ಮದ್ಯಪಾನ, ಧೂಮಪಾನ, ತಂಬಾಕು, ಗುಟ್ಕಾ ಸೇವನೆ ಸೇರಿದಂತೆ ಮುಂತಾದ ನಶೆ ಮತ್ತು ವ್ಯಸನದಿಂದಾಗಿ ಜನತೆ ತಮ್ಮ ಆರೋಗ್ಯ, ಹಣ, ಆಯುಷ್ಯವನ್ನು ಕಳೆದುಕೊಳ್ಳುವ ಮೂಲಕ ಕುಟುಂಬದ ನೆಮ್ಮದಿಯನ್ನು ಭಗ್ನ ಮಾಡುತ್ತಿದ್ದಾರೆ.

ಗದಗ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಬದ್ಧತೆಯಿಂದ ಮುಂದಾಗಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಜಾತ್ರಾ ಮಹೋತ್ಸವ ಸಮಿತಿ, ಐಎಂಎ, ನಿಮಾ, ಆಯುರ್ವೇದಿಕ ಕಾಲೇಜಿನ ಆಶ್ರಯದಲ್ಲಿ ನಡೆದ ವ್ಯಸನಮುಕ್ತ ಜಾಗೃತಿ ಜಾಥಾದಲ್ಲಿ ಮಾತನಾಡಿ, ಮದ್ಯಪಾನ, ಧೂಮಪಾನ, ತಂಬಾಕು, ಗುಟ್ಕಾ ಸೇವನೆ ಸೇರಿದಂತೆ ಮುಂತಾದ ನಶೆ ಮತ್ತು ವ್ಯಸನದಿಂದಾಗಿ ಜನತೆ ತಮ್ಮ ಆರೋಗ್ಯ, ಹಣ, ಆಯುಷ್ಯವನ್ನು ಕಳೆದುಕೊಳ್ಳುವ ಮೂಲಕ ಕುಟುಂಬದ ನೆಮ್ಮದಿಯನ್ನು ಭಗ್ನ ಮಾಡುತ್ತಿದ್ದಾರೆ ಎಂದರು.

ವಿಶೇಷವಾಗಿ ಯುವ ಜನಾಂಗ ನಶೆ ಬರುವಂತಹ ಉತ್ಪನ್ನಗಳಿಗೆ ಹೆಚ್ಚು ಆಕರ್ಷಿತರಾಗಿ ಜೀವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮನೆಯಲ್ಲಿ ಪಾಲಕ- ಪೋಷಕರು, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು, ಧರ್ಮಗುರುಗಳು, ವೈದ್ಯರ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಜಾಗೃತಿ ಮೂಡಿಸಬೇಕೆಂದರು.ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅವರು, ಜಾಥಾಕ್ಕೆ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಐಎಂಎ ಅಧ್ಯಕ್ಷ ಡಾ. ಶ್ರೀಧರ ವಿ. ಕುರಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಥಾದಲ್ಲಿ ತೋಂಟದಾರ್ಯ ಜಾತ್ರಾ ಸಮಿತಿಯ ಪದಾಧಿಕಾರಿಗಳು, ಐಎಂಎ, ನಿಮಾ, ಗದಗ- ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಅಲೋಪತಿಕ್ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯ ಹಿರಿಯ ತಜ್ಞ ವೈದ್ಯರು, ಡಿಜಿಎಂ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಥಾ ಮರಳಿ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು. ಏ. 2ರಂದು ಆಂಜನೇಯ ಸ್ವಾಮಿ ಜಯಂತಿ

ಗದಗ: ಕಳಸಾಪುರ ರಸ್ತೆಯ ವಿಶ್ವೇಶ್ವರಯ್ಯ ನಗರದ ವಿಘ್ನೇಶ್ವರ ಸೇವಾ ಸಮಿತಿಯಿಂದ ಆಂಜನೇಯ ಸ್ವಾಮಿ ಜಯಂತ್ಯುತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏ. 2ರಂದು ನಡೆಯಲಿದೆ.ಏ. 2ರಂದು ಬೆಳಗ್ಗೆ 5ಕ್ಕೆ ಮಹಾರುದ್ರಾಭಿಷೇಕ, ಬೆಳಗ್ಗೆ 6ರಿಂದ 6.30ರ ವರೆಗೆ ಪ್ರಾರ್ಥನೆ, 6.30ಕ್ಕೆ ಬಾಲಮಾರುತಿ ತೊಟ್ಟಿಲೋತ್ಸವ, ಜೋಗುಳ, ಮುತ್ತೈದೆಯರಿಗೆ ಉಡಿ ತುಂಬುವುದು, ಕೋಟಿ ಓಂ ನಮಃ ಶಿವಾಯ ಜಪ ಮುಕ್ತಾಯದ ಅಂಗವಾಗಿ ರುದ್ರ ಹೋಮ ನೆರವೇರುವುದು. ಮಧ್ಯಾಹ್ನ 1ಕ್ಕೆ ಮಹಾಅನ್ನಸಂತರ್ಪಣೆ ಜರುಗುವುದು.

ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಆಂಜನೇಯ ಬಳಗದ ಸಹೋದರಿಯರಿಂದ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಳ್ಳಟ್ಟಿಯ ಬಸವರಾಜ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರರಡ್ಡಿ ಇನಾಮತಿ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ, ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ನಗರಸಭೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಹಾಗೂ ನಿವೃತ್ತ ಶಿಕ್ಷಕ ಬಿ.ಎಸ್. ಬೆಂತೂರ ಆಗಮಿಸುವರು. ಪ್ರಸಾದ ಸೇವೆಯನ್ನು ಜಿ. ಪವರ್ಸನ ಶೈಲಾ, ಶ್ರೀನಿವಾಸರಡ್ಡಿ ಬೆಂತೂರ ಪರಿವಾರದವರು ಹಾಗೂ ಅಲಂಕಾರ ಸೇವೆಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಆರ್.ವಿ. ಬೆಲಹುಣಸಿ ವಹಿಸಿಕೊಂಡಿದ್ದಾರೆ ಎಂದು ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರರಡ್ಡಿ ಇನಾಮತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.