- ಶ್ರೀಮಠದಲ್ಲಿ ಭಕ್ತಸಾಗರ,ಶಾರದಾಂಬೆ ದರ್ಶನ । ಅಕ್ಷರಾಭ್ಯಾಸಕ್ಕೆ ಸರದಿ ಸಾಲಿನಲ್ಲಿ ನೂಕು ನುಗ್ಗಲು.
ಕನ್ನಡಪ್ರಭ ವಾರ್ತೆ, ಶೃಂಗೇರಿಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖವಾದ ಶೃಂಗೇರಿಗೆ ವಿವಿಧೆಡೆಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ವೀಕೆಂಡ್ ಸೇರಿದಂತೆ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ಹೆಚ್ಚಳವಾಗಿದೆ.
ಲಲಿತಪಂಚಮಿ ದಿನವಾದ ಶುಕ್ರವಾರ ಶ್ರೀ ಮಠದ ಆವರಣದಲ್ಲಿ ಭಕ್ತ ಸಾಗರವೇ ಕಂಡು ಬಂದಿತು. ಬೆಳಿಗ್ಗೆಯಿಂದಲೇ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಶಾರಾದಾಂಬೆ ದರ್ಶನಕ್ಕೆ ದೇಗುಲದ ಮುಂಬಾಗ ದಿಂದ ಶ್ರೀಮಠದ ಪ್ರವೇಶದ್ವಾರದವರೆಗೂ ಸಾಲುಗಟ್ಟಿ ನಿಂತಿದ್ದರು. ಶುಕ್ರವಾರ ಅಕ್ಷರಾಭ್ಯಾಸಕ್ಕೆ ವಿಶೇಷ ದಿನವಾಗಿದ್ದರಿಂದ ಅಕ್ಷರಾಭ್ಯಾಸಕ್ಕೂ ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು.ಶ್ರೀಮಠದ ಆವರಣ, ಶ್ರೀ ಶಂಕರಾಚಾರ್ಯ ದೇವಾಲಯ, ಶ್ರೀ ತೋರಣಗಣಪತಿ, ಶ್ರೀ ವಿದ್ಯಾಶಂಕರ ದೇವಾಲಯ, ಶ್ರೀ ಮಠದ ನರಸಿಂಹವನ, ಬೋಜನಾ ಶಾಲೆ ಎಲ್ಲೆಡೆ ಭಕ್ತರ ನೂಕುನುಗ್ಗಲು ಕಂಡು ಬಂದಿತು. ಪಟ್ಟಣ, ಭಾರತೀ ಬೀದಿಯಲ್ಲಿಯೂ ಪ್ರವಾಸಿ ಜನಜಂಗುಳಿ ಇದ್ದು ವಸತಿಗೃಹಗಳು ಭರ್ತಿ ಯಾಗಿವೆ. ಶ್ರೀಮಠದ ಸಮೀಪದ ತುಂಗಾ ನದಿ ದಡದ ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ದಟ್ಟಣೆ ಹೆಚ್ಚಿದ್ದು ಪ್ರವಾಸಿವಾಹನಗಳ ಸಂಖ್ಯೆಯೂ ಹೆಚ್ಚ್ಇದೆ. ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಭಾರತೀ ಬೀದಿ ಯಲ್ಲಿ ಪ್ರವಾಸಿ ವಾಹನಗಳ ನಿಲುಗಡೆ ಹೆಚ್ಚಿದ್ದು ಪಟ್ಟಣದಲ್ಲಿ ಆಗಾಗ ಟ್ರಾಫಿಕ್ ಸಮಸ್ಯೆ ಉದ್ಭವಿಸಿ ವಾಹನ ಸವಾರರು, ಪಾದಾಚಾರಿಗಳು ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ.
ಶನಿವಾರ, ಭಾನುವಾರ ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಶೃಂಗೇರಿಗೆ ಬರುತ್ತಿರುವ ಪ್ರವಾಸಿಗರು ವಿದ್ಯಾರಣ್ಯಪುರ ವ್ಯಾಪ್ತಿಯ ದುರ್ಗಾದೇವಸ್ಥಾನದ ಶ್ರೀ ಶಾರದಾಂಬೆ ಕ್ಷೇತ್ರ ಪಾಲಕಿ ದೇವತೆ ಶ್ರೀ ದುರ್ಗಾಂಬಾ ದೇವಾಲಯ, ಈಶ್ವರಿ ಗಿರಿಯಲ್ಲಿರುವ ಶ್ರೀ ಮಲಹಾನಿಕರೇಶ್ವರ ದೇವಾಲಯ, ಶಂಕರಗಿರಿ, ಕಿಗ್ಗಾ ಮಳೆ ದೇವರು ಶ್ರೀ ಋಷ್ಯಶೃಂಗೇಶ್ವರ ದೇವಾಲಯ,ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಸಿರಿಮನೆ ಜಲಪಾತದ ವೀಕ್ಷಣೆಗೆ ಭೇಟಿ ನೀಡುತ್ತಿದ್ದಾರೆ. ಈ ಕೇಂದ್ರಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಡಿಸೆಂಬರ್ ಕೊನೆ ವಾರದಿಂದ ಜನವರಿವರೆಗೂ ಪ್ರವಾಸಿಗರ ಚಿತ್ತ ನಿರಂತರ ಶೃಂಗೇರಿಯತ್ತ ಮುಂದುವರಿದಿದೆ.
23 ಶ್ರೀ ಚಿತ್ರ 1-
ಶೃಂಗೇರಿ ಶ್ರೀ ಮಠದ ಆವರಣದಲ್ಲಿ ಲಲಿತಾಪಂಚಮಿ ದಿನವಾದ ಶುಕ್ರವಾರ ಕಂಡುಬಂದ ಭಕ್ತ ಸಾಗರ.23 ಶ್ರೀ ಚಿತ್ರ 2-
ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನ ನಿಲುಗಡೆಯಿಂದ ತುಂಬಿರುವುದು.