ಕಳುವಾದ ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ

| Published : Jul 12 2024, 01:33 AM IST

ಸಾರಾಂಶ

ಯಾರೇ ಆಗಲಿ ಮೊಬೈಲ್ ಪೋನ್‌ಗಳನ್ನು ಕಳೆದುಕೊಂಡಲ್ಲಿ ಕೂಡಲೇ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಕರೆ ನೀಡಿದರು. ಕಳುವಾದ ಮೊಬೈಲ್ ಪೋನ್‌ಗಳು ಪತ್ತೆಯಾಗುವುದಲ್ಲದೇ, ಬೇರೆಯವರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಪೊಲೀಸ್ ಜಿಲ್ಲೆಯಲ್ಲಿ ಕಳುವಾಗಿದ್ದ ಹಾಗೂ ಸಿಇಐಆರ್ ತಂತ್ರಾಂಶದಲ್ಲಿ ದೂರು ದಾಖಲಾಗಿದ್ದ ಸುಮಾರು ೫ ಲಕ್ಷ ರು. ಮೌಲ್ಯದ ೨೫ ಮೊಬೈಲ್ ಪೋನ್‌ಗಳನ್ನು ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಿಇಎನ್ ಕ್ರೈಂ ಪೊಲೀಸ್ ಠಾಣೆ ವತಿಯಿಂದ ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಮೊಬೈಲ್ ಪೋನ್ ಕಳವು ಬಗ್ಗೆ ತನಿಖೆ ಹಾಗೂ ವಿಶೇಷ ಕಾರ್ಯಾಚರಣೆ ನಡೆಸಿ, ದೇಶದ ವಿವಿಧ ರಾಜ್ಯಗಳಲ್ಲಿ ಇದ್ದಂತಹ ೨೫ ಕಳವು ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರನ್ನು ಬರಮಾಡಿಕೊಂಡು, ಅವರವರ ಮೊಬೈಲ್ ಪೋನ್‌ಗಳನ್ನು ಕೆಜಿಎಫ್ ಎಸ್‌ಪಿ ಕೆ.ಎಂ.ಶಾಂತರಾಜು ಸಮಕ್ಷಮದಲ್ಲಿ ಹಸ್ತಾಂತರಿಸಿದರು.

ಕೆಜಿಎಫ್ ಎಸ್‌ಪಿ ಕೆ.ಎಂ.ಶಾಂತರಾಜು ಮಾತನಾಡಿ, ಯಾರೇ ಆಗಲಿ ಮೊಬೈಲ್ ಪೋನ್‌ಗಳನ್ನು ಕಳೆದುಕೊಂಡಲ್ಲಿ ಕೂಡಲೇ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸುವಂತೆ ಕರೆ ನೀಡಿದರು. ಕಳುವಾದ ಮೊಬೈಲ್ ಪೋನ್‌ಗಳು ಪತ್ತೆಯಾಗುವುದಲ್ಲದೇ, ಬೇರೆಯವರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದೆಂದು ಅಗತ್ಯ ತಿಳುವಳಿಕೆ ನೀಡಿದರು. ೫ ಲಕ್ಷ ರು. ಮೌಲ್ಯದ ೨೫ ಕಳವು ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದ ಸಿಇಎನ್ ಪಿಐ ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿ ಮಣಿಕಂಠ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು. ಡಿವೈಎಸ್ಪಿ ಎಸ್.ಪಾಂಡುರಂಗ, ಸಿಇಎನ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ, ಉರಿಗಾಂ ಸಿಪಿಐ ಎಸ್.ಟಿ. ಮಾರ್ಕೋಂಡಯ್ಯ, ರಾಬರ್ಟ್‌ಸನ್‌ಪೇಟೆ ಸಿಪಿಐ ಪಿ.ಎಂ. ನವೀನ್, ಆರ್‌ಪಿಐ ವಿ.ಸೋಮಶೇಖರ ಇದ್ದರು.