ಸಾರಾಂಶ
ಆಪತ್ಭಾಂದವ ಈಶ್ವರ್ ಮಲ್ಪೆ ಅವರ ಮಗ ದಿ.ನಿರಂಜನ್ ಅವರ ನೆನಪಿಗಾಗಿ ಟೀಮ್ ಈಶ್ವರ್ ಮಲ್ಪೆ ವತಿಯಿಂದ 2ನೇ ವರ್ಷದ ಸಹಾಯಧನ ಮತ್ತು ಅಶಕ್ತರಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಫೆ.1ರಂದು ಸಂಜೆ 5 ಗಂಟೆಗೆ ಮಲ್ಪೆ ಬೀಚ್ನಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಆಪತ್ಭಾಂದವ ಈಶ್ವರ್ ಮಲ್ಪೆ ಅವರ ಮಗ ದಿ.ನಿರಂಜನ್ ಅವರ ನೆನಪಿಗಾಗಿ ಟೀಮ್ ಈಶ್ವರ್ ಮಲ್ಪೆ ವತಿಯಿಂದ 2ನೇ ವರ್ಷದ ಸಹಾಯಧನ ಮತ್ತು ಅಶಕ್ತರಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಫೆ.1ರಂದು ಸಂಜೆ 5 ಗಂಟೆಗೆ ಮಲ್ಪೆ ಬೀಚ್ನಲ್ಲಿ ನಡೆಯಲಿದೆ.ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಾಜ ಸೇವಕ ಈಶ್ವರ್ ಮಲ್ಪೆ, ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿ ಆನಂದ್ ಸಿ. ಕುಂದರ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್, ಮಲ್ಪೆ ಠಾಣಾಧಿಕಾರಿ ರವಿ, ನ್ಯಾಯವಾದಿ ಪ್ರವೀಣ್ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಸಾಧಕರು ಹಾಗೂ ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತವರ ತಂಡವನ್ನು ಸನ್ಮಾನಿಸಲಾಗುವುದು. ಮಲ್ಪೆ ಆಸುಪಾಸಿನ 5 ಸರ್ಕಾರಿ ಶಾಲೆಯ ಪ್ರಭಾನಿತ್ವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಸಹಾಯಧನ ವಿತರಣೆ ನಡೆಸಲಿದ್ದು, ಇಬ್ಬರು ಯುವಕರಿಗೆ ಆಟೋ ರಿಕ್ಷಾವನ್ನು ನೀಡಲಿದ್ದೇವೆ ಎಂದವರು ತಿಳಿಸಿದರು.ಸಮಾಜದ ಉಚಿತ ಸೇವೆಗಾಗಿ ಶವ ಶೀತಲಿಕರಣ (ಫ್ರೀಜರ್ ಬಾಕ್ಸ್) ಲೋಕಾರ್ಪಣೆ, ಅನಾರೋಗ್ಯ ಪೀಡಿತರಿಗೆ ವೀಲ್ಚೇರ್ ಹಸ್ತಾಂತರ ನಡೆಯಲಿದೆ. ನಂತರ ಸ್ಮಾರ್ಟ್ ಗೈಯ್ಸ್ ಡ್ಯಾನ್ಸ್ ಅಕಾಡೆಮಿಯಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಟೀಮ್ ಈಶ್ವರ್ ಮಲ್ಪೆಯ ಶಿವರಾಜ್, ದೀಕ್ಷಿತ್, ಬಿಲಾಲ್ ಇದ್ದರು.