ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಪುರಾಣ ಪ್ರಸಿದ್ಧ, ಐತಿಹಾಸಿಕ, ಧಾರ್ಮಿಕ ಕ್ಷೇತ್ರಗಳು, ಖಾಲಿ ಪ್ರವಾಸಿ ತಾಣಗಳಿದ್ದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ವಿಷಾದಿಸಿದರು.
ತಾಲೂಕಿನ ಬೂದನೂರು ಗ್ರಾಮದಲ್ಲಿ ಶನಿವಾರ ಬೂದನೂರು ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿಲ್ಲೆಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳು ಬೂದನೂರು ಗ್ರಾಮದಲ್ಲಿವೆ. ಮದ್ದೂರಿನ ಕೊಕ್ಕರೆ ಬೆಳ್ಳೂರಿಗೆ ಆಸ್ಟ್ರೇಲಿಯಾದಿಂದ ಪಕ್ಷಿಗಳು ವಲಸೆ ಬರುತ್ತದೆ. ಐತಿಹಾಸಿಕ ಪ್ರಸಿದ್ಧ ಕೆ.ಆರ್.ಎಸ್ ಜಲಾಶಯ, ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಗಳಿವೆ. ಅದರೂ ಸಹ ಜಿಲ್ಲೆ ಪ್ರವಾಸೋದ್ಯಮದಲ್ಲಿ ಹಿಂದುಳಿದಿದೆ. ಪ್ರವಾಸೋದ್ಯಮಕ್ಕೆ ಪ್ರಚಾರ ನೀಡಿ ಪ್ರವಾಸೋದ್ಯಮವನ್ನು ಬೆಳಸಬೇಕಿದೆ ಎಂದರು.
ವೀರ ಬಲ್ಲಾಳ 13ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಶ್ರೀಕಾಶಿ ವಿಶ್ವನಾಥ ಹಾಗೂ ಶ್ರೀಅನಂತ ಪದ್ಮನಾಭ ದೇವಸ್ಥಾನಗಳು ಮಂಡ್ಯ ಜಿಲ್ಲೆಯಲ್ಲಿರುವುದು ಅದೃಷ್ಟದ ಸಂಗತಿ. ಇಂತಹ ಅಪರೂಪದ, ಆಕರ್ಷಣೀಯ ದೇಗುಲಗಳನ್ನು ಹೊರ ಜಗತ್ತಿಗೆ ಪರಿಚಯಿಸಿ ಪ್ರವಾಸಿಗರನ್ನು ಸೆಳೆಯಬೇಕು ಎಂದರು.ವಿದೇಶಗಳಲ್ಲಿ ಪ್ರಾಚೀನ ಸ್ಮಾರಕಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿ ಪ್ರವಾಸಿಗರನ್ನು ಸೆಳೆಯುವುದರೊಂದಿಗೆ ಪ್ರವಾಸೋದ್ಯಮದಲ್ಲಿ ಪ್ರಗತಿ ಸಾಧಿಸುವುದರೊಂದಿಗೆ ಆರ್ಥಿಕವಾಗಿಯೂ ಬೆಳವಣಿಗೆ ಸಾಧಿಸಿವೆ. ಅದೇ ರೀತಿ ನಮ್ಮಲ್ಲಿರುವ ಪ್ರಾಚೀನ ಸ್ಮಾರಕಗಳು, ದೇಗುಲಗಳು ಹಾಗೂ ನಿಸರ್ಗ ತಾಣಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿ ಪ್ರವಾಸೋದ್ಯಮದಲ್ಲಿ ಪ್ರಗತಿ ಸಾಧಿಸಬೇಕು ಎಂದರು.
ಬೂದನೂರು ಉತ್ಸವ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಜನಪರ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಶಾಸಕ ರವಿಕುಮಾರ್ ಅವರ ಕೆಲಸ ಶ್ಲಾಘನೀಯ ಎಂದರು.ಬೂದನೂರು ರಸ್ತೆ ಅಭಿವೃದ್ಧಿ ಗೆ 1 ಕೋಟಿ, ಪ್ರವಾಸೋದ್ಯಮಕ್ಕೆ 50 ಲಕ್ಷ ರೂ ನೀಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ನುಡಿದರು.
ಪ್ರತಿ ಕುಟುಂಬಕ್ಕೆ 5 ಗ್ಯಾರಂಟಿ ಯೋಜನೆಗಳಿಂದ ಅಂದಾಜು 5000 ರು. ಒದಗಿಸಿ ಆರ್ಥಿಕವಾಗಿ ಸದೃಢಗೊಳಿಸಲು ಸಹಕರಿಸಲಾಗುತ್ತಿದೆ. 35 ಲಕ್ಷ ರೈತರಿಗೆ 2000 ರು ನಂತೆ ಬರ ಪರಿಹಾರ, ಕೃಷಿ ಬೆಳೆ ವಿಮೆ 600 ಕೋಟಿ ರು. ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದರು.ಜಿಲ್ಲೆಗೆ ಹೊಸದಾಗಿ 75 ಬಸ್ ಗಳನ್ನು ಸರ್ಕಾರ ನೀಡಿದ್ದು, ಪ್ರತಿ ತಾಲ್ಲೂಕಿಗೆ 10 ಬಸ್ ಗಳನ್ನು ಹಂತ ಹಂತವಾಗಿ ನೀಡುವುದರ ಮೂಲಕ ಗ್ರಾಮೀಣ ಭಾಗದ ಜನರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಸ, ಮನ್ ಮುಲ್ ನಿರ್ದೇಶಕ ಶಿವಪ್ಪ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಹಾಜರಿದ್ದರು.