ಸಾರಾಂಶ
ಕಾರವಾರ:
ಶನಿವಾರದಿಂದ ಮಂಗಳೂರಿನಿಂದ ಮಡಗಾಂವ್ ಗೆ ಆರಂಭಗೊಳ್ಳುವ ವಂದೇ ಭಾರತ್ ರೈಲನ್ನು ಕಾರವಾರ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಡಿ. 30ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನಿ0ದ ಹೊರಡುವ ಈ ರೈಲು ಮಧ್ಯಾಹ್ನ 2.52ಕ್ಕೆ ಕಾರವಾರ ರೈಲ್ವೆ ನಿಲ್ದಾಣ ತಲುಪಲಿದೆ. ಇಲ್ಲಿ ರೈಲನ್ನು ಪುಷ್ಪಾರ್ಚನೆ ಮಾಡುವ ಮೂಲಕ ಮತ್ತು ವಿವಿಧ ಸಾಂಸ್ಕೃತಿಕ ಕಲಾ ವೈಭವಗಳ ಮೂಲಕ ಸ್ವಾಗತಿಸಲಾಗುವುದು. ನಂತರ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ರೈಲು ಮಡಗಾಂವ್ ಗೆ ತೆರಳಿಲಿದೆ. ಪ್ರಾರಂಭದ ದಿನದಂದು ಈ ರೈಲಿನಲ್ಲಿ ಕಾರವಾರದಿಂದ ಮಡಂಗಾವ್ಗೆ ತೆರಳಲು ಮತ್ತು ವಾಪಸ್ ಕಾರವಾರಕ್ಕೆ ಆಗಮಿಸಲು 300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಕಾರವಾರದ ಹಿರಿಯ ಪ್ರಾದೇಶಿಕ ಎಂಜಿನಿಯರ್ ಬಿ.ಎಸ್. ನಾಡಗೆ ತಿಳಿಸಿದ್ದಾರೆ.ಈ ರೈಲು ಗಂಟೆಗೆ 120 ಕಿಮೀಗೂ ಅಧಿಕ ವೇಗದಲ್ಲಿ ಚಲಿಸಲಿದ್ದು, 8 ಕೋಚ್ ಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ ಲೈನ್ ಮಾದರಿಯ ಸೀಟ್ಗಳ ಜತೆಗೆ ಎಕ್ಸಿಕ್ಯೂಟಿವ್ ಚೇರ್ ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ. ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್ , ಸಿಸಿ ಕ್ಯಾಮೆರಾ ಮತ್ತಿತರ ಆಧುನಿಕ ಸೌಲಭ್ಯಗಳು ಇವೆ.
ಗುರುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದ್ದು, ಬೆಳಗ್ಗೆ 11ಕ್ಕೆ ಮಂಗಳೂರುನಿಂದ ಹೊರಟು 12.25ಕ್ಕೆ ಉಡುಪಿ, 2.52ಕ್ಕೆ ಕಾರವಾರ 4.40ಕ್ಕೆ ಮಡಂಗಾವ್ ತಲುಪಲಿದೆ. ಮಡಗಾಂವ್ನಿಂದ ಸಂಜೆ 5.10ಕ್ಕೆ ಹೊರಟು, 5.50ಕ್ಕೆ ಕಾರವಾರ, 8.10ಕ್ಕೆ ಉಡುಪಿ, 10.15ಕ್ಕೆ ಮಂಗಳೂರು ತಲುಪಲಿದೆ. ಮಾರ್ಗ ಮಧ್ಯೆ ಕಾರವಾರ ಮತ್ತು ಉಡುಪಿ ಹೊರತುಪಡಿಸಿ ಬೇರೆಲ್ಲೂ ನಿಲುಗಡೆ ಇರುವುದಿಲ್ಲ . ಕಾರವಾರ ರೈಲ್ವೆ ನಿಲ್ದಾಣದ ಸ್ಟೇಶನ್ ಇನ್ ಛಾರ್ಜ್ ಉದಯ ಸಾರಂಗ್ ಪಾಲ್ಗೊಳ್ಳಲಿದ್ದಾರೆ.