ಸಾರಾಂಶ
ತಾಲೂಕು ಕೇಂದ್ರ ಶಿರಹಟ್ಟಿಯಲ್ಲಿ ಬಸ್ ನಿಲ್ದಾಣದ ನೆಹರು ವೃತ್ತ ಹಾಗೂ ಮಾರುಕಟ್ಟೆಯ ಬಸವೇಶ್ವರ ವೃತ್ತದ ವರೆಗೆ ಸಂಚರಿಸಬೇಕಾದರೆ ಹರಸಾಹಸ ಪಡಬೇಕಾಗಿದೆ.
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ:ತಾಲೂಕು ಕೇಂದ್ರ ಶಿರಹಟ್ಟಿಯಲ್ಲಿ ಬಸ್ ನಿಲ್ದಾಣದ ನೆಹರು ವೃತ್ತ ಹಾಗೂ ಮಾರುಕಟ್ಟೆಯ ಬಸವೇಶ್ವರ ವೃತ್ತದ ವರೆಗೆ ಸಂಚರಿಸಬೇಕಾದರೆ ಹರಸಾಹಸ ಪಡಬೇಕಾಗಿದೆ.
ನಿತ್ಯ ಸರ್ಕಾರಿ ಕೆಲಸ, ವ್ಯಾಪಾರ ವಹಿವಾಟಿಗೆ, ತಾಲೂಕು ಆಸ್ಪತ್ರೆ ಸೇರಿದಂತೆ ಫಕೀರೇಶ್ವರ ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಿಂದ ಸಂಚಾರ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಾರ್ವಜನಿಕರು ರಸ್ತೆ ನಿಯಮ ಪಾಲಿಸದ ಕಾರಣ ಅಧಿಕ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಚಾಲಕರು, ಪಾದಚಾರಿಗಳು ಕೂಡ ನಿಯಮ ಪಾಲಿಸದೇ ಇರುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ.ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ, ಕಟ್ಟುನಿಟ್ಟಿನ ಕ್ರಮ, ದಂಡ ವಸೂಲಿ ಮಾಡಿದರೂ ಬೈಕ್ ಮೇಲೆ ಮೂರ್ನಾಲ್ಕು ಜನ ಕುಳಿತು ಎರ್ರಾಬಿರ್ರಿ ಸಂಚರಿಸುತ್ತಾರೆ. ಆಟೋರಿಕ್ಷಾ ಮತ್ತಿತರ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.ಪೊಲೀಸ್ ಇಲಾಖೆಯ ಹರಸಾಹಸ:ಬೆಳಗ್ಗೆಯಿಂದ ಸಂಜೆವರೆಗೂ ಪೊಲೀಸ್ ಸಿಬ್ಬಂದಿ ಸಂಚಾರ ನಿರ್ವಹಣೆ ಮಾಡುತ್ತಾರೆ. ನೆಹರು ವೃತ್ತ ಮತ್ತು ಬಸವೇಶ್ವರ ವೃತ್ತ ಮಾರ್ಗವಾಗಿ ಮಾರುಕಟ್ಟೆಗೆ ಪ್ರಯಾಣಿಸುವ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ರಸ್ತೆ ಎರಡು ಬದಿಗಳಲ್ಲಿ ವಾಹನ ನಿಲುಗಡೆಗೆ ನಾಮಫಲಕ ಅಳವಡಿಸಿ ಎಷ್ಟೋ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಿದರೂ ಜನತೆ ನಿಯಮ ಪಾಲಿಸುತ್ತಿಲ್ಲ. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಾರೆ. ಇದರ ಬಗ್ಗೆ ಸ್ವತಃ ಪಿಎಸ್ಐ ಚನ್ನಯ್ಯ ದೇವೂರ ಅವರು ರಸ್ತೆಯುದ್ದಕ್ಕೂ ಸಂಚರಿಸಿ ಜನರಲ್ಲಿ ತಿಳಿ ಹೇಳಿ ಸಂಚಾರಿ ನಿಯಮ ಪಾಲಿಸುವಂತೆ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಎಚ್ಚರಿಸಿದರೂ ಜನ ಮಾತ್ರ ಕ್ಯಾರೆ ಎನ್ನುತ್ತಿಲ್ಲ.ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ನಾಮಪಲಕ ಅಳವಡಿಸಲಾಗಿದೆ. ಸಾಕಷ್ಟು ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿವೆ. ಪೊಲೀಸ್ ಇಲಾಖೆ ವತಿಯಿಂದ ಎಷ್ಟೇ ಬಿಗಿ ಕ್ರಮ ತೆಗೆದುಕೊಂಡರೂ ಪೊಲೀಸ್ ವ್ಯವಸ್ಥೆಯನ್ನು ಎಷ್ಟೇ ಬಿಗಿಗೊಳಿಸಿದರೂ ಜನ ಮಾತ್ರ ಸಹಕರಿಸದೇ ಇರುವುದು ಬಹಳ ಬೇಸರ ತರುತ್ತಿದೆ. ಅಂಗಡಿ ಮಾಲೀಕರು ಕೂಡ ವಾಹನ ನಿಲುಗಡೆಯ ಕುರಿತು ಸವಾರರಿಗೆ ತಿಳಿಸಬೇಕು. ಇಲ್ಲದೇ ಇದ್ದರೆ ಇದೇ ವ್ಯವಸ್ಥೆ ಮುಂದುವರೆದರೆ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಿಎಸ್ಐ ಚನ್ನಯ್ಯ ದೇವೂರ ಹೇಳಿದ್ದಾರೆ.