ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನಮ್ಮ ಪಾರಂಪರಿಕ ಕಲೆಯನ್ನು ಆಧುನಿಕ ಭರಾಟೆ ನಡುವೆ ಮತ್ತೊಮ್ಮೆ ಉನ್ನತೀಕರಿಸಬೇಕಿದೆ. ಅದಕ್ಕಿರುವ ಮಾರ್ಗವೇ ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವುದು. ಸಾಮಾನ್ಯ ವ್ಯಕ್ತಿ ಕೌಶಲಗಳನ್ನು ಬೆರೆಸಿದಾಗ ಅದು ಕಲೆಯಾಗಿ ಪರಿವರ್ತನೆ ಆಗುತ್ತದೆ ಎಂದು ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಹೇಳಿದರು.ಸಂಸ್ಕಾರ ಭಾರತಿಯಿಂದ ಗುರುಪೂರ್ಣಿಮೆ ಅಂಗವಾಗಿ ಕಡೂರು ತಾಲೂಕು ಸಖರಾಯಪಟ್ಟಣದ ಹೊಸಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ನಟರಾಜ ಪೂಜನ್ ಹಾಗೂ ಕಲಾವಿದರಿಗೆ ಗುರು ಗೌರವ ಕಾರ್ಯಕ್ರಮದಲ್ಲಿ ‘ನಟರಾಜ ತತ್ತ್ವ ಮತ್ತು ಭಾರತೀಯ ಕಲಾ ಪರಂಪರೆಯಲ್ಲಿ ಗುರುವಿನ ಮಹತ್ವ’ ಕುರಿತು ಮಾತನಾಡಿದರು.ಹೆಜ್ಜೆ ಹಾಕುವುದು ಕುಣಿತವಾದರೆ, ಅದಕ್ಕೆ ಕೌಶಲ ಬೆರೆತರೆ ನೃತ್ಯವಾಗುವುದು. ಹಾಗೆಯೇ ಕೈಯಲ್ಲಿ ಅರಳಿದ ಕಲೆಯೆ ಶ್ರೇಷ್ಠ ವಾಗಿದ್ದು, ಸಮಾಜಕ್ಕೆ ಮತ್ತು ಧರ್ಮಕ್ಕೆ ಆ ಕಲೆಯೆ ಸೇತುವೆ. ಹಿಂದೆ, ವೇದ ಉಪನಿಷತ್ತಿನ ಕಾಲದಲ್ಲಿದ್ದಂತೆ ಹುಡುಕಿ ಹುಡುಕಿ ಸ್ವಾಧ್ಯಾಯ ಅಧ್ಯಾಪನದ ಮೂಲಕ ಕಲೆಯ ಸುಜ್ಞಾನವನ್ನು ಅರಿತು ಪರಂಪರೆಯನ್ನು ಉನ್ನತೀಕರಿಸಬೇಕಾಗಿದೆ ಎಂದು ಹೇಳಿದರು. ಸಖರಾಯಪಟ್ಟಣ ಸಮೀಪದ ಹೊಸಹಳ್ಳಿಯ ಪಾರಂಪರಿಕ ಮೂರ್ತಿ ಶಿಲ್ಪಿಗಳಾದ ಮಹದೇವಪ್ಪ ಮತ್ತು ಮಲ್ಲಿಕಾರ್ಜುನ ಸಹೋದರರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು. ಗೌರವಾಧ್ಯಕ್ಷ ನಾಯಕ್ ಸಚ್ಚಿದಾನಂದ ಸನ್ಮಾನಿತರ ಜೊತೆ ಕಲೆಯ ಕುರಿತು ಸಂವಾದ ನಡೆಸಿದರು. ಪ್ರಮುಖರಾದ ದಿನೇಶ್ ಪಟೇಲರು ಅಧ್ಯಕ್ಷತೆ ವಹಿಸಿದ್ದರು. ಶಶಿರೇಖಾ ಪ್ರಾರ್ಥಿಸಿ, ಗಾಯಕಿ ರೇಖಾ ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಚಂದ್ರಮೌಳಿ, ವಿಶ್ವನಾಥ, ಪ್ರೇಮಕುಮಾರ್, ಗೋಪಾಲಕೃಷ್ಣ, ಸುಮಾ ಪ್ರಸಾದ್, ರಾಮಪ್ರಸಾದ್ ಹಾಗೂ ಹೊಸಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.15 ಕೆಸಿಕೆಎಂ 3ಸಖರಾಯಪಟ್ಟಣ ಸಮೀಪದ ಹೊಸಹಳ್ಳಿ ಪಾರಂಪರಿಕ ಮೂರ್ತಿ ಶಿಲ್ಪಿಗಳಾದ ಮಹದೇವಪ್ಪ ಮತ್ತು ಮಲ್ಲಿಕಾರ್ಜುನ ಸಹೋದರರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.