೂರಿನ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮೋತ್ಸವ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭವನ್ನು ಜ.12ರಂದು ಬೆಳಿಗ್ಗೆ 10ಗಂಟೆಗೆ ನಗರದ ಎಸ್ಎಸ್ಕೆ ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವುದಾಗಿ ಇಲ್ಲಿನ ವಿಸ್ತಾರ ಮಿಡಿಯಾ ಲಿ. ಕಾರ್ಯಕ್ರಮ ಸಂಚಾಲಕ ಹಾಗೂ ಪತ್ರಕರ್ತ ಇಮ್ರಾನ್ ತಿಳಿಸಿದ್ದಾರೆ.ಈ ಕುರಿತು ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಇಮ್ರಾನ್ ಉಲ್ಲಾ ಬೆಂಗಳೂರಿನ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇವರ ವತಿಯಿಂದ ಜ.12ರಂದು ಬೆಳಿಗ್ಗೆ 10ಗಂಟೆಗೆ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು,
ಪ್ರಪ್ರಥಮ ಬಾರಿಗೆ ಗ್ರಾಮಾಂತರ ಪ್ರದೇಶದ ಸಾವಿರಕ್ಕೂ ಮಿಗಿಲಾದ ಯುವಜನತೆಯನ್ನು ಒಂದೆಡೆ ಸೇರಿಸಲು ಸಿದ್ಧತೆ ಕೈಗೊಂಡಿದ್ದೇವೆ. ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮೋತ್ಸವ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸುತ್ತಿರುವುದು ವಿಶೇಷ ಎನ್ನಬಹುದು. ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಕಾರ್ಯಕ್ರಮದ ನಿರ್ವಹಣೆ ಮತ್ತು ಇತರ ವ್ಯವಸ್ಥೆಗಳನ್ನು ನಡೆಸುವ ಜವಾಬ್ದಾರಿ ವಹಿಸಿದೆ. ಕಾರ್ಯಕ್ರಮದ ರೂವಾರಿ ಹಾಗೂ ಇಲ್ಲಿನ ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷರಾದ ಜಪಾನಂದಜೀ ಮಹಾರಾಜ್ ಸಮಾರಂಭದ ದಿವ್ಯ ಸಾನಿದ್ಯ ವಹಿಸಲಿದ್ದಾರೆ.ಕರ್ನಾಟಕ ಉಚ್ಛ ನ್ಯಾಯಾಲಯ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಯಾದ ಎಚ್. ಬಿಲ್ಲಪ್ಪ ಕಾರ್ಯಕ್ರಮದ ಉದ್ಘಾಟನೆ ಹಾಗೂ ಉಪನ್ಯಾಸ ನೀಡಲಿದ್ದು, ವಿಸ್ತಾರ ಮೀಡಿಯಾ ಎಕ್ಸಿಕ್ಯೂಟೀವ್ ಡೈರೆಕ್ಟರ್ ಡಿ.ಕೆ. ಕಿರಣ್ ಕುಮಾರ್, ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಶ್ ಈಶ್ವರ್, ಪಾವಗಡ ಶಾಸಕರಾದ ಎಚ್.ವಿ. ವೆಂಕಟೇಶ್, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಜಿ. ವೆಂಕಟರಾಮಯ್ಯ, ಇಲ್ಲಿನ ಶನೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಆನಂದರಾವ್, ಇತರೆ ಆನೇಕ ಮಂದಿ ಗಣ್ಯರು ಹಾಗೂ ವಿವಿಧ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯ ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.