ಟ್ರ್ಯಾಕ್ಟರ್- ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

| Published : Jan 30 2025, 12:30 AM IST

ಸಾರಾಂಶ

ರಾತ್ರಿ 7 ಗಂಟೆ ಸುಮಾರಿಗೆ ವೈದ್ಯೇಶ್ ತಮ್ಮ ಬೈಕಿನಲ್ಲಿ ಮದ್ದೂರು ಕಡೆಯಿಂದ ಸ್ವಗ್ರಾಮ ನಗರಕೆರೆಗೆ ತೆರಳುತ್ತಿದ್ದರು. ವೈದ್ಯನಾಥಪುರ ಆರ್ಚ್ ಬಳಿ ವರ್ಕ್ ಶಾಪ್ ಗೆ ಹೋಗಲು ಟ್ರ್ಯಾಕ್ಟರ್ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಾಗ ವೈದ್ಯೇಶ್ ಚಾಲನೆ ಮಾಡುತ್ತಿದ್ದ ಬೈಕು ಟ್ರ್ಯಾಕ್ಟರ್ ಗೆ ಗುದ್ದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ನಗರಕೆರೆ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ತಾಲೂಕಿನ ನಗರಕೆರೆ ಗ್ರಾಮದ ಎನ್‌. ಡಿ.ರಾಮಲಿಂಗಯ್ಯ ಪುತ್ರ ವೈದ್ಯೇಶ್ (33) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ವೈದ್ಯೇಶ್ ತಮ್ಮ ಬೈಕಿನಲ್ಲಿ ಮದ್ದೂರು ಕಡೆಯಿಂದ ಸ್ವಗ್ರಾಮ ನಗರಕೆರೆಗೆ ತೆರಳುತ್ತಿದ್ದರು. ವೈದ್ಯನಾಥಪುರ ಆರ್ಚ್ ಬಳಿ ವರ್ಕ್ ಶಾಪ್ ಗೆ ಹೋಗಲು ಟ್ರ್ಯಾಕ್ಟರ್ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಾಗ ವೈದ್ಯೇಶ್ ಚಾಲನೆ ಮಾಡುತ್ತಿದ್ದ ಬೈಕು ಟ್ರ್ಯಾಕ್ಟರ್ ಗೆ ಗುದ್ದಿದೆ. ಅಪಘಾತ ಸಂಭವಿಸಿ ಸುಮಾರು 45 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ವೈದ್ಯೇಶನನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬ್ಯುಲೆನ್ಸ್ ಅಥವಾ ಪೊಲೀಸರು ಸಕಾಲದಲ್ಲಿ ಸ್ಥಳಕ್ಕೆ ಆಗಮಿಸದ ಕಾರಣ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ ಎಂದು ಗ್ರಾಮಸ್ಥರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಂತರ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ವೈದ್ಯೇಶ್ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶಾಸಕ ಕೆ.ಎಂ. ಉದಯ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.