ಯಲ್ಲಾಪುರ: ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರ ಆಪ್ತ ಕಾರ್ಯದರ್ಶಿ ಶಿವಪುತ್ರಪ್ಪ ಬಾಬುರಾವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಮನೆಗೆ ತೆರಳಿ ಜಿಲ್ಲೆಯ ಪ್ರವಾಸೋದ್ಯಮದ ಕುರಿತು ಚರ್ಚೆ ನಡೆಸಿದರು. ಸರ್ಕಾರಕ್ಕೆ ಆದಷ್ಟು ಬೇಗ ಅಧ್ಯಯನ ಪೂರ್ಣ ವರದಿ ಸಲ್ಲಿಸುವಂತೆ ಕೇಳಿಕೊಂಡರು.

ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಕರಾವಳಿ, ಮಲೆನಾಡು, ಅರೆಬಯಲುಸೀಮೆ, ಅರೆ ಮಲೆನಾಡಿನಿಂದ ಆವೃತ್ತವಾದ ಈ ಜಿಲ್ಲೆಯಲ್ಲಿ ಕರಾವಳಿ, ಜಲಪಾತಗಳು, ಬೆಟ್ಟ, ಶಿಲೆಗಳು, ಕಣಿವೆ, ರೇನ್ ಟೂರಿಸಂ, ಸೇತುವೆಗಳು, ವನ್ಯಜೀವಿಗಳು, ಚಾರಣ, ಬೋಟ್ ಟೂರಿಸಂ, ದೇವಸ್ಥಾನಗಳು ಹೀಗೆ ವಿವಿಧ ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶವಿದೆ. ನಮ್ಮ ಸಮಿತಿಯ ವರದಿಯಲ್ಲಿ ಇವೆಲ್ಲವನ್ನು ಅಳವಡಿಸಲಾಗಿದೆ. ಇವೆಲ್ಲ ಜಾರಿಗೆ ತರುವಲ್ಲಿ ಸಾವಿರಾರು ಕೋಟಿ ಹಣ ಬೇಕಾಗಿದ್ದ ಕಾರಣ ವರದಿಯಲ್ಲಿ ಆದ್ಯತೆಯ ಮೇರೆಗೆ ಪಟ್ಟಿ ಮಾಡಲಾಗಿದೆ. ಒಂದರ ನಂತರ ಇನ್ನೊಂದನ್ನು ಮಾಡುವಂತೆ ಕೋರಲಾಗುವುದು ಎಂದು ವಿವರಿಸಿದರು.

ಇದಕ್ಕೆ ಸ್ಪಂದಿಸಿದ ಆಪ್ತ ಕಾರ್ಯದರ್ಶಿ ತಮ್ಮಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಸಮಿತಿಯ ಸದಸ್ಯ ವೇಣುಗೋಪಾಲ ಮದ್ಗುಣಿ ಜೊತೆಯಲ್ಲಿದ್ದು ಸಲಹೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ಸಚಿವ ಎಚ್.ಕೆ. ಪಾಟೀಲ ಅವರ ಆಪ್ತ ಕಾರ್ಯದರ್ಶಿ ಭೇಟಿ ಮಾಡಿದರು.