ಸಾರಾಂಶ
ಕನ್ನಡಪ್ರಭ ವಾರ್ತೆ ಕಾಳಗಿ
ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ತಾಲೂಕು ಸಮೀಪದ ರೇವಗಿ (ರಟಕಲ್) ಗುಡ್ಡದ ಜಗದ್ಗುರು ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಸೋಮವಾರ ಸಂಜೆ ಭಕ್ತ ಜನಸಾಗರದ ಜೈಘೋಷಗಳ ಮಧ್ಯೆ ಸಂಭ್ರಮದಿಂದ ಜರುಗಲಿದೆ ಎಂದು ದೇವಸ್ಥಾನ ಸಮೀತಿ ಕಾರ್ಯದರ್ಶಿ ಸದಾಶಿವ ವಗ್ಗೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಾಂಪ್ರದಾಯದಂತೆ ಶ್ರಾವಣ ಮಾಸದ ನಡುವಿನ ಸೋಮವಾರ ಬೆಳಗ್ಗೆ 3ಗಂಟೆಗೆ ರೇವಣಸಿದ್ದೇಶ್ವರ ಮೂರ್ತಿಗೆ ಕಾಕಡಾರತಿ, 4ಕ್ಕೆ ರೇವಣಸಿದ್ದೇಶ್ವರ ತಪೋ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ಜರುಗಲಿದೆ. 9 ಗಂಟೆಗೆ ಚನ್ನಬಸವ ದೇವರ ಮನೆಯಿಂದ ಉತ್ಸವ ಮೂರ್ತಿ ಸುತ್ತಲಿನ ಗ್ರಾಮಗಳಾದ ಬೆಡಸೂರ, ರೇವಗ್ಗಿ, ರಟಕಲ, ಮುಕರಂಬಾ, ಕಂದಗೂಳ, ಮಾವಿನಸೂರ, ಗೊಣಗಿ ಗ್ರಾಮಗಳಲ್ಲಿ ಮೆರವಣಿಗೆಯ ಮೂಲಕ ದೇಸ್ಥಾನಕ್ಕೆ ಬಂದು ತಲುಪಲಿದೆ. ಈ ಜಾತ್ರೆಯಲ್ಲಿ ಸೇರಿದ ಭಕ್ತರು ಸಹನೆಯಿಂದ ಜಗದ್ಗುರು ರೇವಣಸಿದ್ದೇಶ್ವರ ಸ್ವಾಮಿಯ ಆಶೀರ್ವಾದ ಪಡೆಯಬೇಕು. ಬೆಲೆ ಬಾಳುವ ವಸ್ತುಗಳು, ಚಿಕ್ಕ ಪುಟ್ಟ ಮಕ್ಕಳ ತುಂಬಾ ನಿಗಾ ವಹಿಸಬೇಕು ಎಂದು ವಗ್ಗೆ ಮನವಿ ಮಾಡಿದ್ದಾರೆ. ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಮಾರ್ಗದಲ್ಲಿ ಕಾಳಗಿ, ರಟಕಲ್ ಸ್ಥಳೀಯ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಜಾತ್ರೆ ನಿಮಿತ್ತ ಬಾರಂಬಾವಿಯಿಂದ ದೇವಸ್ಥಾನ ವರೆಗೆ, ಕಂದಗೂಳ, ರೇವಗ್ಗಿ, ಭೆಡಸೂರ, ಮಾವಿನಸೂರ, ಗೊಣಗಿ, ಮುಕರಂಬ, ಅರಣಕಲ್ ಗ್ರಾಮಗಳಿಂದ ದೇವಸ್ಥಾನದವರೆಗೆ ಬೀದಿ ದೀಪ ಹಾಕಲಾಗಿದೆ.ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳ, ಸೇಡಂ ಸಹಾಯಕ ಆಯುಕ್ತರ ಕಛೇರಿ ತಹಸೀಲ್ದಾರ್ ನಾಗನಾಥ ತರಗೆ, ಜೆಸ್ಕಾಂ ಎಇಇ ಪ್ರಭು ಮಡ್ಡಿತೊಟ, ದೇವಸ್ಥಾನ ಸಂಸ್ಥಾನಿಕ ಚನ್ನಬಸಪ್ಪ ದೇವರಮನಿ, ಗ್ರೇಡ್-2 ತಹಸೀಲ್ದಾರ್ ರಾಜೇಶ್ವರಿ, ಪಿಎಸ್ಐ ತಿಮ್ಮಯ್ಯ ಅವರು ಸಲಹೆ ಸಹಕಾರದಂತೆ ಜಾತ್ರೆ ನೆರವೇರುತ್ತಿದೆ ಎಂದರು.