ಸಾರಾಂಶ
ಮಣಿಪುರದ ರೋಟರಿ ವತಿಯಿಂದ ರೋಟರಿ ಭವನದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ನಡೆಯಿತು. ರೋಟರಿ ಜಿಲ್ಲಾ ಸಮುದಾಯದಳದ ಜಿಲ್ಲಾ ಛೇರ್ಮನ್ ಬಿ.ಪುಂಡಲೀಕ ಮರಾಠೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ, ಕಾಪು
ಇಲ್ಲಿನ ಮಣಿಪುರದ ರೋಟರಿ ವತಿಯಿಂದ ರೋಟರಿ ಭವನದಲ್ಲಿ ಏರ್ಪಡಿಸಿದ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಸಮುದಾಯದಳದ ಜಿಲ್ಲಾ ಛೇರ್ಮನ್ ಬಿ.ಪುಂಡಲೀಕ ಮರಾಠೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ನಮ್ಮ ಹಿರಿಯರು ಆಟಿ ತಿಂಗಳಲ್ಲಿ, ಸೋನೆ ಮಳೆಯ ಪರಿಸ್ಥಿತಿಯಲ್ಲಿ ಬಹಳ ಸಂಕಷ್ಟದ ದಿನಗಳನ್ನು ಅನುಭವಿಸಿದ್ದರು. ಪ್ರಸ್ತುತ ಸಂದರ್ಭದಲ್ಲಿ ಆಟಿ ಆಚರಣೆ ಆಡಂಬರವಾಗಿ ಬದಲಾಗುತ್ತಿದ್ದು, ಅದರ ನಿಜ ಆಶಯಕ್ಕೆ ಕುಂದಾಗಿದೆ. ಯುವಜನಾಂಗವು ಹಿರಿಯರ ಆಟಿ ಆಚರಣೆಯ ತಿರುಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಇದರ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ ಮಾತನಾಡಿ, ಹಿಂದಿನ ಕಾಲದ ತುಳುವೆರ ಆಟಿ ಆಚರಣೆ ಬಡತನದಿಂದ ಕೂಡಿತ್ತು. ಅತೀವ ಮಳೆಗಾಳಿ, ಬಡತನದ ಕಾರಣದಿಂದಾಗಿ ಹುಟ್ಟಿಕೊಂಡ ತುಳುವರ ಜೀವನ ಪದ್ಧತಿ. ಆಹಾರ ಪದ್ಧತಿಯೇ ಇಂದಿನ ಕಾಲದವರ ವಿಶೇಷ ಆಟಿ ಸಂಭ್ರಮವಾಗಿ ಮಾರ್ಪಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪುರ ರೋಟರಿ ಅಧ್ಯಕ್ಷ ಸುಧೀರ್ ಕುಮಾರ್ ವಹಿಸಿ ಸ್ವಾಗತಿಸಿದರು. ರೋಟರಿ ವಲಯ ಸೇನಾನಿ ಜಾನ್ ಸಿಕ್ವೇರಾ, ಕ್ಲಬ್ ಸರ್ವಿಸ್ ನಿರ್ದೇಶಕ ವಿನ್ಸೆಂಟ್ ಡಿಸೋಜ ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಗುರುರಾಜ ಭಟ್ ನಿರೂಪಿಸಿ ವಂದಿಸಿದರು.